ಚಲಿಸುತ್ತಿದ್ದ ಆಂಬ್ಯುಲೆನ್ಸ್ನಿಂದ ಬಿದ್ದು ದಲಿತ ಯುವತಿ ಸಾವನ್ನಪ್ಪಿದ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದ್ದು, ಸಾವಿನ ಸುತ್ತ ಹಲವು ರೀತಿಯ ಅನುಮಾನ ವ್ಯಕ್ತವಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಯುವತಿಯ ಸಹೋದರನನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಂಜನಾ ಅಹಿರ್ವಾರ್ ಮೃತ ಯುವತಿ. ಈಕೆ, ಭಾನುವಾರ (ಮೇ 26) ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಹಲ್ಲೆಗೀಡಾಗಿ ಸಾವನ್ನಪ್ಪಿದ ಚಿಕ್ಕಪ್ಪನ ಶವವನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿದ್ದಳು. ಮಾರ್ಗಮಧ್ಯೆ ಆಂಬ್ಯುಲೆನ್ಸ್ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ವರದಿ ಹೇಳಿದೆ.
ಮೃತಳ ಸಹೋದರನನ್ನು ಹೊಡೆದು ಸಾಯಿಸಲಾಗಿತ್ತು!
ಕಿರುಕುಳ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಕೆಲವರು ತನ್ನ ಸಹೋದರನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಅಂಜನಾ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅಂಜನಾ ಅವರ ಚಿಕ್ಕಪ್ಪ ರಾಜೇಂದ್ರ ಅಹಿರ್ವಾರ್ ಅವರನ್ನು ಕೆಲವರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಪ್ಪನಿಗೂ ಥಳಿಸಿ ಹತ್ಯೆ
ಸಾಗರ್ ಜಿಲ್ಲೆಯ ಖುರೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಯುವತಿಯ ಚಿಕ್ಕಪ್ಪ 24 ವರ್ಷದ ರಾಜೇಂದ್ರ ಅಹಿರ್ವಾರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ತಿಳಿಸಿದ್ದಾರೆ.
ತನಗೆ ಕಿರುಕುಳ ನೀಡುತ್ತಿದ್ದ ಕೆಲವರು ಆಗಸ್ಟ್ 24, 2023ರಂದು ತನ್ನ ಸಹೋದರ ನಿತಿನ್ ಅಹಿರ್ವಾರ್ ಅಲಿಯಾಸ್ ಲಾಲು ಅವರನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಅಂಜನಾ ಆರೋಪಿಸಿದ್ದರು. ಘಟನೆ ಬೆಳಕಿಗೆ ಬಂದ ನಂತರ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬರೋಡಿಯಾ ನೊನಾಗಿರ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.
ಮೃತ ಅಂಜನಾ ಚಿಕ್ಕಪ್ಪ ರಾಜೇಂದ್ರ ಅಹಿರ್ವಾರ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಅವರ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಆಂಬ್ಯುಲೆನ್ಸ್ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ನಡೆಯುವಾಗ ಅಂಬ್ಯುಲೆನ್ಸ್ ಚಾಲಕ ಮತ್ತು ರಾಜೇಂದ್ರ ಅಹಿರ್ವಾರ್ ಅವರ ಕುಟುಂಬದ ಸದಸ್ಯರು ಮೃತದೇಹದ ಜೊತೆಗಿದ್ದರು ಎಂದು ಎಸಿಪಿ ಸಿನ್ಹಾ ಹೇಳಿದ್ದಾರೆ.
ಹಳೆಯ ಪ್ರಕರಣವನ್ನು ಇತ್ಯರ್ಥಪಡಿಸಲು ಒತ್ತಾಯಿಸಿ ರಾಜೇಂದ್ರ ಅಹಿರ್ವಾರ್ ಅವರನ್ನು ಕೊಲೆ ಮಾಡಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಎಸಿಪಿ, ತನಿಖೆಯಿಂದ ಎಲ್ಲಾ ಸತ್ಯಗಳು ಬಹಿರಂಗಗೊಳ್ಳಲಿವೆ ಎಂದು ಹೇಳಿದ್ದಾರೆ.
