“ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕೆ ತನಗೆ ನೀಡಲಾಗಿದ್ದ ವೈಯಕ್ತಿಕ ಭದ್ರತಾ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ” ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. “ಇದು ಕೀಳುಮಟ್ಟದ ಕಾರ್ಯವೈಖರಿ. ಇಂತಹ ಸೇಡಿನ ರಾಜಕೀಯಕ್ಕೆ ನನ್ನ ಧಿಕ್ಕಾರವಿರಲಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಯತ್ನಾಳ್, “ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಗಳಾದರೆ ಅಥವಾ ಅನಾಹುತಗಳಾದರೆ, ಅದಕ್ಕೆ ಆಡಳಿತ ನಡೆಸುತ್ತಿರುವ ತಾವು ಮತ್ತು ಸರ್ಕಾರವೇ ಹೊಣೆ” ಎಂದು ಎಚ್ಚರಿಸಿದ್ದಾರೆ.
“ನಾನು ಹಿಂದುಪರವಾದ ಮತ್ತು ಜನಪರ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವನು. ಹಾಗಾಗಿ ಈ ಹಿಂದೆ ನನ್ನ ಮೇಲೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ ಸಂಘಟನೆಗಳು ಮತ್ತ ಮತಾಂಧ ಶಕ್ತಿಗಳು ದಾಳಿ ಮಾಡುವ ಮುನ್ಸೂಚನೆ ಸಿಕ್ಕಿತ್ತು. ಇದನ್ನು ಅರಿತ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ನನಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಆದರೆ, ನಾನು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಸೇಡಿನ ರಾಜಕಾರಣ ಮಾಡಿ ಭದ್ರತೆ ಹಿಂಪಡೆಯಲಾಗಿದೆ. ಈಗ ದಿಢೀರನೆ ಪೊಲೀಸ್ ಭದ್ರತೆ ಹಿಂಪಡೆದಿರುವುದರ ಹಿಂದಿನ ದುರುದ್ದೇಶ ಗೊತ್ತು” ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಂತರ ಯಡಿಯೂರಪ್ಪ ಅಧಃಪತನ ಆರಂಭ: ಯತ್ನಾಳ್
ಯಡಿಯೂರಪ್ಪನವರ ವಿರುದ್ಧ ತಮ್ಮ ಆಕ್ರೋಶವನ್ನು ಯತ್ನಾಳ್ ಆಗಾಗ ಹೊರಹಾಕುತ್ತಲೇ ಇದ್ದಾರೆ. ಇತ್ತೀಚೆಗೆ ವಿಜಯಪುರಕ್ಕೆನೀಡುವ ಅನುದಾನದ ವಿಷಯದಲ್ಲಿ ಅನ್ಯಾಯವಾಗಿರುವುದರ ಕುರಿತು ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆಯೂ ತಮ್ಮ ಅಸಮಾಧಾನ ಹೊರಹಾಕಿರುವ ಯತ್ನಾಳ್, ಇದು ಸಿಡಿ ರಾಜಕೀಯ ಎಂದು ಯಡಿಯೂರಪ್ಪನವರನ್ನು ತೀವ್ರವಾಗಿ ಖಂಡಿಸಿದ್ದರು. ಈಗ ಇವರ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಿರುವುದಕ್ಕೆ ಇದೇ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!
ಒಳ್ಳೆಯ ವಿಚಾರ