ಭಾನುವಾರದಿಂದ ದೆಹಲಿಯಲ್ಲಿ ಆರಂಭವಾಗಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ಏರಿದೆ. ಗಾಯಗೊಂಡವರ ಸಂಖ್ಯೆ 150 ಕ್ಕೂ ಹೆಚ್ಚಿದೆ. 16 ವರ್ಷದ ಬಾಲಕ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆಯೂ ತೀವ್ರ ಹಲ್ಲೆಯಾಗಿದೆ.
ಈ ನಡುವೆ ಗಾಯಗೊಂಡ ಮುಸ್ಲಿಮರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಕ್ತ ರಕ್ಷಣೆ ನೀಡಬೇಕೆಂದು ದೆಹಲಿ ಹೈಕೋರ್ಟ್ ತಡರಾತ್ರಿ ಆದೇಶದಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಮೊದಲು ಈಶಾನ್ಯ ದೆಹಲಿಯ ಮುಸ್ತಾಬಾದ್ನ ಅಲ್ ಹಿಂದ್ ಆಸ್ಪತ್ರೆಯ ವೈದ್ಯರು ಸಂಜೆ 4 ಗಂಟೆಯಿಂದಲೂ ಸಹ ಪೊಲೀಸ್ ರಕ್ಷಣೆಗಾಗಿ ಪರಿತಪಿಸುತ್ತಿದ್ದರು. ಆದರೆ ಪೊಲೀಸರು ರಕ್ಷಣೆ ಕೊಡಲು ನಿರಾಕರಿಸಿದ್ದರಿಂದ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋರ್ಟ್ನಲ್ಲಿ ಮನವಿ ಮಾಡಿದ್ದರು.
ಬುಧವಾರ ಮುಂಜಾನೆ 1:42 ಕ್ಕೆ ಕೊನೆಗೊಂಡ ತುರ್ತು ಸಭೆಯಲ್ಲಿ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಈಶಾನ್ಯ ದೆಹಲಿಯ ಮುಸ್ತಾಬಾದ್ನಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಗಾಯಗೊಂಡ ಸುಮಾರು 20 ಜನರನ್ನು ತಕ್ಷಣ ಚಿಕಿತ್ಸೆಗಾಗಿ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿ ಎಸ್.ಮುರಳಿಧರ್ ಮತ್ತು ನ್ಯಾಯಮೂರ್ತಿ ಎ.ಜೆ. ಭಂಭಾನಿಯವರ ಪೀಠವು ನ್ಯಾಯಮೂರ್ತಿ ಮುರಳೀಧರ್ ಅವರ ನಿವಾಸದಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದೆ.
“ಇದು ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಿ.ಎಸ್. ಸಿಸ್ತಾನಿ ಅವರು ದೆಹಲಿಯಲ್ಲಿಲ್ಲದ ಕಾರಣದಿಂದ, ಅವರ ಆದೇಶದ ಮೇರೆಗೆ ನಮ್ಮಲ್ಲಿ ಒಬ್ಬರಾದ (ಎಸ್. ಮುರಳೀಧರ್, ಜೆ) ಅವರ ನಿವಾಸದಲ್ಲಿ ಬೆಳಿಗ್ಗೆ 12:30 ಕ್ಕೆ (26.2.2020) ಸಭೆ ಕರೆಯಲಾಗಿದೆ. ಎಸ್. ಮುರಳೀಧರ್, ಜೆರವರಿಗೆ ವಕೀಲ ಸುರೂರ್ ಮಾಂಡರ್ ಅವರು ಕರೆ ಮಾಡಿ “ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಗೆ ತೀವ್ರವಾಗಿ ಗಾಯಗೊಂಡ ಕೆಲವು ಗಾಯಾಳುಗಳನ್ನು ಸ್ಥಳಾಂತರಿಸಲು ಸಾಧ್ಯವಾಗದ ಭೀಕರ ಸಂದರ್ಭಗಳನ್ನು ವಿವರಿಸಿದರು. ನ್ಯೂಮುಸ್ತಾಬಾದ್ನ ಅಲ್ ಹಿಂದ್ ಆಸ್ಪತ್ರೆ ಸಣ್ಣ ಆಸ್ಪತ್ರೆಯಾಗಿದ್ದು, ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳ ಕೊರತೆಯಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಶಾದ್ ಗಾರ್ಡನ್ನ ಜಿಟಿಬಿ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ಗಳಿಗೆ ರಕ್ಷಣೆ ಕೊಡುವಂತೆ ಪೊಲೀಸರಿಗೆ ಆದೇಶಿಸಲು ಮನವಿ ಮಾಡಿದ್ದರು”.
ಗಾಯಗೊಂಡ ರೋಗಿಗಳ ಸ್ಥಳಾಂತರಕ್ಕೆ ಪೊಲೀಸರು ಅಸಹಕಾರ ತೋರಿದ ಬೆನ್ನಲ್ಲಿ ಆಸ್ಪತ್ರೆಯ ಅಧಿಕಾರಿಗಳು ತಮ್ಮ ಸಂಕಟವನ್ನು ಎತ್ತಿ ಹಿಡಿಯಲು ಸಾಮಾಜಿಕ ಮಾಧ್ಯಮಗಳತ್ತ ಮುಖ ಮಾಡಿದ್ದರು.
