ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂಬುದನ್ನು ಪಕ್ಷ ಬಯಸಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಪೈಲಟ್, ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಮತ್ತು ಸ್ವೀಕಾರಾರ್ಹ. ಹಿಂದೂ ದೇಗುಲ, ಶ್ರೀರಾಮ ಮಂದಿರ ನಿರ್ಮಾಣದ ಮೂಲಕ ಈ ವಿಷಯದ ಬಗೆಗಿದ್ದ ರಾಜಕೀಯ ಮುಕ್ತಾಯಗೊಳ್ಳಲಿದೆ ಎಂದಯ ಪೈಲಟ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: NCPಯ 54 ಮತ್ತು 11 ಸ್ವತಂತ್ರ ಶಾಸಕರ ಬೆಂಬಲವಿದೆ ಎಂದ ಬಿಜೆಪಿ
ಸುಪ್ರೀಂಕೋರ್ಟ್ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಸುಪ್ರೀಂ ತೀರ್ಪನ್ನು ಸಂತೋಷದಿಂದ ಸ್ವೀಕರಿಸಿ, ಗೌರವಿಸಬೇಕು. ಕಳೆದ 30 ವರ್ಷಗಳಿಂದ ಅಯೋಧ್ಯೆ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿತ್ತು. ಈಗ ಸುಪ್ರೀಂ ನಿರ್ಧಾರದೊಂದಿಗೆ ಒಂದು ವಿಷಯ ಮುಕ್ತಾಯ ಕಂಡಿದೆ. ಇನ್ನು ಇದೇ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದರಿಂದ ಯಾರಿಗೂ ಉಪಯೋಗವಾಗುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಯೋಧ್ಯೆಯಲ್ಲಿ ಭವ್ಯವಾದ ದೇಗುಲ ನಿರ್ಮಾಣವಾಗಲಿ ಎಂದು ಕಾಂಗ್ರೆಸ್ ಕೂಡ ಬಯಸುತ್ತದೆ ಎಂದು ಹೇಳಿದ್ದಾರೆ.
ಈ ಮೂಲಕ ಕಾಂಗ್ರೆಸ್ ಹಿಂದುತ್ವದ ಕುರಿತು ಮೃದು ಧೋರಣೆ ತಾಳಿದೆ ಎಂಬುದಕ್ಕೆ ಪೈಲಟ್ ಮಾತು ಉದಾಹರಣೆಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಕಾಂಗ್ರೆಸ್ ಮುಖಂಡರು ತದ್ವಿರುದ್ಧ ಹೇಳಿಕೆ ನೀಡಿದ್ದರು. ಸ್ಥಳೀಯ ಚುನಾವಣೆ ಫಲಿತಾಂಶ ಬಿಜೆಪಿಗೆ ಪಾಠ ಕಲಿಸಲಿದೆ. ಕಾಶ್ಮೀರ ವಿಶೇಷಾಧಿಕಾರ ರದ್ದು, ಅಯೋಧ್ಯೆ ವಿಚಾರದಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ರಾಜ್ಯ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದರು.