ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಪ್ರಕರಣದಲ್ಲಿ ವಿವಾದದಿಂದ ಗುರುತಿಸಲ್ಪಟ್ಟಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಜೊತೆಗೆ ಐಆರ್ಎಸ್ ಅಧಿಕಾರಿಯಾಗಿರುವ ಸಮೀರ್ ವಾಂಖೆಡೆ ಅವರ ಅಧಿಕಾರಾವಧಿ ಡಿಸೆಂಬರ್ 31 ರಂದು ಕೊನೆಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಮೀರ್ ವಾಂಖೆಡೆ, 2008-ಬ್ಯಾಚ್ನ ಭಾರತೀಯ ಕಂದಾಯ ಸೇವಾ ಅಧಿಕಾರಿ, ಸೆಪ್ಟೆಂಬರ್ 2020 ರಿಂದ NCB ಗೆ ಡೆಪ್ಯುಟೇಶನ್ನಲ್ಲಿದ್ದರು. ಪ್ರಸ್ತುತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂಬೈ ವಲಯ ನಿರ್ದೇಶಕರಾಗಿದ್ದಾರೆ. ಈ ಹಿಂದೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ನಂತರ ಬಾಲಿವುಡ್ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ಡ್ರಗ್ ರಾಕೆಟ್ ವಿರುದ್ಧ ಎನ್ಸಿಬಿಯ ಮುಂಬೈ ವಲಯ ನಿರ್ದೇಶಕರಾಗಿ ಸಮೀರ್ ವಾಂಖೆಡೆ ತನಿಖೆ ನಡೆಸುತ್ತಿದ್ದರು.
ಇದನ್ನೂ ಓದಿ: ತಮ್ಮ ವಿರುದ್ಧದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ: ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮನವಿ
ಈ ವರ್ಷದ ಅಕ್ಟೋಬರ್ನಲ್ಲಿ ಸಮೀರ್ ವಾಂಖೆಡೆ ನೇತೃತ್ವದ ತಂಡವು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡರು. ಈ ದಾಳಿಯಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರರನ್ನು ಬಂಧಿಸಿದ್ದರು.
ಆದರೆ ದಾಳಿಯ ಸಮಯದಲ್ಲಿ ಎನ್ಸಿಬಿ ದಾಖಲಿಸಿದ್ದ ಸ್ವತಂತ್ರ ಸಾಕ್ಷಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಜೊತೆಗೆ ಎನ್ಸಿಬಿ ಅಧಿಕಾರಿಗಳು ನಟ ಶಾರುಖ್ ಖಾನ್ರಿಂದ ಹಣವನ್ನು ಸುಲಿಗೆ ಮಾಡುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್, ಸಮೀರ್ ವಾಂಖೆಡೆ ಅವರನ್ನು ಗುರಿಯಾಗಿಸಿಕೊಂಡು, ಆತ ಮುಸ್ಲಿಮರಾಗಿ ಹುಟ್ಟಿದ್ದರೂ ನಕಲಿ ಜಾತಿ ಪ್ರಮಾಣಪತ್ರವನ್ನು ನೀಡುವ ಮೂಲಕ ಪರಿಶಿಷ್ಟ ಜಾತಿಯ ಕೋಟಾದಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ಈ ಆರೋಪವನ್ನು ಸಮೀರ್ ವಾಂಖೆಡೆ ನಿರಾಕರಿಸಿದ್ದಾರೆ. ಜೊತೆಗೆ ವಾಂಖೆಡೆ ಅವರ ತಂದೆ ಎನ್ಸಿಪಿ ನಾಯಕ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸದ್ಯ ಸಮೀರ್ ವಾಂಖೆಡೆ ಅವರ ಎನ್ಸಿಬಿ ಡೆಪ್ಯುಟೇಶನ್ ಮುಗಿದ ನಂತರ ಅವರನ್ನು ಎಲ್ಲಿ ನಿಯೋಜಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.