2001ರ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನವಾದ ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಸಂಸತ್ತಿನ ಬುನಾದಿ ಅಲುಗಾಡಿಸುವುದಾಗಿ ಅಮೆರಿಕ ಮೂಲದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೋ ಮೂಲಕ ಬೆದರಿಕೆ ಹಾಕಿದ ಬೆನ್ನಲ್ಲೇ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಸಂಸತ್ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ನಾವು ಅಲರ್ಟ್ ಆಗಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇಡೀ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಫೋಟೋವನ್ನು ಹೊಂದಿರುವ ವಿಡಿಯೋದಲ್ಲಿ, ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು, “ನರೇಂದ್ರ ಮೋದಿ ಸರ್ಕಾರ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ. ಡಿಸೆಂಬರ್ 13 ಅಥವಾ ಅದಕ್ಕಿಂತ ಮುಂಚಿತವಾಗಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.
“ನನ್ನ ಪ್ರತಿಕ್ರಿಯೆ ಸಂಸತ್ನ ಅಡಿಪಾಯ ಅಲುಗಾಡಿಸಲಿದೆ” ಎಂದು ಪನ್ನು ವಿಡಿಯೋದಲ್ಲಿ ಹೇಳಿದ್ದಾಗಿ ವರದಿಯಾಗಿದೆ.
ಈ ಹಿಂದೆ ನವೆಂಬರ್ 4ರಂದು ವಿಡಿಯೋ ಬಿಡುಗಡೆ ಮಾಡಿದ್ದ ಪನ್ನು ಏರ್ ಇಂಡಿಯಾ ವಿಮಾನಗಳನ್ನು ಹತ್ತದಂತೆ ಸಿಖ್ಖರಿಗೆ ಎಚ್ಚರಿಕೆ ಕೊಟ್ಟಿದ್ದ. ಏರ್ ಇಂಡಿಯಾ ವಿಮಾನ ಹತ್ತುವವರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸಿದ್ದ. ಅಲ್ಲದೆ ಏರ್ ಇಂಡಿಯಾ ವಿಶ್ವದಾದ್ಯಂತ ತನ್ನ ವಿಮಾನಯಾನ ಸೇವೆಗಳನ್ನು ನಿಲ್ಲಿಸಬೇಕು. ನವೆಂಬರ್ 19ರಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕು ಎಂದು ಪನ್ನು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದ್ದ.
ಇದನ್ನೂ ಓದಿ :ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಮೀಸಲಾತಿ, ಮರುಸಂಘಟನೆ ತಿದ್ದುಪಡಿ ಮಸೂದೆ ಅಂಗೀಕಾರ