ಒಂದು ಟನ್ ಕಬ್ಬಿಗೆ ಕನಿಷ್ಟ 3500 ರೂ ನಿಗಧಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ನ್ಯಾಯಯುತ ಬೆಲೆ ನಿಗಧಿಯಾಗಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಇಂದು ದಾವಣಗೆರೆಯಲ್ಲಿ ಹೈವೆ ಬಂದ್ ಮಾಡಿ, ರಸ್ತೆ ಮಧ್ಯದಲ್ಲಿಯೇ ರಕ್ತದಾನ ಮಾಡಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ತೇಜಸ್ವಿ ಪಟೇಲ್ರವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ರೈತರ ಆದಾಯ ದ್ವಿಗುಣ ಮಾಡ್ತೀವಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ರೈತರು ಬೆಳೆದ ಬೆಳೆಗಳಿಗೆ ಯಾವುದೇ ಬೆಲೆ ಹೆಚ್ಚಳ ಆಗುತ್ತಿಲ್ಲ. ಈಗ ಎಫ್ ಆರ್ ಪಿ ರೇಟ್ ಹೆಚ್ಚು ಮಾಡಿದ್ದೀವಿ ಎನ್ನುತ್ತಾರೆ. ಆದರೆ ಅದರಿಂದ ರೈತರಿಗೆ ಯಾವುದೇ ಲಾಭವಾಗುತ್ತಿಲ್ಲ” ಎಂದು ಕಿಡಿಕಾರಿದರು.
ಟನ್ ಕಬ್ಬಿಗೆ ಕನಿಷ್ಟ 3500 ರೂ ನಿಗಧಿ ಮಾಡಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಹೈವೆ ಬಂದ್ ಮಾಡಿ ರೈತರ ಪ್ರತಿಭಟನೆ@BSBommai @CMofKarnataka pic.twitter.com/6qrVaJvk9U
— Naanu Gauri (@naanugauri) August 12, 2022
ಮೊದಲು ಒಂದು ಟನ್ ಕಬ್ಬಿಗೆ 90 ಕೆಜಿ ಸಕ್ಕರೆ ಇಳುವರಿ ಬಂದರೆ ಕನಿಷ್ಟ ದರ ನಿಗಧಿ ಮಾಡುತ್ತಿದ್ದರು. ಆದರೆ ಈಗ ಎನ್ಡಿಎ ಸರ್ಕಾರ ಕನಿಷ್ಟ ಸಕ್ಕರೆ ಇಳುವರಿಯನ್ನು 102 ಕೆಜಿಗೆ ಏರಿಸಿದೆ. ಹಾಗಾಗಿ ಎಫ್ ಆರ್ ಪಿ ರೇಟ್ ಹೆಚ್ಚು ಮಾಡುವುದರಿಂದ ಅದು ಸಕ್ಕರೆ ಕಾರ್ಖಾನೆಗೆ ಲಾಭ ಹೊರತು ಬೆಳೆಗಾರರಿಗಲ್ಲ. ರೈತರ ಹೆಸರೇಳಿಕೊಂಡು ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಚಿಲ್ಲರೆ ದುಡ್ಡು ಕೊಡುವುದನ್ನು ಸರ್ಕಾರ ದೊಡ್ಡ ಪ್ರಚಾರ ಮಾಡುತ್ತದೆ. ಆದರೆ ಬಂಡವಾಳಶಾಹಿಗಳಿಗೆ 10 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡುವುದನ್ನು ಗೌಪ್ಯವಿಡುತ್ತಾರೆ ಏಕೆ ಎಂದು ಪ್ರಶ್ನಿಸಿದರು.
ರಕ್ತದಾನ ಮಾಡುವ ಮೂಲಕ ರೈತರ ಪ್ರತಿಭಟನೆ. ಟನ್ ಕಬ್ಬಿಗೆ 3500 ರೂ ನಿಗಧಿ ಮಾಡಲು ಒತ್ತಾಯ.@CMofKarnataka @BSBommai pic.twitter.com/c91zyXVUo6
— Naanu Gauri (@naanugauri) August 12, 2022
ಭಾರೀ ಮಳೆಗೆ 10 ಎಕರೆ ಕಬ್ಬು ನಷ್ಟ ಮಾಡಿಕೊಂಡ ರೈತ ಪೂಜಾರಿ ಕಲ್ಲೇಶ್ವಪ್ಪ ಮತ್ತು 6 ಎಕರೆ ಕಬ್ಬು ನಷ್ಟ ಮಾಡಿಕೊಂಡ ಪ್ರಸನ್ನ ಕುಮಾರ್ ಎಂಬುವವರು ರಕ್ತದಾನ ಮಾಡಿ ಪ್ರತಿಭಟಿಸಿದರು. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು 6 ಕ್ಕೂ ಹೆಚ್ಚು ಜನ ನಡು ರಸ್ತೆಯಲ್ಲಿಯೇ ರಕ್ತದಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ರೈತರು ತಾವು ಬೆಳೆದಿರುವ ಕಡಲೆ ಬೀಜವನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ಸರ್ಕಾರದ ಮೇಲಿನ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಹಕ್ಕೊತ್ತಾಯ ಪತ್ರ ಸ್ವೀಕರಿಸುವವಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ; ತೀರ್ಥಹಳ್ಳಿ: ಸಮಾಜವಾದಿ-ಗಾಂಧಿವಾದಿ-ವಿಶ್ವಮಾನವರ ಕರ್ಮಭೂಮಿಯಲ್ಲಿ ಸಂಕುಚಿತ ರಾಜಕೀಯ!