ಕೃಷಿ ಮಸೂದೆಗಳ ರದ್ದತಿಗೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರೈತರು, ವಿದ್ಯಾರ್ಥಿಗಳು ಎಲ್ಲಾ ಇವರ ವಿರೋಧಿಗಳು. ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳು ಮಾತ್ರ ಆಪ್ತ ಸ್ನೇಹಿತರು ಎಂದಿದ್ದಾರೆ.
ಇಂದು ಟ್ವಿಟರ್ನಲ್ಲಿ ಕಿಡಿಕಾರಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರವನ್ನು ವಿರೋಧಿಸಿ ಧ್ವನಿ ಎತ್ತುವವರೆಲ್ಲರೂ ಶತ್ರುಗಳೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಆದರೆ ಬಂಡವಾಳಶಾಹಿಗಳು ಮಾತ್ರ ಉತ್ತಮ ಸ್ನೇಹಿತರು ಎಂದು ಹೇಳಿದ್ದಾರೆ.
ನಿನ್ನೆಯ ರೈತರ ದಿನವಿಡೀ ಉಪವಾಸ ಸತ್ಯಾಗ್ರಹದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ. ಹೊಸ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರ ಚುನಾವಣೆಗೆ ಹಣಕಾಸು ಪೂರೈಸುವವರನ್ನು ತೊರೆದು, ದೇಶದ ಆಹಾರ ಪೂರೈಕೆದಾರರ ಕೈ ಹಿಡಿಯಬೇಕು ಎಂದು ಹೇಳಿತ್ತು.
ಇದನ್ನೂ ಓದಿ: ಕರ್ನಾಟಕದ ಸುಮಾರು 50% ರಷ್ಟು ಯುವತಿಯರಿಗೆ ರಕ್ತಹೀನತೆ- NFHS ವರದಿ
For Modi Govt:
Dissenting students are anti-nationals.
Concerned citizens are urban naxals.
Migrant labourers are Covid carriers.
Rape victims are nobody.
Protesting farmers are Khalistani.And
Crony capitalists are best friends.— Rahul Gandhi (@RahulGandhi) December 15, 2020
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಮೋದಿ ಸರ್ಕಾರಕ್ಕೆ: ಭಿನ್ನಾಭಿಪ್ರಾಯ ಹೊಂದಿರುವ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿಗಳು. ಸಮಾಜದ ಬಗ್ಗೆ ಕಳವಳ ವ್ಯಕ್ತಪಡಿಸಿ, ಧ್ವನಿಯೆತ್ತುವ ನಾಗರಿಕರು ನಗರ ನಕ್ಸಲರು. ವಲಸೆ ಕಾರ್ಮಿಕರು ಕೊರೊನಾ ಸೋಂಕು ಹರಡುವ ವಾಹಕಗಳು. ಅತ್ಯಾಚಾರಕ್ಕೊಳಗಾದವರು ಇವರಿಗೆ ಯಾರೂ ಅಲ್ಲ. ಪ್ರತಿಭಟನಾ ನಿರತ ರೈತರು ಖಲಿಸ್ತಾನಿಗಳು. ಆದರೆ, ಆಪ್ತ ಬಂಡವಾಳಶಾಹಿಗಳು ಉತ್ತಮ ಸ್ನೇಹಿತರು” ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು 32 ರೈತ ಸಂಘಗಳ ಮುಖಂಡರು ದೆಹಲಿಯ ಸಿಂಘು ಗಡಿಯಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು. ರೈತರನ್ನು ಬೆಂಬಲಿಸಿ ದೇಶಾದ್ಯಂತ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿಯ ಬೆಂಬಲ
ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, “73 ವರ್ಷಗಳಲ್ಲಿ ಮೊದಲ ಬಾರಿಗೆ ರಾಷ್ಟ್ರವನ್ನು ಪೋಷಿಸುವ ರೈತರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇನ್ನೂ ಎಷ್ಟು ‘ಅಚ್ಚೆ ದಿನ್’ ತರುತ್ತೀರಿ ಮೋದಿಯವರೇ?” ಎಂದು ಪ್ರಶ್ನಿಸಿದ್ದರು.
“ಚುನಾವಣೆಗೆ ಹಣಕಾಸು ಒದಗಿಸುವವರ ಕೈಬಿಟ್ಟು, ಅನ್ನದಾತರ ಕೈಗಳನ್ನು ಹಿಡಿದುಕೊಳ್ಳಿ, ಅವರ ಕಣ್ಣೀರನ್ನು ಒರೆಸಿ, ಕ್ಷಮೆಯಾಚಿಸಿ, ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ” ಎಂದು ಸುರ್ಜೆವಾಲಾ ಆಗ್ರಹಿಸಿದ್ದರು.