ದೇಶದಲ್ಲಿ ಕೋವಿಡ್ ಎರಡನೇ ಅಲೆಯಿಂದಾಗಿ ದೈನಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿದಿನ 3 ಲಕ್ಷ ದಾಟುತ್ತಿದೆ. ಬೆಡ್ ಸಿಗದೆ, ಆಕ್ಸಿಜನ್ ಇಲ್ಲದೆ ಬಡವರು ಮತ್ತು ಮಧ್ಯಮವರ್ಗ ಅಸಹಾಯಕತೆಯಲ್ಲಿ ಆಸ್ಪತ್ರೆಗಳ ಮುಂದೆ, ಚಿತಾಗಾರಗಳಲ್ಲಿ ಕಾಯುತ್ತಿವೆ. ಆದರೆ ಕಳೆದ ವಾರದಿಂದ ಈ ದೇಶದ ನೂರಾರು ಅತಿ ಶ್ರೀಮಂತರು ಖಾಸಗಿ ವಿಮಾನಗಳನ್ನು ಬುಕ್ ಮಾಡಿ ವಿದೇಶಗಳಿಗೆ ಸದ್ದಿಲ್ಲದೇ ಪಲಾಯನ ಮಾಡುತ್ತಿದ್ದಾರೆ ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ವಿವಿಧ ದೇಶಗಳು ಪ್ರಯಾಣ ನಿರ್ಬಂಧ ಹೇರುತ್ತಿರುವುದರಿಂದ ಅವಸರವಸರದಲ್ಲಿ ಈ ಸೂಪರ್ ಸಿರಿವಂತರು ಯಥೇಚ್ಛ ಹಣ ನೀಡಿ ಖಾಸಗಿ ಜೆಟ್ಗಳ ಮೂಲಕ ಸುರಕ್ಷಿತ ತಾಣಗಳನ್ನು ಸೇರುತ್ತಿದ್ದಾರೆ.
ಯುನೈಟೆಡ್ ಅರಬ್ ಸಂಸ್ಥಾನವು (ಯುಎಇ) ಹೋಲಿಕೆಯಲ್ಲಿ ಭಾರತಕ್ಕೆ ಸಮೀಪ ಇರುವುದರಿಂದ ಮತ್ತು ಅಲ್ಲಿ ಸುರಕ್ಷತೆಯೂ ಇರುವುದರಿಂದ ಬಹುತೇಕರ ಫೇವರಿಟ್ ದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲಿ ಅವರು ದುಬಾರಿ ಹಣ ಕೊಟ್ಟು ವ್ಯಾಕ್ಸಿನ್ ಪ್ಲಸ್ ವೆಕೇಷನ್ (ಲಸಿಕೆ ಮತ್ತು ರಜಾದಿನಗಳು) ಎರಡನ್ನು ಪಡೆಯುತ್ತಿದ್ದಾರೆ.
ಏಪ್ರಿಲ್ 25ರಿಂದ 10 ದಿನಗಳ ಕಾಲ ಭಾರತದಿಂದ ಪ್ರಯಾಣ ನಿರ್ಬಂಧ ವಿಧಿಸುವುದಾಗಿ ಯುಎಇ ಕಳೆದ ವಾರ ಘೋಷಿಸಿದ ನಂತರ ಈ ಸುಪರ್ ಸಿರಿವಂತರು ಎದ್ದು ಬಿದ್ದು ಖಾಸಗಿ ವಿಮಾನ, ಜೆಟ್ಗಳನ್ನು ಬುಕ್ ಮಾಡಿ ಹಾರಿ ಹೋಗಿದ್ದಾರೆ.
ಶುಕ್ರವಾರ ಈ ಕುರಿತು ಮಾತನಾಡಿರುವ ಖಾಸಗಿ ಚಾರ್ಟರ್ ಕಂಪನಿ ‘ಏರ್ ಚಾರ್ಟರ್’ ಅಧಿಕಾರಿ, ನಾಳೆ (ಶನಿವಾರ ಏಪ್ರಿಲ್ 24) ನಮ್ಮ ಕಂಪನಿಯಿಂದ 12 ವಿಮಾನಗಳು ದುಬೈಗೆ ಹೊರಡಲಿದ್ದು ಎಲ್ಲವೂ ಭರ್ತಿಯಾಗಿವೆ’ ಎಂದು ತಿಳಿಸಿದ್ದಾರೆ.
ಇನ್ನೊಂದು ಖಾಸಗಿ ಕಂಪನಿ ಎಂಥ್ರಾಲ್ ಏವಿಯೇಷನ್, ನೂರಾರು ಬುಕಿಂಗ್ ಬೇಡಿಕೆಗಳು ಕಳೆದ ಹಲವು ದಿನಗಳಿಂದ ಬಂದಿವೆ ಎಂದಿದೆ.
