Homeಅಂಕಣಗಳುಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

- Advertisement -
- Advertisement -

2012ರಲ್ಲಿ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಹಲವು ಹಳ್ಳಿಗಳ ದಲಿತರ ಮೇಲೆ ನಡೆದ ದೌರ್ಜನ್ಯ ಭಾರತದ ಹಿಂದೂ ಮೇಲ್ಜಾತಿಗಳ ಮತ್ತೊಂದು ಮುಖವನ್ನು ತೋರಿಸುತ್ತದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್‌ಅವರು ’ಅಸ್ಪೃಶ್ಯರ ಮೇಲೆ ಹಿಂದೂ ಮೇಲ್ಜಾತಿಗಳು ಒಂದು ವರ್ಗವಾಗಿ ಶೋಷಿಸುತ್ತಾರೆ’ ಎಂದಿದ್ದರು. ಅದೇ ಮಾತನ್ನು ಪದೇಪದೇ ಸಾಬೀತುಪಡಿಸುವ ಬೆಳವಣಿಗೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆಯೇ ಧರ್ಮಾಪುರಿ.

ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಬಲಿಷ್ಠವಾದ ಶೂದ್ರಜಾತಿ ವಣ್ಣಿಯಾರ್. ಭೂಸುಧಾರಣಾ ಕಾನೂನಿನಿಂದ ಅತಿ ಹೆಚ್ಚು ಲಾಭ ಪಡೆದುಕೊಂಡ ಶೂದ್ರ ಮೇಲ್ಜಾತಿ ಈ ವಣ್ಣಿಯಾರ್. ಧರ್ಮಾಪುರಿ ಜಿಲ್ಲೆಯಲ್ಲಿಯೂ ಇದೇ ವಣ್ಣಿಯಾರರ ಪ್ರಾಬಲ್ಯವೇ ಹೆಚ್ಚು. ಇಂದಿಗೂ ಸಹ ರಾಜಕೀಯ ಮೇಲುಗೈ ಸಾಧಿಸಿರುವ ವಣ್ಣಿಯಾರರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಇಂತಹ ವಣ್ಣಿಯಾರ್ ಸಮುದಾಯ ಹಿಂದೂ ಜಾತಿಪದ್ಧತಿಯನ್ನು ಮೈಗೂಡಿಸಿಕೊಂಡು ಬೆಳೆದುಬಂದಿದೆ. ಕಾಲಾಂತರದಲ್ಲಿ ತಳಜಾತಿಯೊಂದು ಆರ್ಥಿಕವಾಗಿ ಸಬಲರಾಗುತ್ತಿದ್ದಂತೆ ಮೇಲ್ಜಾತಿ ಮೇಲರಿಮೆಯನ್ನು ರೂಢಿಸಿಕೊಂಡುಬಿಡುವುದೇ ಶ್ರೇಣೀಕೃತ ಜಾತಿಪದ್ಧತಿಯ ಬಹುಮುಖ್ಯ ಲಕ್ಷಣವಾಗಿದೆ. ಇದಕ್ಕೆ ವಣ್ಣಿಯಾರ್ ಶೂದ್ರರೂ ಹೊರತಲ್ಲ.

