ದಕ್ಷಿಣ ದೆಹಲಿಯ ಲಜಪತ್ ನಗರದಲ್ಲಿ ಕೊರೊನಾ ಪರೀಕ್ಷೆಗಾಗಿ ಕಾಯುತ್ತಿದ್ದ ವಲಸೆ ಕಾರ್ಮಿಕರ ಗುಂಪಿನ ಮೇಲೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (ಎಸ್ಡಿಎಂಸಿ) ಸಿಬ್ಬಂದಿಗಳು ಸೋಂಕು ನಿವಾರಕ ಸಿಂಪಡನೆ ಮಾಡಿದ ಅಘಾತಕಾರಿ ಘಟನೆ ನಡೆದಿದೆ.
ನೂರಾರು ವಲಸಿಗ ಕಾರ್ಮಿಕರು ಶ್ರಮಿಕ್ ವಿಶೇಷ ರೈಲಿಗೆ ಹತ್ತುವ ಮೊದಲು ಕೊರೊನಾ ವೈರಸ್ ಪರೀಕ್ಷೆ ಮಾಡಿಸಲು ಲಜಪತ್ ನಗರದ ಶಾಲೆಯ ಹೊರಗೆ ಜಮಾಯಿಸಿದ್ದರು.
ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು. ಜಾಲತಾಣಿಗರು, “ವಲಸೆ ಕಾರ್ಮಿಕರನ್ನು ಮನುಷ್ಯರಂತೆ ಗೌರವದಿಂದ ನಡೆಸಿಕೊಳ್ಳಬೇಕು” ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
?Absolutely SHAMEFUL, UNSCIENTIFIC & INHUMAN act
?Migrant workers sprayed in Delhi
?Tagging CM @ArvindKejriwal & @OfficialSdmc under whom the area comes. This begs strict action against violators
?Migrant workers need to be treated with dignity ?pic.twitter.com/9Un7cYLaa7
— Saahil Murli Menghani (@saahilmenghani) May 22, 2020
ಸಿಂಪಡಿಸುವಿಕೆಯನ್ನು ನಿರ್ವಹಿಸುತ್ತಿದ್ದ ಕಾರ್ಮಿಕನಿಗೆ ಯಂತ್ರದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಈ ತಪ್ಪು ನಡೆದಿದೆ ಎಂದು ಎಸ್ಡಿಎಂಸಿ ಹೇಳಿದೆ.
ಘಟನೆಗೆ ಎಸ್ಡಿಎಂಸಿ ಅಧಿಕಾರಿಗಳು ವಲಸೆ ಕಾರ್ಮಿಕರ ಕ್ಷಮೆಯಾಚಿಸಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
“ಶಾಲೆಯು ವಸತಿ ಸಮೀಪದ ಕಾಲೊನಿಯಲ್ಲಿರುವುದರಿಂದ, ಕಾಂಪೌಂಡ್ ಮತ್ತು ರಸ್ತೆಯನ್ನು ಸೋಂಕು ರಹಿತಗೊಳಿಸಲು ನಿವಾಸಿಗಳಿಂದ ಭಾರಿ ಬೇಡಿಕೆ ಇತ್ತು. ಆದರೆ ಜೆಟ್ಟಿಂಗ್ ಯಂತ್ರದ ಒತ್ತಡದಿಂದಾಗಿ, ಕೆಲಸಗಾರನಿಗೆ ಕೆಲವು ಕ್ಷಣಗಳವರೆಗೆ ಅದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ” ಎಂದು ಎಸ್ಡಿಎಂಸಿ ಹೇಳಿದೆ.
“ಇನ್ನು ಮುಂದೆ ಕೆಲಸವ ಮಾಡುವಾಗ ಹೆಚ್ಚು ಜಾಗರೂಕರಾಗಿ ಇರಬೇಕೆಂದು ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸ್ಥಳದಲ್ಲಿ ಹಾಜರಿದ್ದ ಅಧಿಕಾರಿ ಸಾರ್ವಜನಿಕರಿಗೆ ಕ್ಷಮೆಯಾಚಿಸಿದ್ದಾರೆ” ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.
ಈ ಹಿಂದೆ ಉತ್ತರ ಪ್ರದೇಶಕ್ಕೆ ಹಿಂತಿರುಗಿರುವ ವಲಸಿಗ ಕಾರ್ಮಿಕರ ಮೇಲೆ “ಸೋಂಕುನಿವಾರಕ” ಸಿಂಪಡಿಸುತ್ತಿರುವ ಆಘಾತಕಾರಿ ವೀಡಿಯೋವೊಂದು ಹೊರಬಿದ್ದಿತ್ತು.
ಅಧಿಕಾರಿಗಳು “ಎಲ್ಲರನ್ನೂ ಸ್ವಚ್ಛಗೊಳಿಸುವುದು ಮುಖ್ಯವಾಗಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಜನರು ಹಿಂತಿರುಗಿದ್ದರಿಂದ ಜನರ ಸಂಖ್ಯೆ ಭಾರಿ ವಿಪರೀತವಾಗಿದೆ. ಆದ್ದರಿಂದ ನಮಗೆ ಉತ್ತಮವೆನಿಸಿದ್ದನ್ನು ನಾವು ಮಾಡಿದ್ದೇವೆ” ಎಂದು ಹೇಳಿದ್ದರು. ಘಟನೆಯನ್ನು ಹಲವಾರು ಜನರು ಖಂಡಿಸಿದ್ದರು.
ಓದಿ: ಉತ್ತರ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ’ಸೋಂಕುನಿವಾರಕ’ ಸಿಂಪಡಿಸುತ್ತಿರುವ ಅಘಾತಕಾರಿ ವಿಡಿಯೊ ಬಹಿರಂಗ