ಏಪ್ರಿಲ್ 25ರ ನಿರ್ಬಂಧಕ್ಕೂ ಮುಂಚೆ ನೂರಾರು ಸುಪರ್ ಸಿರಿವಂತರು ದುಬೈ ಸೇರಿದ್ದಾರೆ. ಈಗ ಮತ್ತೆಲ್ಲಿ ನಿರ್ಬಂಧವಿಲ್ಲವೋ ಅಂತಹ ಕಡೆ ಖಾಸಗಿ ಜೆಟ್ಗಳ ಮೂಲಕ ಹಾರಲು ತಯಾರಿ ನಡೆಸಿದ್ದಾರೆ.
ಮುಂಬೈನಿಂದ ದುಬೈಗೆ 13 ಸೀಟುಗಳ ಜೆಟ್ ಬಾಡಿಗೆ 38 ಸಾವಿರ ಡಾಲರ್! 6 ಸೀಟಿನದ್ದಾರೆ 33 ಸಾವಿರ ಡಾಲರ್ ತೆರಬೇಕಾಗಿದೆ ಎನ್ನಲಾಗಿದೆ.
ಥೈಲ್ಯಾಂಡ್ಗೂ ಅನೇಕರು ಪಲಾಯನ ಮಾಡಿದ್ದರೆ. ಸಂಡೇ ಟೈಮ್ಸ್ ಪ್ರಕಾರ, ಹಲವು ದಿನಗಳ ಮೊದಲೇ ಕೆಲವರು ದುಬಾರಿ ದರ ತೆತ್ತು (9 ತಾಸಿನ ಪ್ರಯಾಣಕ್ಕೆ 100 ಸಾವಿರ ಪೌಂಡ್ ಬಾಡಿಗೆ) ಬ್ರಿಟನ್ಗೆ ಓಡಿದ್ದಾರೆ. ಇವರೆಲ್ಲ ತಮ್ಮದೇ ಗುಂಪು ರಚಿಸಿಕೊಂಡ ವಿಮಾನ ಅಥವಾ ಜೆಟ್ ಬಾಡಿಗೆ ಪಡೆದು ಹಾರಿದ್ದಾರೆ.
ಈಗ ಪ್ರಯಾಣ ನಿರ್ಬಂಧ ಹೇರದ ಯಾವುದಾದರೂ ಸುರಕ್ಷಿತ ತಾಣವನ್ನು ಸುಪರ್ ಸಿರಿವಂತರು ಹುಡುಕುತಿದ್ದಾರೆ ಎನ್ನಲಾಗಿದೆ. ಕೋವಿಡ್ ಅಂತಲ್ಲ, ದೇಶದ ಕಷ್ಟಗಳಿಗೆ ಇವರೆಲ್ಲ ಸದಾ ಪಲಾಯನ ಹೇಳುತ್ತಲೇ ಬಂದವರು ಅಲ್ವೇ ಎಂಬ ಟೀಕೆ ಕೇಳಿಬಂದಿದೆ.
ಹಣವಂತರ ಒಳಿತಿಗೇಂತ ಹಗಲಿರುಳು ದುಡಿದ್ರಪ್ಪ ಮೋದಿ. ಆದರೆ ಕೋವಿಡ್19 ಅನ್ನು ಹ್ಯಾಂಡಲ್ ಮಾಡಿದ ರೀತಿ ನೋಡಿ ಬೆಚ್ಚಿ ಬಿದ್ದಿರೋ ಹಣವಂತ್ರು, ಮೋದಿ ನಂಬಿಕೊಂಡ್ರೊ ಬದುಕ್ಕಲ್ಲ, ಈ ದೇಶದ ಸಾವಾಸ ಸಾಕು ಅಂತ ವಿದೇಶಕ್ಕೆ ಹಾರ್ತಾ ಇದ್ದಾರಂತೆ. ಹಿಂಗಿದೆ ಮೋದಿ ಆಡಳಿತ.. ನಮೋ ನಮಃ!
https://t.co/U1R54MvrSg— durgadahuduga (@durgadahuduga) April 26, 2021
“ಹಣವಂತರ ಒಳಿತಿಗೇಂತ ಹಗಲಿರುಳು ದುಡಿದ್ರಪ್ಪ ಮೋದಿ. ಆದರೆ ಕೋವಿಡ್19 ಅನ್ನು ಹ್ಯಾಂಡಲ್ ಮಾಡಿದ ರೀತಿ ನೋಡಿ ಬೆಚ್ಚಿ ಬಿದ್ದಿರೋ ಹಣವಂತ್ರು, ಮೋದಿ ನಂಬಿಕೊಂಡ್ರೊ ಬದುಕ್ಕಲ್ಲ, ಈ ದೇಶದ ಸಾವಾಸ ಸಾಕು ಅಂತ ವಿದೇಶಕ್ಕೆ ಹಾರ್ತಾ ಇದ್ದಾರಂತೆ. ಹಿಂಗಿದೆ ಮೋದಿ ಆಡಳಿತ.. ನಮೋ ನಮಃ!” ಎಂದು ಪತ್ರಕರ್ತ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್
Now rich are not having faith on Modi to protect their life.