Homeಕರ್ನಾಟಕವಿಜಯಪುರ: ಮುಸ್ಲಿಮರ ನರಹತ್ಯೆಗೆ ಎಬಿವಿಪಿ ಸದಸ್ಯೆಯಿಂದ ಕರೆ; ವಿಡಿಯೊ ವೈರಲ್‌

ವಿಜಯಪುರ: ಮುಸ್ಲಿಮರ ನರಹತ್ಯೆಗೆ ಎಬಿವಿಪಿ ಸದಸ್ಯೆಯಿಂದ ಕರೆ; ವಿಡಿಯೊ ವೈರಲ್‌

- Advertisement -
- Advertisement -

ಸಂಘಪರಿವಾರದ ಸದಸ್ಯೆಯೊಬ್ಬರು ಮುಸ್ಲಿಮರ ನರಹತ್ಯೆಗೆ ವಿಜಯಪುರ ಜಿಲ್ಲೆಯಲ್ಲಿ ಕರೆ ನೀಡಿರುವ ವಿಡಿಯೊ ವೈರಲ್‌ ಆಗಿದೆ. ಹರಿದ್ವಾರದ ಧರ್ಮ ಸಂಸತ್‌ನಲ್ಲಿ ನರಹತ್ಯೆಗೆ ಕರೆ ನೀಡಲಾಗಿತ್ತು. ಅಂತಹದ್ದೇ ಪ್ರಕರಣ ಈಗ ಕರ್ನಾಟಕದಲ್ಲೂ ನಡೆದಿದೆ ಎಂದು ಆರೋಪಿಸಲಾಗಿದೆ.

ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಖಂಡಿಸಿ ವಿಜಯಪುರ ನಗರದಲ್ಲಿ ಬಜರಂಗದಳ, ವಿಎಚ್‌ಪಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯಪುರ ಎಬಿವಿಪಿ ಪ್ರತಿನಿಧಿ ಪೂಜಾ ವೀರಶೆಟ್ಟಿಯವರು ಕೋಮು ಸೌಹಾರ್ದತೆ ಕದಡಲು ಯತ್ನಿಸಿದ್ದಾರೆ.

“ನಾವು ಭಾರತದವರು ಎಂಥವರು ಎಂದರೆ ನೀರು ಬೇಡ ಎಂದರೆ ಪಾನಕ ಕೊಡ್ತೀವಿ. ಹಾಲು ಬೇಡ ಅಂದರೆ ಮಜ್ಜಿಗೆ ಕೊಡ್ತೀವಿ. ನೀವು ಏನಾದರೂ ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ಶಿವಾಜಿ ಕೈಯಲ್ಲಿನ ಕತ್ತಿ ತಗೊಂಡು ಇಂಚಿಂಚೆ ಕಡಿಯುತ್ತೇವೆ” ಎಂದು ಪ್ರಚೋದನಕಾರಿಯಾಗಿ ಪೂಜಾ ಮಾತನಾಡುತ್ತಾರೆ.

“ಹರ್ಷಾ ಕೊಲೆ ಆರೋಪಿಗಳನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿರುವುದು ಖುಷಿ ನೀಡಿದೆ. ಆದರೆ, ಬರಿ ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ 24 ತಾಸು ಅಲ್ಲ, ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಆರು ಜನ ಅಲ್ಲ, ಅರವತ್ತು ಸಾವಿರ ಹಿಜಾಬ್‌ಗಳನ್ನು …” ಎಂದು ಪ್ರಚೋದಿಸಿರುವುದನ್ನು ಕಾಣಬಹುದು. (ಹೀಗೆ ಹೇಳಿದ ತಕ್ಷಣ ಪಕ್ಕದಲ್ಲಿದ್ದ ಮಹಿಳೆಯೊಬ್ಬರು ಪೂಜಾ ವೀರಶೆಟ್ಟಿಯರಿಗೆ ಭಾಷಣ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಾರೆ. ಪೂಜಾ ಭಾಷಣ ಕೇಳಿ ಪ್ರತಿಭಟನೆಯಲ್ಲಿದ್ದವರು ಉದ್ಘಾರ ಮಾಡುತ್ತಾರೆ).

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ಸಂಬಂಧ ವಿವಾದ ಸೃಷ್ಟಿಸಲಾಗಿದೆ. ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಂದಾಗಿ ವಿವಾದ ತೀವ್ರ ಸ್ವರೂಪ ಪಡೆದಿದೆ. ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕೋಮು ಶಕ್ತಿಗಳು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡುತ್ತಿವೆ.