ಧರ್ಮಾಪುರಿ ಜಿಲ್ಲೆಯ ನಾಥಮ್ ಕಾಲೋನಿಯ ದಲಿತ ಸಮುದಾಯದ ಇಳವರಸನ್ ಹಾಗೂ ಪಕ್ಕದ ಸೆಲ್ಲಕೋಟ್ಟೈ ಹಳ್ಳಿಯ ವಣ್ಣಿಯಾರ್ ಸಮುದಾಯದ ದಿವ್ಯಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ದಿವ್ಯಾಳಿಗಿಂತ ಇಳವರಸನ್ ಒಂದು ವರ್ಷ ಚಿಕ್ಕವನಾದರೂ ವಯಸ್ಸು ಅವರಿಬ್ಬರ ಪ್ರೀತಿಗೆ ಅಡ್ಡ ಬರಲಿಲ್ಲ. ಜಾತಿ ಗೊತ್ತಿದ್ದರೂ ಒಬ್ಬರಿಗೊಬ್ಬರು ಇಷ್ಟಪಟ್ಟುಕೊಂಡರು. ಈ ವಿಷಯ ಇಳವರಸನ್ ಕುಟುಂಬಕ್ಕೆ ತಿಳಿದಿದ್ದರೂ ಅವರು ಅಷ್ಟೇನೂ ವಿರೋಧಿಸಲಿಲ್ಲ. ಇದಕ್ಕೆ ಕಾರಣ ಹಿಂದೂ ಧರ್ಮದೊಳಗಿನ ಮೇಲ್ಜಾತಿಯ ಮೇಲರಿಮೆ ಹಾಗೂ ಅಸ್ಪೃಶ್ಯತೆಯ ಕೀಳರಿಮೆ. ಈ ಎರಡು ಪ್ರೇಮಿಗಳ ಪ್ರೀತಿಯು ಉಂಟುಮಾಡಿದ ಅಲ್ಲೋಲಕಲ್ಲೋಲ ಅಂತಿಂತಹದ್ದಲ್ಲ.

