2019ರ ಡಿಸೆಂಬರ್ನಿಂದ 2020ರ ಜನವರಿ ನಡುವೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಿ, ಮಾನವೀಯತೆಯ ವಿರುದ್ಧ ಅಪರಾಧ ಎಸಗಿರುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಸ್ವಿಟ್ಜರ್ಲೆಂಡ್ನಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಜನವರಿ 16 ಮತ್ತು 20 ರ ನಡುವೆ ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಸಿಎಂ ಯೋಗಿ ದಾವೋಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸ್ವಿಸ್ ಫೆಡರಲ್ ಪ್ರಾಸಿಕ್ಯೂಟರ್ ಕಚೇರಿಗೆ ಜನವರಿ 17ರ ಮಂಗಳವಾರದಂದು ‘ಗುರ್ನಿಕಾ 37 ಚೇಂಬರ್ಸ್’ ಮೂಲಕ ದೂರು ಸಲ್ಲಿಸಲಾಗಿದೆ. ‘ಗುರ್ನಿಕಾ 37 ಚೇಂಬರ್ಸ್’ ಎಂಬುವುದು ಅಂತರಾಷ್ಟ್ರೀಯ ಕ್ರಿಮಿನಲ್ ಮತ್ತು ಮಾನವ ಹಕ್ಕುಗಳ ವಕೀಲರ ವಿಶೇಷ ಗುಂಪಾಗಿದೆ. ಸ್ವಿಸ್ ಕ್ರಿಮಿನಲ್ ಕೋಡ್ನ ಆರ್ಟಿಕಲ್ 264 ರಲ್ಲಿ ಒದಗಿಸಿದಂತೆ ಸಾರ್ವತ್ರಿಕ ನ್ಯಾಯವ್ಯಾಪ್ತಿಯ ತತ್ವದ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆರ್ಟಿಕಲ್ 264 ‘ಜನಾಂಗೀಯ ಹತ್ಯೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ’ಗಳ ಕುರಿತು ಮಾತನಾಡುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕ್ರಿಮಿನಲ್ ವರದಿಯ ವಿಷಯಗಳು ಮತ್ತು ಬಲಿಪಶುಗಳು, ದೂರುದಾರರು ಮತ್ತು ಅರ್ಜಿದಾರರ ವಿವರಗಳನ್ನು ಅವರ ಜೀವ ಸುರಕ್ಷತೆಗಾಗಿ ಗೌಪ್ಯವಾಗಿಡಲಾಗಿದೆ ಎಂದು ಗುರ್ನಿಕಾ 37 ಗ್ರೂಪ್ನ ಸಂಸ್ಥಾಪಕ ಹಾಗೂ G37 ಚೇಂಬರ್ಸ್ನ ಜಂಟಿ ಮುಖ್ಯಸ್ಥರಾಗಿರುವ ಟೋಬಿ ಕ್ಯಾಡ್ಮ್ಯಾನ್ ಅವರು ಹೇಳಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ 2019 ಡಿಸೆಂಬರ್ನಿಂದ ಮತ್ತು 2020ರ ಜನವರಿಯ ನಡುವೆ ನಾಗರಿಕರನ್ನು ಸುಳ್ಳಿನ ಮೂಲಕ ಸೆರೆವಾಸ, ಚಿತ್ರಹಿಂಸೆ ಮತ್ತು ಹತ್ಯೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಕ್ರಿಮಿನಲ್ ವರದಿಯಲ್ಲಿ ಸೂಚಿಸಿದಂತೆ, ಈ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಏಕೆಂದರೆ ಅವು ನಾಗರಿಕರ ವಿರುದ್ಧ ವ್ಯಾಪಕ ಅಥವಾ ವ್ಯವಸ್ಥಿತ ದಾಳಿಯ ಭಾಗವಾಗಿ ನಡೆದಿದ್ದು, ಅದರಲ್ಲೂ ಹೆಚ್ಚಾಗಿ ದೇಶದ ಮುಸ್ಲಿಂ ಜನಸಂಖ್ಯೆ ವಿರುದ್ಧ ಇದು ನಡೆದಿದೆ ಎಂದು ಆರೋಪಿಸಲಾಗಿದೆ” ಎಂದು ಗುರ್ನಿಕಾ 37 ಚೇಂಬರ್ಸ್ ಹೇಳಿಕೆ ತಿಳಿಸಿದೆ.
ಯುಪಿ ಪೊಲೀಸರಿಗೆ ನೀಡಿದ ಆದೇಶದ ಜವಾಬ್ದಾರಿ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಯುಪಿ ಸರ್ಕಾರದ ಹಿರಿಯ ಸದಸ್ಯರಾಗಿದ್ದು, ಇದಕ್ಕೆ ಸಾಕಷ್ಟು ಆಧಾರ ಇದೆ ಎಂದು ಗುರ್ನಿಕಾ 37 ಚೇಂಬರ್ಸ್ ಹೇಳಿದೆ. “ಪೊಲೀಸ್ ಹಿಂಸಾಚಾರದ ಉಲ್ಬಣವು ಡಿಸೆಂಬರ್ 19, 2019 ರಂದು ಮುಖ್ಯಮಂತ್ರಿ ನೀಡಿದ ಭಾಷಣದ ವಹಿಸಿದ ಪಾತ್ರ ಸ್ಪಷ್ಟವಾಗಿ ಕಂಡುಬರುತ್ತದೆ. ಅದರಲ್ಲಿ ಅವರು ಪ್ರತಿಭಟನಾಕಾರರ ವಿರುದ್ಧ ‘ಸೇಡು ತೀರಿಸಿಕೊಳ್ಳಲು’ ಪೊಲೀಸರಿಗೆ ಕರೆ ನೀಡಿದರು. ಭಾರತೀಯ ರಾಜ್ಯದ ಅಧಿಕಾರಿಯಾಗಿದ್ದರೂ ಮುಖ್ಯಮಂತ್ರಿ ಈ ಅಪರಾಧಗಳಿಗೆ ರಾಜತಾಂತ್ರಿಕ ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ” ಹೇಳಿಕೆ ತಿಳಿಸಿದೆ.
ಡಿಸೆಂಬರ್ 2019 ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿದ ನಂತರ, ಅನೇಕ ವ್ಯಕ್ತಿಗಳು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಬೀದಿಗಿಳಿದು ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರು. ಅವರಲ್ಲಿ ಹಲವರನ್ನು ಪೊಲೀಸರು ಬಂಧಿಸಿ ದಾಳಿ ನಡೆಸಿದ್ದಾರೆ ಎಂದು ಗುರ್ನಿಕಾ 37 ಚೇಂಬರ್ಸ್ ಹೇಳಿದೆ.
“ಯುಪಿ ಪೊಲೀಸರು 22 ಪ್ರತಿಭಟನಾಕಾರರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. ಕನಿಷ್ಠ 117 ಮಂದಿಗೆ ಚಿತ್ರಹಿಂಸೆ ನೀಡಲಾಯಿತು ಮತ್ತು 307 ಮಂದಿಯನ್ನು ನಿರಂಕುಶವಾಗಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಪೊಲೀಸರ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆದಿತ್ಯನಾಥ್ ಅವರು ವಿಫಲರಾಗಿದ್ದಾರೆ” ಎಂದು ಕ್ರಿಮಿನಲ್ ದೂರಿನಲ್ಲಿ ಹೇಳಲಾಗಿದೆ.