ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ 280 ಜನರು ಸಾವನ್ನಪ್ಪಿದ್ದಾರೆ. “ದುರಂತ ಸಂಭವಿಸುವ ಕೆಲವು ನಿಮಿಷಗಳ ಮೊದಲು ಕೋರಮಂಡಲ್ ಎಕ್ಸ್ಪ್ರೆಸ್ ತಪ್ಪಾದ ಹಳಿಯಲ್ಲಿ ಚಲಿಸುತ್ತಿತ್ತು. ಈ ಅವಘಡ ಮಾನವ ನಿರ್ಮಿತ ಪ್ರಮಾದದಿಂದಾಗಿರಬಹುದು” ಎಂದು ರೈಲ್ವೆ ಸಿಗ್ನಲಿಂಗ್ ಕಂಟ್ರೋಲ್ ರೂಂನ ಆರಂಭಿಕ ವರದಿಗಳು ತಿಳಿಸಿವೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಖಚಿತ ಕಾರಣವು ಸಂಪೂರ್ಣ ತನಿಖೆಯ ನಂತರವೇ ತಿಳಿದುಬರುತ್ತದೆ.
“ರೈಲ್ವೆಯ ಖರಗ್ಪುರ ವಿಭಾಗದ ಸಿಗ್ನಲಿಂಗ್ ಕಂಟ್ರೋಲ್ ರೂಮ್ನ ವೀಡಿಯೊ ಪ್ರಕಾರ, ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್ ಶುಕ್ರವಾರ ಸಂಜೆ 6.55ಕ್ಕೆ ಬಹಾನಗರ್ ಬಜಾರ್ ನಿಲ್ದಾಣವನ್ನು ದಾಟಿತ್ತು. ನಂತರ ಮುಖ್ಯ ಮಾರ್ಗದ ಬದಲಿಗೆ ಗೂಡ್ಸ್ ರೈಲು ನಿಲುಗಡೆ ಮಾಡಿದ ಲೂಪ್ ಲೈನ್ನಲ್ಲಿ ಚಲಿಸುತ್ತಿತ್ತು” ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಮುಖ್ಯ ಮಾರ್ಗಗಳು ಮತ್ತು ಎರಡು ಲೂಪ್ ಲೈನ್ಗಳು ಸೇರಿದಂತೆ ನಾಲ್ಕು ರೈಲ್ವೆ ಹಳಿಗಳಿಗೆ ಸಂಬಂಧಿಸಿದ ದೃಶ್ಯಾವಳಿಗಳನ್ನು ಗಮನಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ಹೇಳಿಕೊಂಡಿದೆ.
ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿ ತಪ್ಪಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ಕೆಲವೇ ನಿಮಿಷಗಳಲ್ಲಿ ಹೌರಾಕ್ಕೆ ಹೋಗುವ ಯಶವಂತನಗರ ಎಕ್ಸ್ಪ್ರೆಸ್ ಎದುರು ಭಾಗದಿಂದ ಬರುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
“ಇದು ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು ಎಂಬುದು ರೈಲ್ವೆ ಮಂಡಳಿಯು ಆದೇಶಿಸಿದ ವಿವರವಾದ ತನಿಖೆಯಲ್ಲಿ ಕಂಡುಬರುತ್ತದೆ. ಆದರೆ, ಮೇಲ್ನೋಟಕ್ಕೆ ಇದು ಮಾನವ ನಿರ್ಮಿತ ಅವಘಡ ಎಂದು ತೋರುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಅದೇ ಅಧಿಕಾರಿಯ ಹೇಳುವ ಪ್ರಕಾರ 1995ರಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಇದೇ ರೀತಿಯ ಅವಘಡ ಸಂಭವಿಸಿತ್ತು. ಆ ಸಮಯದಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಸುಮಾರು 350 ಜನರು ಸಾವನ್ನಪ್ಪಿದರು. ರಕ್ಷಣಾ ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿತ್ತು.
ಒಡಿಸ್ಸಾಕ್ಕೆ ಇಂದು ಪ್ರಧಾನಿ ಭೇಟಿ
ಒಡಿಸ್ಸಾ ರಾಜ್ಯದಲ್ಲಿ ನೂರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಒಡಿಶಾಕ್ಕೆ ಇಂದು ಭೇಟಿ ನೀಡಲಿದ್ದಾರೆ.
“ಪ್ರಧಾನಿ ಮೋದಿ ಅವರು ಮೊದಲು ಅಪಘಾತದ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ನಂತರ ಸಂತ್ರಸ್ತರು ದಾಖಲಾಗಿರುವ ಆಸ್ಪತ್ರೆಗೆ ತೆರಳಲಿದ್ದಾರೆ” ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಇದನ್ನೂ ಓದಿರಿ: ರೈಲು ದುರಂತ: ಗಾಯಾಳುಗಳ ಚಿಕಿತ್ಸೆಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಜನ
ಪ್ರಧಾನಿ ಮೋದಿ ಅವರು ಇಂದು ಗೋವಾದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದರು. ಒಡಿಶಾದಲ್ಲಿ ನಡೆದ ದುರಂತದ ನಂತರ ವಂದೇ ಭಾರತ್ ಚಾಲನೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಒಡಿಶಾದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ಮೋದಿಯವರು ಹಿರಿಯ ರೈಲ್ವೇ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನೂ ಕರೆದಿದ್ದಾರೆ.
ಮೂರು ರೈಲುಗಳ ಅಪಘಾತದ ಸುಮಾರು 16 ಗಂಟೆಗಳ ನಂತರ, ರಕ್ಷಣಾ ಕಾರ್ಯಾಚರಣೆಯು ಶನಿವಾರ ಪೂರ್ಣಗೊಂಡಿದೆ ಎಂದು ಘೋಷಿಸಲಾಗಿದೆ. 280 ಜನರು ಸಾವನ್ನಪ್ಪಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಯಿತು. ಸುಮಾರು 900 ಪ್ರಯಾಣಿಕರಿಗೆ ಸಣ್ಣ ಮತ್ತು ತೀವ್ರ ಗಾಯತರನಾದ ಗಾಯಗಳಾಗಿದ್ದು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.