ದಿವ್ಯ ಮತ್ತು ಇಳವರಸನ್ ಪ್ರೀತಿಗೆ ದಿವ್ಯಳ ಕುಟುಂಬ ಒಪ್ಪಿಗೆ ನೀಡುವುದಿಲ್ಲ ಎಂಬ ವಿಚಾರ ತಿಳಿದೊಡನೆ ಈ ಇಬ್ಬರೂ ಪ್ರೇಮಿಗಳು ದೂರ ಹೋಗಿ ಮದುವೆಯಾಗಲು ತೀರ್ಮಾನಿಸಿದರು. 2012ರ ಅಕ್ಟೋಬರ್ 12ರಂದು ಸೇಲಂ ದೇಗುಲದಲ್ಲಿ ಮದುವೆಯಾದರು. ಈ ವಿಚಾರ ದಿವ್ಯಾಳ ಹಳ್ಳಿಯಲ್ಲಿ ಕೋಲಾಹಲ ಉಂಟುಮಾಡಿತು. ದಿವ್ಯಾಳ ಕುಟುಂಬ ಎರಡು ವಾರಗಳ ಕಾಲ ಮಗಳಿಗಾಗಿ ಹುಡುಕಾಡುತ್ತಾ ಹಲವು ಸ್ಥಳಗಳಲ್ಲಿ ಶೋಧಿಸಿದ ಮೇಲೆ ವಣ್ಣಿಯಾರ್ ಜಾತಿ ಸಮುದಾಯದ ’ಪ್ರತಿಷ್ಠಿತ’ರ ಒತ್ತಾಯಕ್ಕೆ ಮಣಿದು ನವೆಂಬರ್ 7ರಂದು ವಣ್ಣಿಯಾರ್ ಜಾತಿ ಪಂಚಾಯತ್ ನಡೆಸಿತು. ಈ ಸಭೆಗೆ ಇಳವರಸನ್ ಕುಟುಂಬವನ್ನೂ ಆಹ್ವಾನಿಸಿತು. ಆದರೆ ವಣ್ಣಿಯಾರರ ಭಯಕ್ಕೆ ಬಿದ್ದು ಇಳವರಸನ್ ಕುಟುಂಬವೂ ಸಹ ಊರುಬಿಟ್ಟಿತ್ತು. ಅಷ್ಟೊತ್ತಿಗೆ ದಿವ್ಯಾ ಮತ್ತು ಇಳವರಸನ್ ನೆಲೆಸಿದ್ದ ಸ್ಥಳವೂ ಪತ್ತೆಯಾಗಿ ದೂರವಾಣಿಯ ಮುಖಾಂತರ ಮನೆಗೆ ಬರಲು ದಿವ್ಯಾಳನ್ನು ಕೇಳಿಕೊಂಡಾಗ ಆಕೆ ನಿರಾಕರಿಸಿದ್ದಳು. ಇದು ವಣ್ಣಿಯಾರ್ ಸಮುದಾಯದವರನ್ನು ಕೆರಳಿಸಿತ್ತು. ಪಂಚಾಯತ್ ಸಭೆಯಲ್ಲಿ ನೆರೆದಿದ್ದ ವಣ್ಣಿಯಾರ್ ಹಿರಿಯರು ದಿವ್ಯಾಳ ಮೇಲಿದ್ದ ಕೋಪವನ್ನೆಲ್ಲ ಅವಳ ತಂದೆಯ ಮೇಲೆ ತೀರಿಸಿಕೊಂಡರು. ಅವರನ್ನುದ್ದೇಶಿಸಿ ಬಹಳ ಕೆಟ್ಟದಾಗಿ ನಿಂದಿಸಿದರು. ’ನಮ್ಮ ವಣ್ಣಿಯಾರ್ ಜಾತಿಯ ಮಾನವನ್ನು ಕಳೆದೆ’ ಎಂದು ಆರೋಪಿಸಿದರು. ಅಂತಹ ಮಗಳನ್ನು ಹೆತ್ತದ್ದಕ್ಕೆ ನಾಚಿಕೆಯಾಗಬೇಕೆಂದರು ಜರೆದರು. ಈ ಅವಮಾನವನ್ನು ತಾಳಲಾರದೆ ದಿವ್ಯಾಳ ತಂದೆ ಅಂದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಯು ವಣ್ಣಿಯಾರರನ್ನು ಮತ್ತಷ್ಟು ಕೆರಳಿಸಿತು. ದಿವ್ಯಾಳ ತಂದೆಯ ಅಂತ್ಯಸಂಸ್ಕಾರಕ್ಕೆ ಅಕ್ಕಪಕ್ಕದ 22 ಹಳ್ಳಿಗಳ ವಣ್ಣಿಯಾರರು ಆಗಮಿಸಿದ್ದರು. ಅವರೆಲ್ಲರ ಬಾಯಿಗಳೂ ಬಹಿರಂಗವಾಗಿ ’ದಲಿತರಿಗೆ ಬುದ್ಧಿ ಕಲಿಸಬೇಕು’ ಎನ್ನುತ್ತಿದ್ದವು. ತನ್ನ ತಂದೆಯ ಅಂತಿಮ ದರ್ಶನ ಮಾಡಬೇಕೆಂದಿದ್ದ ದಿವ್ಯಾಳಿಗೆ ಕೊಲ್ಲುವ ಬೆದರಿಕೆ ಒಡ್ಡಲಾಗಿತ್ತು. ಇತ್ತ ತನ್ನ ತಂದೆಯ ಸಾವಿಗೆ ತಾನೇ ಕಾರಣವೆಂದುಕೊಂಡು ದುಃಖದಲ್ಲಿ ಮುಳುಗಿದ್ದ ದಿವ್ಯಾಳಿಗೆ ಇಳವರಸನ್ ಸಮಾಧಾನಪಡಿಸಿದ್ದ.

