ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಲಿಲ್ಲ ಎಂಬ ಉದ್ದೇಶದಿಂದ 28 ವರ್ಷದ ದಲಿತ ವ್ಯಕ್ತಿಯನ್ನು ಐವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ಥಳಿಸಿರುವ ಘಟನೆ ನಡೆದಿದ್ದು ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಲಾಸ್ಪುರದ ರಥಿವಾಸ್ ಗ್ರಾಮದಲ್ಲಿ ಘಟನೆ ನಡೆದಿದ್ದು, “ನನ್ನ ವಿರುದ್ಧ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ” ಎಂದು ಹಲ್ಲೆಗೊಳಗಾದ ವ್ಯಕ್ತಿ ನೋವು ನೋಡಿಕೊಂಡಿದ್ದಾರೆ.
ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಇತರ ಐಪಿಸಿ ಸೆಕ್ಷನ್ಗಳ ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಸೋಮವಾರ ಎಫ್ಐಆರ್ ದಾಖಲಿಸಲಾಗಿದೆ. ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿ ಭಾನುವಾರ ರಾತ್ರಿ 10.15 ರ ಸುಮಾರಿಗೆ ಗ್ರಾಮದ ಹನುಮಾನ್ ಮಂದಿರದ ಬಳಿ ಕುಳಿತಿದ್ದಾಗ ಮನೀಶ್ ಸಿಂಗ್ ಮತ್ತು ಅವರ ಸೋದರಸಂಬಂಧಿ ಇವರತ್ತ ಬಂದಿದ್ದರು.
“ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂಜಿತ್ ರಾಠಿ ನನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿ ಅವರ ಮನೆಗೆ ಕರೆದುಕೊಂಡು ಹೋದರು. ನನ್ನನ್ನು ಮನೆಯೊಳಗೆ ಕರೆದೊಯ್ದರು ಮತ್ತು ರಾಠಿ ಮತ್ತು ಅವರ ಸ್ನೇಹಿತರು ಲಾಠಿಗಳಿಂದ ಹೊಡೆದರು. ನಂತರ, ಅವರು ನನ್ನ ಮೇಲೆ ಜಾತಿ ನಿಂದನೆಗಳನ್ನು ಮಾಡಿದರು, ಕೊಲ್ಲುವುದಾಗಿ ಬೆದರಿಕೆ ಹಾಕಿದರು” ಎಂದು ದಲಿತ ವ್ಯಕ್ತಿ ದೂರು ನೀಡಿದ್ದಾರೆ.
“ಒಬ್ಬ ವ್ಯಕ್ತಿ ತನ್ನ ಪಿಸ್ತೂಲ್ ಅನ್ನು ನನ್ನ ತಲೆಗೆ ತೋರಿಸಿ ಕೊಲ್ಲುವುದಾಗಿ ಹೇಳಿದನು. ಚುನಾವಣೆಯಲ್ಲಿ ರಾಠಿಗೆ ಏಕೆ ಮತ ಹಾಕಲಿಲ್ಲ ಎಂದು ಪ್ರಶ್ನಿಸಿದನು. ನನ್ನನ್ನು ರಾಠಿಯ ಮನೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿದ ನನ್ನ ಪೋಷಕರು ಸ್ಥಳಕ್ಕೆ ಬಂದರು. ನನ್ನನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು. ನಂತರ, ನನ್ನನ್ನು ಬಿಲಾಸ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಪೊಲೀಸರಿಗೆ ವಿವರಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಯನ್ನು ಮನೆಗೆ ಕರೆತರಲಾಗಿದೆ, ಯಾವುದೇ ಬೆದರಿಕೆಗಳು ಅಥವಾ ಇನ್ನಾವುದೇ ಸಮಸ್ಯೆಗಳನ್ನು ಎದುರಿಸಿದರೆ ಮಾಹಿತಿ ನೀಡುವಂತೆ ಕುಟಂಬಕ್ಕೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿರಿ: ಉತ್ತರಪ್ರದೇಶ: ಮಲಗುಂಡಿಗೆ ಸಿಲುಕಿ ಒಂದೇ ಕುಟುಂಬ ನಾಲ್ವರು ನಿಧನ
ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಗ್ರಾಮದವರಾಗಿದ್ದು, ಕಳೆದ ವರ್ಷ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ದಲಿತ ವ್ಯಕ್ತಿಯ ದೇಹದ ಮೇಲೆ ಲಾಠಿಗಳಿಂದ ಹೊಡೆದ ಗುರುತುಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನನ್ನ ಜಾತಿಯ ಕಾರಣಕ್ಕಾಗಿ ಐವರು ಆರೋಪಿಗಳು ನನ್ನನ್ನು ಅಪಹರಿಸಿ, ಥಳಿಸಿ, ಜೀವ ಬೆದರಿಕೆ ಹಾಕಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ. ತಮ್ಮ ಕುಟುಂಬವೂ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಐಪಿಸಿ ಸೆಕ್ಷನ್ 148, 149, 323, 342, 365, 506, ಶಸ್ತ್ರಾಸ್ತ್ರ ಕಾಯ್ದೆ 25 (1-ಬಿ ಎ) ಮತ್ತು ಎಸ್ಸಿ/ಎಸ್ಟಿ ಕಾಯ್ದೆ 3(1) (ಆರ್) ಅಡಿಯಲ್ಲಿ ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.