ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾದ ಘಟನೆ ಬುಧವಾರ ನಡೆದಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 78 ಜನ ಅಸ್ವಸ್ಥರಾಗಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಎಸ್ಪಿ ಪರಶುರಾಮ್ ಅವರು, ”ಪ್ರಕರಣ ದಾಖಲಿಸಲಾಗಿದ್ದು, ಕಲುಷಿತ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ವಾಟರ್ಮ್ಯಾನ್ ಸುರೇಶ್ ಅವರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸುರೇಶ್ಗೆ ತಿಳಿಸಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಮಂಜುಳಾ ಎಂಬುವವರು ಮೃತಪಟ್ಟ ಬಳಿಕ ಅವರ ಮೃತದೇಹವನ್ನು ಪರೀಕ್ಷೆ ನಡೆಸಿದ ಬಳಿಕ ಕವಾಡಿಗರಹಟ್ಟಿಗೆ ಮೃತದೇಹ ತರಲಾಯಿತು. ಮೃತ ಮಹಿಳೆಯ ಸಂಬಂಧಿಕರು, ಬಡಾವಣೆಯ ಜನರ ಆಕ್ರೋಶ ಕಟ್ಟೆಯೊಡೆಯಿತು. ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಪಟ್ಟು ಹಿಡಿದು ಬುಧವಾರ ಪ್ರತಿಭಟನೆ ಆರಂಭಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದಂತೆ ಪರಿಹಾರವನ್ನು ಕೂಡಲೇ ವಿತರಣೆ ಮಾಡಬೇಕು. ಎಂದು ಒತ್ತಾಯಿಸಿದರು. ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾದರು ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರ ಮನವೊಲಿಸಿದರು.
ಪೋಕ್ಸೊ ಕೇಸ್ ದಾಖಲಿಸಿದ ದ್ವೇಷಕ್ಕೆ ನೀರಿಗೆ ವಿಷ ಬೆರೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ದಲಿತ ಯುವಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವ ದ್ವೇಷಕ್ಕೆ ನೀರಿನ ಟ್ಯಾಂಕ್ಗೆ ವಿಷ ಬೆರೆಸಿದ್ದಾರೆ ಎನ್ನುವ ಆರೋಪ ಮಾಡಲಾಗುತ್ತಿದೆ. ಮೃತ ಮಂಜುಳಾ ಅವರ ಕುಟುಂಬಸ್ಥರು ವಾಟರ್ಮ್ಯಾನ್ ಟ್ಯಾಂಕ್ನಲ್ಲಿ ವಿಷ ಹಾಕಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದರು.
ಕಲುಷಿತ ನೀರು ಸೇವಿಸಿ ಒಟ್ಟು 3 ಮಂದಿ ಮೃತಪಟ್ಟಿದ್ದು, 42 ಜನ ಅಸ್ವಸ್ಥಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಕವಾಡಿಗರಹಟ್ಟಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದೇವೆ. ಕುಡಿಯುವ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಕವಾಡಿಗರಹಟ್ಟಿಯಲ್ಲಿ ತಾತ್ಕಾಲಿಕವಾಗಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಮಂಜುಳಾ ಸಾವಿನ ಕಾರಣ ಏನೆಂಬುದು ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿರುವುದರಿಂದ ಕವಾಡಿಗರಹಟ್ಟಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಳವೆ ಭಾವಿ ನೀರನ್ನು ಮನೆ-ಮನೆಗೂ ಸರಬರಾಜು ಮಾಡಲಾಗುತ್ತಿದೆ. ಎರಡು ದಿನಗಳಿಂದ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡ ನೀರನ್ನು ಚೆಲ್ಲುವಂತೆ ನಗರಸಭೆ ಸಿಬ್ಬಂದಿ ಜನರ ಮನವೊಲಿಸುತ್ತಿದ್ದಾರೆ. ಬಡಾವಣೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಕವಾಡಿಗರಹಟ್ಟಿಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಂಗಳವಾರ ರಾತ್ರಿ ಕಲ್ಲು ಬೀಸಲಾಗಿದೆ. ಘಟಕದ ಗಾಜು ಪುಡಿಯಾಗಿದ್ದು ಆಕ್ರೋಶಗೊಂಡ ಸ್ಥಳೀಯರು ಗಾಜು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಜೂನ್ 10ರಂದು ಕುಷ್ಟಗಿಯ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 9 ವರ್ಷದ ಹುಡುಗಿ ನಿರ್ಮಲಾಳ ಸಾವಿಗೀಡಾಗಿದ್ದಳು. ಈ ಭಾಗದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಅಧಿಕವಾಗಿದೆ ಎಂದು ಇಲ್ಲಿಯ ವೈದ್ಯರೇ ಹೇಳುತ್ತಾರೆ.
ಇದನ್ನೂ ಓದಿ: ಕಲುಷಿತ ನೀರಿಗೆ ನಾಲ್ವರು ಬಲಿ; ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಕಲ್ಯಾಣ ಕರ್ನಾಟಕ ಆಡಳಿತ?