ಉತ್ತರ ಪ್ರದೇಶದಲ್ಲಿ ಮುಂದಿನ ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿವೆ. ಪ್ರಧಾನಿ ಮೋದಿ ಕೂಡಾ ಇತ್ತೀಚೆಗೆ ಹಲವು ಬಾರಿ ಯುಪಿಗೆ ತೆರಳಿ ಭಾಷಣ ಮಾಡಿದ್ದರು. ಈ ಮಧ್ಯೆ ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.
ಈ ಬಗ್ಗೆ ಕಾಂಗ್ರೆಸ್ ಮೊದಲ ಬಾರಿಗೆ ನಿರ್ಧಾವನ್ನು ತೆಗೆದುಕೊಂಡು ತನ್ನ ಪಿಂಕ್ ಮ್ಯಾರಥಾನ್ ಮತ್ತು ರ್ಯಾಲಿಗಳನ್ನು ರದ್ದುಗೊಳಿಸಿತ್ತು. ಇದರ ನಂತರ ಬಿಜೆಪಿ ಕೂಡಾ ಜನವರಿ 9 ರಂದು ಲಕ್ನೋದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಉದ್ದೇಶಿತ ರ್ಯಾಲಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ಮಧ್ಯೆ ರಾಜ್ಯದ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ ಕೂಡಾ ಜನವರಿ 7, 8 ಮತ್ತು 9 ರಂದು ನಿಗದಿಯಾಗಿದ್ದ ವಿಜಯ ರಥಯಾತ್ರೆಯನ್ನು ರದ್ದುಗೊಳಿಸಿದೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯಾತ್ರೆಯನ್ನು ಮುನ್ನಡೆಸಿ, ಗೊಂಡಾ, ಬಸ್ತಿ ಮತ್ತು ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದರು.
ಮುಂಬರುವ ದಿನಗಳಲ್ಲಿ ಕೊರೊನಾ ಹರಡುವಿಕೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನವರಿ 9 ರ ನಂತರ ನಿಗದಿಪಡಿಸಲಾದ ಸಭೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಮಾಜವಾದಿ ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಯುಪಿಯ ಸುಗಂಧ ವ್ಯಾಪಾರಿಯ ಮನೆಗಳು, ಕಾರ್ಖಾನೆಗಳಿಗೆ ಐಟಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿಯ ಆಸ್ತಿಪಾಸ್ತಿಗಳನ್ನು ಇಲಾಖೆ ವಶಪಡಿಸಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಖಿಲೇಶ್ ಯಾದವ್, ಬಿಜೆಪಿ ಆಡಳಿತವು ಕಣ್ತಪ್ಪಿನಿಂದಾಗಿ ತಮ್ಮದೇ ಜನರ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದರು. ಇದರ ನಂತರ ಐಟಿ ಇಲಾಖೆಯು ಸಮಾಜವಾದಿ ಪಕ್ಷದ ಎಂಎಲ್ಸಿಯ ಮನೆ ಮೇಲೆ ಕೂಡಾ ದಾಳಿ ನಡೆಸಿತ್ತು.
ಇದನ್ನು ಓದಿ:ಭದ್ರತಾ ಲೋಪ: ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಪಂಜಾಬ್ ಸರ್ಕಾರದಿಂದ ತನಿಖಾ ತಂಡ…10 ಪಾಯಿಂಟ್ಸ್