ಆಕ್ಸಿಜನ್ ಕೊರತೆಯಿಂದಾಗಿ ಕಳೆದ ಕೆಲವು ದಿನಗಳಿಂದ ಪ್ರಚಲಿತದಲ್ಲಿರುವ ದೆಹಲಿ ಗಂಗಾರಾಮ್ ಆಸ್ಪತ್ರೆಯಲ್ಲಿ ತೀವ್ರ ಸೋಂಕಿನಿಂದ ಬಳಲುತ್ತಿದ್ದ 25 ಕೋವಿಡ್ ರೋಗಿಗಳು ಸಾವನಪ್ಪಿದ್ದಾರೆ ಎಂದು ಅಲ್ಲಿನ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 25 ರೋಗಿಗಳು ಮೃತಪಟ್ಟಿದ್ದಾರೆ. ಅವರು ತೀವ್ರ ಸೋಂಕಿನಿಂದ ಬಾಧಿತರಾಗಿದ್ದೇ ಅದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ ಸಂಖ್ಯೆ. ಆದರೆ ಆಕ್ಸಿಜನ್ ಪ್ರಮಾಣ ಇನ್ನು ಕೆಲವೇ ಗಂಟೆಗಳಿಗೆ ಮಾತ್ರ ಸಾಕಾಗುವಂತಿದ್ದು ಇನ್ನು 60 ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ, ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶ ಬೇಕಾಗಿದೆ ಎಂದು ಅವರು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದುವರೆಗಿನ ಸಾವುಗಳಿಗೆ ಆಕ್ಸಿಜನ ಕೊರತೆ ಎಂದು ನಾನು ಹೇಳುವುದಿಲ್ಲ. ಅವರು ಕಷ್ಟಕರ ಪರಿಸ್ಥಿತಿಯಲ್ಲಿದ್ದರು. ಆದರೆ ನಮ್ಮ ಆಸ್ಪತ್ರೆಗೆ ಶೀಘ್ರ ಆಕ್ಸಿಜನ್ ಬೇಕಾಗಿದೆ. ದೆಹಲಿಗೆ ಗಡಿಗಳಿಗೆ ಆಕ್ಸಿಜನ್ ಬಂದಿದೆ ಎನ್ನಲಾಗುತ್ತಿದೆ. ಅದನ್ನು ಹೇಗಾದರೂ ಮಾಡಿ ಬೇಗ ತಲುಪಿಸಿ ಎಂದು ಮನವಿ ಮಾಡಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರಿಗೆ ಪತ್ರ ಬರೆದಿದ್ದು, ಗುರುವಾರ ಸಂಜೆ ವೇಳೆಗೆ ಆರು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಲಿದೆ. ಆದಷ್ಟು ಬೇಗ ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಭಿಕ್ಷೆಯನ್ನಾದರೂ ಬೇಡಿ, ಸಾಲ ಆದರೂ ತನ್ನಿ ಇಲ್ಲವೇ ಕದ್ದುಕೊಂಡಾದರೂ ಬನ್ನಿ ಎಂದು ಆಮ್ಲಜನಕ ಪೂರೈಕೆಯ ಕುರಿತು ಕೇಂದ್ರವನ್ನು ಕೋರ್ಟ್ ಎಚ್ಚರಿಸಿದೆ. ದೆಹಲಿಯ ಆಮ್ಲಜನಕ ಬಿಕ್ಕಟ್ಟನ್ನು ನಿಭಾಯಿಸಿದ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರವನ್ನು ಕಟುಪದಗಳಲ್ಲಿ ಟೀಕಿಸಿದೆ. ಆಮ್ಲಜನಕ ಮತ್ತು ವ್ಯಾಕ್ಸಿನೇಷನ್ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ತನ್ನಿ ಎಂದು ಸುಪ್ರೀಂ ಕೋರ್ಟ್ ಆಗ್ರಹಿಸಿದೆ.
ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್