ಈ ಕುರಿತ ತಡರಾತ್ರಿ ವಿಚಾರಣೆಯಲ್ಲಿ ಇಬ್ಬರು ನ್ಯಾಯಾಧೀಶರು ನಿರ್ದೇಶನ ನೀಡಿದ ನಂತರ ದೆಹಲಿ ಪೊಲೀಸ್ ಸಲಹೆಗಾರ ಸಂಜಯ್ ಘೋಶ್ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ ಹಿಂದ್ ಆಸ್ಪತ್ರೆಯ ಡಾ.ಅನ್ವರ್ ಅವರೊಂದಿಗೆ ಸ್ಪೀಕರ್ ಫೋನ್ನಲ್ಲಿ ಮಾತನಾಡಿ ರಕ್ಷಣೆ ನೀಡಲು ಒಪ್ಪಿಕೊಂಡಿದ್ದಾರೆ.
“ಅಲ್ ಹಿಂದ್ ಆಸ್ಪತ್ರೆಯಲ್ಲಿ ಸಂಜೆ 4 ಗಂಟೆಯಿಂದ ಡಾ. ಅನ್ವರ್ ಪೊಲೀಸರ್ ಸಹಾಯಕ್ಕಾಗಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ಈ ನಡುವೆ ಇಬ್ಬರು ಗಾಯಾಳುಗಳು ಮೃತಪಟ್ಟಿದ್ದಾರೆ. ಇನ್ನು ಸುಮಾರು 22 ಮಂದಿ ಗಾಯಳುಗಳು ಚಿಕಿತ್ಸೆಯಲ್ಲಿದ್ದಾರೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯದ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪೊಲೀಸ್ ಉಪ ಆಯುಕ್ತ (ಅಪರಾಧ) ರಾಜೇಶ್ ಡಿಯೊ ಮತ್ತು ಡಿಸಿಪಿ (ಪೂರ್ವ) ದೀಪಕ್ ಗುಪ್ತಾ ಅವರು ತಕ್ಷಣ ಆಸ್ಪತ್ರೆಗೆ ತಲುಪುವಂತೆ ಸೂಚನೆ ನೀಡಲಾಯಿತು.
“ಈ ಹಂತದಲ್ಲಿ ನ್ಯಾಯಾಲಯವು ಪ್ರಾಥಮಿಕವಾಗಿ ಗಾಯಗೊಂಡವರ ಜೀವನದ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಅವರಿಗೆ ಅಗತ್ಯವಿರುವ ತಕ್ಷಣದ ವೈದ್ಯಕೀಯ ಚಿಕಿತ್ಸೆ ಮತ್ತು ಆ ಉದ್ದೇಶಕ್ಕಾಗಿ ಗಾಯಗೊಂಡವರನ್ನು ಸುರಕ್ಷಿತವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತಲುಪಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಮೂರ್ತಿ ಮುರಳೀಧರ್ ಅವರ ಔಪಚಾರಿಕ ನಿರ್ದೇಶನದ ನಂತರ “ಡಿಸಿಪಿ (ಪೂರ್ವ) ಅಲ್ ಹಿಂದ್ ಆಸ್ಪತ್ರೆಗೆ ತಲುಪಿ ಪೊಲೀಸರ ರಕ್ಷಣೆಯಲ್ಲಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ.
ಪೊಲೀಸರು “ಗಾಯಗೊಂಡ ಸಂತ್ರಸ್ತರ ಬಗ್ಗೆ ಮಾಹಿತಿ ಮತ್ತು ಅವರಿಗೆ ನೀಡಲಾಗುವ ಚಿಕಿತ್ಸೆಯನ್ನು ಒಳಗೊಂಡಂತೆ” ಅನುಸರಣೆಯ ಸ್ಥಿತಿ ವರದಿಯನ್ನು ಮಧ್ಯಾಹ್ನ 2: 15 ಕ್ಕೆ ನ್ಯಾಯಾಲಯದ ಮುಂದೆ ಇಡಬೇಕು ಮತ್ತು ತಕ್ಷಣವೇ ಈ ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರಬೇಕು ಎಂದು ನ್ಯಾಯಾಧೀಶರು ಆದಶಿಸಿದ್ದಾರೆ.
After high court judge’s intervention, doctors of Al Hind Hospital was informed that DCP Police will escort ambulances & assure safe exit of injured people. 5 patient already evacuated, This is shameful for our democracy that we need court’s intervention to provide medical aid
— Harjit Singh Bhatti (@DrHarjitBhatti) February 25, 2020
ಜನರಿಗೆ ಅಗತ್ಯ ಚಿಕಿತ್ಸೆ ಮತ್ತು ರಕ್ಷಣೆ ಒದಗಿಸಲು ಸಹ ನ್ಯಾಯಾಲಯ ಆದೇಶ ನೀಡಬೇಕು ಎಂಬುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ನಾಚಿಗೇಡಿನ ವಿಷಯ ಎಂದು ಡಾ.ಹರ್ಜಿತ್ ಸಿಂಗ್ ಎಂಬುವವರು ಟ್ವಿಟ್ಟರ್ನಲ್ಲಿ ದೆಹಲಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.