ರಾಜೇಂದ್ರ ಅಹಿರ್ವಾರ್ ಮೇಲೆ ಐವರು ದಾಳಿ ನಡೆಸಿದ್ದಾರೆ ಎಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ
ಘಟನೆಯ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ ಪಟ್ವಾರಿ, “ರಾಜೇಂದ್ರ ಅಹಿರ್ವಾರ್ ಮೇಲೆ ಹಳೆಯ ಪ್ರಕರಣವನ್ನು ಇತ್ಯರ್ಥಕ್ಕೆ ಒತ್ತಾಯಿಸಿ ಐವರು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ. ಬಾಲಕಿ ಅಂಜನಾ ಅಂಬ್ಯುಲೆನ್ಸ್ನಿಂದ ಬೀಳುವಾಗ ಅದರಲ್ಲಿ ಚಾಲಕ, ಅಂಜನಾ ಅಹಿರ್ವಾರ್ ಮತ್ತು ರಾಜೇಂದ್ರ ಅವರ ಪೋಷಕರು ಇದ್ದರು ಎಂದು ತಿಳಿಸಿದ್ದಾರೆ.
• सागर जिले की खुरई विधानसभा के बरोदिया नोनागिर गांव में राजेन्द्र अहिरवार नामक युवक पर राजीनामा करने के दबाव में पांच लोगों द्वारा हमला किया जाता है!
• गंभीर रूप से घायल राजेन्द्र का उपचार के लिए भोपाल ले जाते समय निधन हो जाता है! 26 मई को पोस्टमार्टम के बाद शव परिजनों को…
— Jitendra (Jitu) Patwari (@jitupatwari) May 26, 2024
ಕಳೆದ ಆಗಸ್ಟ್ನಲ್ಲಿ ಬರೋಡಿಯಾ ನೊನಾಗಿರ್ನಲ್ಲಿ ಅಂಜನಾಳ ಸಹೋದರನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲಾಗಿತ್ತು. ಆಕೆಯ ಕುಟುಂಬ ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದೆ ಎಂದಿರುವ ಜಿತೇಂದ್ರ ಪಟ್ವಾರಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅವರೇ ಗೃಹ ಇಲಾಖೆ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ ದಲಿತನಾಗಿರುವುದು ಈಗ ಅಪರಾಧವಾಗಿದೆಯೇ? ಬುಡಕಟ್ಟು ಜನಾಂಗದ ದೌರ್ಜನ್ಯದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ, ದಲಿತ ದೌರ್ಜನ್ಯದಲ್ಲೂ ಉದಾಹರಣೆಯಾಗಬೇಕೆ? ಎಂದು ಪ್ರಶ್ನಿಸಿದ್ದಾರೆ.
ಖುರೈ ಬೈಪಾಸ್ನಲ್ಲಿ ಅಂಬ್ಯುಲೆನ್ಸ್ನಿಂದ ಬಿದ್ದು ಅಂಜನಾ ಅಹಿರ್ವಾರ್ ಸಾವು
ಚಿಕ್ಕಪ್ಪ ರಾಜೇಂದ್ರ ಅಹಿರ್ವಾರ್ ಹತ್ಯೆಗೀಡಾದ ಖುರೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಅಂಜನಾ ಅಂಬ್ಯುಲೆನ್ಸ್ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಅಂಜನಾಳದ್ದು ಆಕಸ್ಮಿಕ ಸಾವ? ಇಲ್ಲ ಆಕೆಯನ್ನೂ ಹತ್ಯೆ ಮಾಡಲಾಗಿದೆಯಾ? ಎಂಬುವುದು ತನಿಖೆಯಿಂದ ಬಯಲಾಗಬೇಕಿದೆ.
ಇದನ್ನೂ ಓದಿ : ಪೋರ್ಶೆ ಕಾರು ಅಪಘಾತ ಪ್ರಕರಣ: ಆರೋಪಿಯ ರಕ್ತ ಪರೀಕ್ಷೆ ವರದಿ ತಿರುಚಿದ್ದ ಇಬ್ಬರು ವೈದ್ಯರ ಬಂಧನ