ದಿವ್ಯಾಳ ತಂದೆಯ ಆತ್ಮಹತ್ಯೆಯ ನಂತರ ವಣ್ಣಿಯಾರ್ ಸಂಘವು ದಲಿತರಿಗೆ ಬುದ್ಧಿ ಕಲಿಸಲಿಕ್ಕಾಗಿಯೇ ಒಂದು ಬೃಹತ್ ಸಭೆಯನ್ನು ಕರೆದಿದ್ದರ ಬಗ್ಗೆ ವರದಿಯಾಗಿದೆ. ಶವಸಂಸ್ಕಾರ ಮಾಡಿದ ನಂತರ ಅಂದೇ ಅಪರಾಹ್ನದ ವೇಳೆಯಲ್ಲಿ ಸುಮಾರು 1500 ಜನ ವಣ್ಣಿಯಾರರು ಈ ಹಿಂದೆ ಇಳವರಸನ್ ವಾಸವಾಗಿದ್ದ ನಾಥಮ್ ಕಾಲೋನಿಯ ಕಡೆ ಹೆಜ್ಜೆ ಹಾಕುತ್ತಾರೆ. ಕಾಲೋನಿಯ ಗಂಡಸರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಹೆಂಗಸರು ಮಕ್ಕಳೇ ಮನೆಯಲ್ಲಿದ್ದರು. ಕೈಯ್ಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ವಣ್ಣಿಯಾರರು ದಲಿತರ ಮನೆಗಳ ಮೇಲೆ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಹಚ್ಚುವ ಮುನ್ನ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಲೂಟಿ ಮಾಡಿದ್ದರು. ಅಷ್ಟಕ್ಕೆ ತೃಪ್ತಿಗೊಳ್ಳದ ವಣ್ಣಿಯಾರ್ ಜಾತಿವಾದಿಗಳು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ಮತ್ತೊಂದು ದಲಿತ ಕಾಲೋನಿ ಅಣ್ಣಾನಗರಕ್ಕೆ ತೆರಳಿ ಅಲ್ಲಿಯ ದಲಿತರ ಮನೆಗೂ ಬೆಂಕಿಹಚ್ಚಿದರು. ಅಲ್ಲಿಂದ ಮತ್ತೆ ಕೊಡಂಪಟ್ಟಿ ದಲಿತ ಕಾಲೋನಿಗೂ ತೆರಳಿ ಅಲ್ಲಿಯೂ ಬೆಂಕಿ ಹಚ್ಚಲಾಯಿತು. ಅಷ್ಟೊತ್ತಿಗೆ ಪೊಲೀಸ್ ತುಕಡಿ ಬಂದ ಕಾರಣ ಎಲ್ಲರೂ ಓಡಿಹೋದರು. ಈ ಹಿಂಸಾಚಾರದಲ್ಲಿ ಸಾವುಗಳು ಸಂಭವಿಸುವುದಿಲ್ಲವಾದರೂ ಹಲವು ಹೆಂಗಸರು ಮಕ್ಕಳು ಆಸ್ಪತ್ರೆ ಸೇರಿದರು. ಪೊಲೀಸರ ಪ್ರಕಾರ 268 ಮನೆಗಳನ್ನು ವಣ್ಣಿಯಾರ್ ಜಾತಿವಾದಿಗಳು ಸುಟ್ಟು ಭಸ್ಮಮಾಡಿದ್ದರು.

ಈ ಘಟನೆಯು ತಮಿಳುನಾಡಿನ ತುಂಬಾ ಹೆಚ್ಚು ಸದ್ದು ಮಾಡಿದ ಕಾರಣ 146 ಮಂದಿಯನ್ನು ಬಂಧಿಸಲಾಗುತ್ತದೆ. ಆದರೆ ಅವರೆಲ್ಲರಿಗೂ ಬೇಗ ಜಾಮೀನು ಸಿಕ್ಕಿತಲ್ಲದೇ ಕೊನೆಗೆ ಸಾಕ್ಷಿ ಕೊರತೆಯಿಂದಾಗಿ ಎಲ್ಲರೂ ಬಿಡುಗಡೆಗೊಳ್ಳುತ್ತಾರೆ. ದಲಿತರಿಗೆ ಭಿಕ್ಷೆಯಂತೆ ಪರಿಹಾರ ನೀಡಲಾಗುತ್ತದೆ. ಹಲವು ದಲಿತ ಕುಟುಂಬಗಳು ಊರುಬಿಟ್ಟು ಹೋಗುತ್ತವೆ.

ಧರ್ಮಾಪುರಿಯ ಈ ಮೇಲಿನ ಘಟನೆ ಅಲ್ಲಿಗೆ ಮುಗಿಯುವುದಿಲ್ಲ. ಮತ್ತೊಂದು ಹೃದಯ ವಿದ್ರಾವಕ ಪ್ರಕರಣ ಜರುಗುತ್ತದೆ.