ಪೂಜಾ ವೀರಶೆಟ್ಟಿ ವಿಡಿಯೊ ವೈರಲ್‌ ಆಗಿದ್ದು, ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕರಾದ ಜುಬೈರ್ ಟ್ವೀಟ್‌ ಮಾಡಿದ್ದಾರೆ. “ಡಿಸೆಂಬರ್ 2021ರಲ್ಲಿ ಹರಿದ್ವಾರದಲ್ಲಿ ನರಮೇಧದ ಕರೆ ನಂತರ, ಬಲಪಂಥೀಯ ಗುಂಪಿನಿಂದ ಕರ್ನಾಟಕದಲ್ಲಿ ಮುಸ್ಲಿಂ ಜನಾಂಗೀಯ ಹತ್ಯೆಗೆ ಮತ್ತೊಂದು ಕರೆಯನ್ನು ಬಹಿರಂಗವಾಗಿ ನೀಡಲಾಗಿದೆ” ಎಂದು ಅವರು ವಿಷಾದಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ದುರ್ಗಾ ವಾಹಿನಿ ಮುಖಂಡರಾದ ಮಂಚಾಲೇಶ್ವರಿ ತೋಣಶ್ಯಾಳ ‘ಕೇಂದ್ರ, ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರಗಳಿದ್ದರೂ ಹಿಂದೂಗಳು ಬೀದಿಯಲ್ಲಿ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ನಾಚಿಕೆ ಸಂಗತಿಯಾಗಿದೆ‘ ಎಂದಿದ್ದಾರೆ.

‘ಹಿಂದೂ ಯುವಕರನ್ನು ಪೋಸ್ಟ್‌ಮಾರ್ಟ್ಂಗೆ ಹಚ್ಚಿದ ಮತಾಂಧರ ಪೋಸ್ಟ್‌ಮಾರ್ಟ್ಂ ಆಗಬೇಕು. ಆಗ ಹಿಂದೂಗಳಿಗೆ ನ್ಯಾಯ ಸಿಗುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. “ರಾಜ್ಯದಲ್ಲಿ ಹಿಂದೂಗಳ ಒಂದೇ ಒಂದು ಕೂದಲು ಕೊಂಕಾಗದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೋಡಿಕೊಳ್ಳುವ ಭರವಸೆ ನೀಡಬೇಕು. ನಿಮಗೆ ಆ ತಾಕತ್ತು, ದಮ್‌ ಇಲ್ಲವಾದರೆ ಒಮ್ಮೆ ಉತ್ತರಪ್ರದೇಶಕ್ಕೆ ಹೋಗಿ ಯೋಗಿ ಆದಿತ್ಯಾನಾಥ ಅವರ ಬಳಿ ತರಬೇತಿ ಪಡೆದುಕೊಂಡು ಬನ್ನಿ” ಎಂದು ಸಲಹೆ ನೀಡಿದ್ದಾರೆ.

“ಹಿಂದೂಗಳು ರಕ್ತ ಹರಿಸಿ ನಿಮ್ಮನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿರುವುದು ಆಪರೇಷನ್‌ ಕಮಲ ಮಾಡಲಿ ಎಂದಲ್ಲ. ನಮ್ಮ ಆಸೆ ಬಿಜೆಪಿ ಬಾವುಟ ಹಾರಿಸಬೇಕು ಎಂಬುದಲ್ಲ, ಕೇಸರಿ ಬಾವುಟ ಹಾರಿಸಬೇಕು ಎಂಬುದಾಗಿತ್ತು” ಎಂದು ತಿಳಿಸಿದ್ದಾರೆ.

ಪೊಲೀಸರಿಂದ ಕ್ರಮ ಯಾವಾಗ?

ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿಗೆ ಸಂಬಂಧಿಸಿದಂತೆ ಒಂದು ಟ್ವೀಟ್‌ ಮಾಡಿದ ಕಾರಣಕ್ಕೆ ನಟ ಚೇತನ್ ಅಹಿಂಸಾ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಯಿತು. “ಚೇತನ್‌ ಅಹಿಂಸಾ ಅವರು ಕೋಮುಗಳ ನಡುವೆ ಗಲಭೆಗೆ ಪ್ರಚೋದಿಸಿದ್ದಾರೆ, ನ್ಯಾಯಾಂಗದ ಮೇಲೆ ಅಪನಂಬಿಕೆ ಉಂಟು ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಬಹಿರಂಗವಾಗಿ ಒಂದು ಸಮುದಾಯದ ವಿರುದ್ಧ ದ್ವೇಷ ಕಾರುತ್ತಿರುವವರ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಜರುಗಿಸಿದೆ” ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ.

ವಿಜಯಪುರದಲ್ಲಿ ನಡೆದಿರುವ ಸಂಬಂಧ ಯಾವುದಾದರೂ ಕ್ರಮ ಜರುಗಿಸಲಾಗಿದೆ ಎಂಬುದನ್ನು ತಿಳಿಯಲು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್‌ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದೆ. ಪೊಲೀಸ್ ವರಿಷ್ಠಾಧಿಕಾರಿಯವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.


ಇದನ್ನೂ ಓದಿರಿ: ನಟ, ಸಾಮಾಜಿಕ ಹೋರಾಟಗಾರ ಚೇತನ್‌ಗೆ ಜಾಮೀನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...