ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.
‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದು, ”ಬಿಜೆಪಿಗರು ವಿಜ್ಞಾನಿಗಳಿಗೆ ವಿಜ್ಞಾನವನ್ನು ವಿವರಿಸುತ್ತಾರೆ. ಇತಿಹಾಸಕಾರರಿಗೆ ಇತಿಹಾಸವನ್ನು ವಿವರಿಸುತ್ತಾರೆ. ಅಲ್ಲದೆ ಸೈನ್ಯ ಹಾಗೂ ವಾಯುಪಡೆಗೂ ಪಾಠ ಮಾಡಲು ಹೋಗುತ್ತಾರೆ. ಆದರೆ ಅವರಿಗೆ ಅದ್ಯಾವುದರ ಬಗ್ಗೆಯೂ ತಿಳುವಳಿಕೆ ಇಲ್ಲ” ಎಂದು ಕುಟುಕಿದ್ದಾರೆ
ದೇಶದಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿ ಸೇರಿಕೊಂಡು ಸಂವಿಧಾನದ ಮೇಲೆ ದಾಳಿ ನಡೆಸುತ್ತಿವೆ. ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿತ್ತು. ಅಲ್ಲದೆ ಜನರಿಗೆ ಬೆದರಿಕೆ ಹಾಕುವ ಮೂಲಕ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿತ್ತು. ಆದರೂ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಯಾತ್ರೆಯ ಪ್ರಭಾವ ಇನ್ನೂ ಹೆಚ್ಚಾಯಿತು ಎಂದು ಭಾರತೀಯ ಅಮೆರಿಕನ್ ಸಮುದಾಯಕ್ಕೆ ರಾಹುಲ್ ತಿಳಿಸಿದರು.
ಇದನ್ನೂ ಓದಿ: ಮೋದಿಯವರು ಸ್ವಯಂ ಪಟ್ಟಾಭಿಷೇಕದ ಗೀಳಿಗೆ ಒಳಗಾಗಿದ್ದು, ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ: ಕಾಂಗ್ರೆಸ್ ಟೀಕೆ
ರಾಹುಲ್ ಗಾಂಧಿ ಭಾಷಣದ ಪ್ರಮುಖ ವಿಚಾರಗಳ ಪಟ್ಟಿ ಇಲ್ಲಿದೆ:
ಭಾರತದಲ್ಲಿ ಇಂದು ಬಡವರು ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರು ಅಸಹಾಯಕರಾಗಿದ್ದಾರೆ. ನೀವು (ಮುಸ್ಲಿಮರು) ಹೇಗೆ ದಾಳಿಗೆ ಒಳಗಾಗುತ್ತಿದ್ದೀರಿ, ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರೂ ಅದೇ ಭಾವನೆ ಹೊಂದಿದ್ದಾರೆ ಎಂದು ನಾನು ಖಾತರಿಪಡಿಸುತ್ತೇನೆ. ನೀವು ದ್ವೇಷದಿಂದ ದ್ವೇಷವನ್ನು ಸರಿಮಾಡಲು ಸಾಧ್ಯವಿಲ್ಲ, ಆದರೆ ಅದು ಪ್ರೀತಿಯಿಂದ ಮಾತ್ರ ಸಾಧ್ಯ” ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆಸಿದ್ದೆವು. ಜಾತಿ ಗಣತಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡುವಂತೆ ನಾವು ಬಿಜೆಪಿಯನ್ನು ಕೇಳುತ್ತಿದ್ದೇವೆ ಆದರೆ ಅವರು ಬಿಡುಗಡೆ ಮಾಡುತ್ತಿಲ್ಲ, ನಾವು ಅಧಿಕಾರಕ್ಕೆ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ.
ಜಗತ್ತು ತುಂಬಾ ದೊಡ್ಡದಾಗಿದೆ ಮತ್ತು ಯಾವುದೇ ವ್ಯಕ್ತಿಗೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಒಂದು ಗುಂಪಿನ ಜನರಿದ್ದಾರೆ, ಅವರು ಎಲ್ಲವನ್ನೂ ತಿಳಿದಿದ್ದಾರೆ ಎಂದು ನಂಬಿದ್ದಾರೆ. ಅವರು ದೇವರಿಗಿಂತ ಹೆಚ್ಚಿನದನ್ನು ತಿಳಿದುಕೊಂಡಿದ್ದಾರೆ ಎಂದು ಅವರು ಭಾವಿಸುತ್ತಾರೆ ಅದು ಒಂದು ರೋಗ…” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿಯವರನ್ನು ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ಅವರು ಬ್ರಹ್ಮಾಂಡ ಕಾರ್ಯನಿರ್ವಹಿಸುವ ಬಗ್ಗೆ ಮಾಡುವ ವಿವರಣೆಗೆ ದೇವರು ನಾನೇನು ಸೃಷ್ಠಿ ಮಾಡಿದ್ದೇನೆ ಎಂಬ ಗೊಂದಲಕ್ಕೊಳಗಾಗುತ್ತಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ..
ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಕಾಂಗ್ರೆಸ್ನ ನಿಲುವು ಸ್ಪಷ್ಟವಾಗಿದೆ. ಮಸೂದೆಯನ್ನು ಅಂಗೀಕರಿಸಲು ನಾವು ಬದ್ಧರಾಗಿದ್ದೇವೆ. ರಾಜಕೀಯ ವ್ಯವಸ್ಥೆ, ವ್ಯವಹಾರಗಳು ಮತ್ತು ದೇಶವನ್ನು ನಡೆಸುವಲ್ಲಿ ನಾವು ಮಹಿಳೆಯರಿಗೆ ಅರ್ಹವಾದ ಸ್ಥಾನವನ್ನು ನೀಡಬೇಕು ಎಂದು ಅವರು ಹೇಳಿದರು.