ಅಲ್ಲಿಂದ ಸುಮಾರು 5 ತಿಂಗಳ ನಂತರ ದಿವ್ಯಾ ತಾಯಿ ’ತನ್ನ ಮಗಳನ್ನು ಇಳವರಸನ್ ಅಪಹರಿಸಿದ್ದಾನೆ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಮೊರೆಹೋದರು. ಜೂನ್ ತಿಂಗಳಿನಲ್ಲಿ ದಿವ್ಯಾ ತನ್ನ ತಾಯಿಯನ್ನು ಭೆಟಿಯಾದಳು. ಅಂದು ದಿವ್ಯಾಳ ಮನವೊಲಿಸುವಲ್ಲಿ ಅವಳ ತಾಯಿ ಯಶಸ್ವಿಯಾದರು. ತನ್ನ ತಂದೆಯ ಸಾವಿಗೆ ಪಶ್ಚಾತ್ತಾಪವಾಗಿ ಇಳವರಸನ್‌ನನ್ನು ಬಿಟ್ಟುಬಿಡಬೇಕೆಂದು ಮಾಡಿದ ಬ್ಲಾಕ್‌ಮೇಲ್ ತಂತ್ರಕ್ಕೆ ದುಃಖದ ಮಡುವಿನಲ್ಲಿದ್ದ ದಿವ್ಯಾ ಇಲ್ಲವೆನ್ನಲಿಲ್ಲ. ಕೋರ್ಟಿನ ಮುಂದೆ ಜುಲೈ 3, 2013ರಂದು ಇಳವರಸನ್ ಮುಂದೆಯೇ ದಿವ್ಯಾ ’ನನಗೂ ಇಳವರಸನ್‌ಗೂ ಯಾವುದೇ ಸಂಬಂಧವಿಲ್ಲ’ ಎಂದುಬಿಟ್ಟಳು. ಇದರಿಂದ ಇಳವರಸನ್ ತೀವ್ರ ಆಘಾತಕ್ಕೊಳಗಾದನು. ಅವನಿಗೆ ಸ್ನೇಹಿತರು ಕುಟುಂಬ ಧೈರ್ಯ ನೀಡಿತು. ಆದರೆ ಮಾರನೇ ದಿನ ರೈಲ್ವೇ ಹಳಿಯ ಮೇಲೆ ಅವನ ಹೆಣ ಸಿಕ್ಕಾಗ ಇಡೀ ಧರ್ಮಾಪುರಿಯೇ ಬೆಚ್ಚಿಬಿದ್ದಿತು. ವಣ್ಣಿಯಾರರು ಆತ್ಮಹತ್ಯೆಯೆಂದು ಪ್ರಚಾರ ಆರಂಭಿಸಿದ್ದರು. ಇಳವರಸನ್ ಕುಟುಂಬ ಇದನ್ನು ನಂಬಲೂ ಇಂದಿಗೂ ತಯಾರಿಲ್ಲ. ಅದು ವಣ್ಣಿಯಾರರು ನಡೆಸಿದ ’ಮರ್‍ಯಾದೆಗೇಡಿ ಹತ್ಯೆ’ ಎಂದೇ ನಂಬಿದೆ. ಇದಕ್ಕೆ ಸಾಕ್ಷಿಯೆಂಬಂತೆ ವಿದ್ಯಾವಂತನಾಗಿದ್ದ ಇಳವರಸನ್ ಆತ್ಮಹತ್ಯೆ ಪತ್ರವನ್ನೂ ಬರೆದಿರಲಿಲ್ಲ. ಈ ಸಾವು ಕೇವಲ ರೈಲಿಗೆ ಸಿಕ್ಕಿರುವುದರಿಂದ ಆಗಿದೆ ಎಂದು ಶವಪರೀಕ್ಷೆಯು ಹೇಳಿದೊಡನೆ ಪೊಲೀಸರೂ ಸಹ ಆತ್ಮಹತ್ಯೆ ಎಂದು ಷರಾ ಬರೆದು ಸುಮ್ಮನಾದರು. ತನ್ನ ತಂದೆಯ ಸಾವಿಗೆ ತಾನೇ ಕಾರಣ ಎಂದು ಇಳವರಸನ್‌ನನ್ನು ಬಿಟ್ಟು ಹೋದ ದಿವ್ಯಾ ಈಗ ಅವನ ಸಾವಿಗೆ ತಾನೇ ಕಾರಣವೆಂದು ಕೊರಗುತ್ತಿರಬಹುದು. ಇಲ್ಲವೇ ಜಾತಿಯ ಮೇಲರಿಮೆ ಅವಳನ್ನೂ ಸೆಳೆದುಕೊಂಡಿರಬಹುದು.

ಅಂತರ್ಜಾತಿ ಪ್ರೇಮವೆಂಬುದು ಭಾರತದಲ್ಲಿನ ಜಾತಿವಾದಿಗಳನ್ನು ಕೆರಳಿಸುತ್ತದೆ. ಅದು ಎದುರು ಸಮುದಾಯದವನನ್ನು ಕೊಲ್ಲಲು ಹಿಂದೆಮುಂದೆ ಯೋಚಿಸುವುದಿಲ್ಲ. ಅಷ್ಟೇ ಏಕೆ ಸ್ವಂತ ಮಗಳನ್ನೇ ಕೊಲ್ಲಲು ಯೋಚಿಸುವುದಿಲ್ಲ. ’ಮರ್‍ಯಾದೆ’ ಎಂಬ ಹೆಸರಿನಲ್ಲಿ ಜಾತಿರಕ್ಷಣೆಗೆ ನಿಲ್ಲುವ ಹಿಂದೂ ಮೇಲ್ಜಾತಿಯ ಅಜ್ಞಾನ ಇಡೀ ದೇಶವನ್ನೇ ಬಲಿ ಪಡೆಯುವುದರಲ್ಲಿಯೂ ಹಿಂದೆ ಮುಂದೆ ನೋಡಲಾರದು. ಅದರಲ್ಲೂ ದಲಿತರೇನಾದರೂ ಮೇಲ್ಜಾತಿಯ ಹೆಣ್ಣನ್ನು ಇಷ್ಟಪಟ್ಟರೆ ಮುಗಿದೇಹೋಯಿತು. ಅಲ್ಲೊಂದು ಕೊಲೆ ನಡೆಯಲೇಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿಯೂ ಈ ಬೆಳವಣಿಗೆಗಳೇನು ಕಡಿಮೆಯಾಗಿಲ್ಲ. ಆಶ್ಚರ್ಯವೆಂದರೆ ಅವು ಮತ್ತಷ್ಟು ಹೆಚ್ಚಾಗುತ್ತಲೇ ಇವೆ. ಕಪೋಲಕಲ್ಪಿತ ’ಲವ್ ಜಿಹಾದ್’ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಪ್ರೇಮಿಗಳನ್ನು ಬಲಿಪಡೆಯುವ ಹಿಂದೂ ಮೂಲಭೂತವಾದವು, ’ಜಾತಿ ಮರ್‍ಯಾದೆ’ ಹೆಸರಿನಲ್ಲಿ ದಲಿತರನ್ನು ಬಲಿಪಡೆಯುತ್ತದೆ. ಹಿಂದೂ ಮುಸ್ಲಿಂ ಗಲಭೆಯ ವೇಳೆ ದಲಿತರನ್ನು ಹಿಂದೂಗಳನ್ನಾಗಿಸಿಕೊಳ್ಳುವ ಹಿಂದುತ್ವ, ಅಂತರ್ಜಾತಿ ಪ್ರೇಮದ ವೇಳೆ ಅದೇ ದಲಿತರನ್ನು ಅಸ್ಪೃಶ್ಯರನ್ನಾಗಿ ನೋಡುತ್ತದೆ. ದುರಂತವೆಂದರೆ ಈ ಹುನ್ನಾರ ದಲಿತರು ಹಾಗೂ ಮುಸ್ಲಿಮರಿಬ್ಬರಿಗೂ ಸರಿಯಾಗಿ ಅರ್ಥವಾಗಿಲ್ಲದಿರುವುದು.


ಇದನ್ನೂ ಓದಿ: ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...