‘ಭಾರತೀಯ ಜನತಾ ಪಕ್ಷವು (ಬಿಜೆಪಿ) ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸಿದ್ದು, ಅವರಿಗೆ ₹25 ಕೋಟಿ ಆಮಿಷ ಒಡ್ಡಿದೆ’ ಎಂಬ ಹೇಳಿಕೆ ಕುರಿತು ದೆಹಲಿ ಪೊಲೀಸ್ ಅಪರಾಧ ವಿಭಾಗವು ತನ್ನ ನಿವಾಸಕ್ಕೆ ಭೇಟಿ ನೀಡಿದ ಬಗ್ಗೆ ಅರವಿಂದ್ ಕೇಜ್ರಿವಾಲ್ ಶನಿವಾರ ಮೌನ ಮುರಿದಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಅಪರಾಧಗಳನ್ನು ತಡೆಯುವ ಬದಲು ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ನಾನು ಈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಇದರಲ್ಲಿ ಅವರ (ಅಧಿಕಾರಿಗಳ) ತಪ್ಪಾದರೂ ಏನು? ಅಪರಾಧ ತಡೆಯುವುದು ಅವರ ಕೆಲಸ. ಆದರೆ, ಬದಲಾಗಿ ಈ ರೀತಿಯ ನಾಟಕ ಮಾಡುತ್ತಿದ್ದಾರೆ. ಅದಕ್ಕಾಗಿಯೇ ದೆಹಲಿಯಲ್ಲಿ ಅಪರಾಧಗಳು ತುಂಬಾ ಹೆಚ್ಚುತ್ತಿವೆ’ ಎಂದು ಎಎಪಿ ರಾಷ್ಟ್ರೀಯ ಸಂಚಾಲಕರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ, ‘ಪೊಲೀಸರ ರಾಜಕೀಯ ಮೇಲಾಧಿಕಾರಿಗಳು ಅವರು (ಬಿಜೆಪಿ) ಯಾವ ಎಎಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರು ಎಂದು ನನ್ನನ್ನು ಕೇಳುತ್ತಿದ್ದಾರೆ? ಆದರೆ ನಿಮಗೆ ನನಗಿಂತ ಹೆಚ್ಚು ತಿಳಿದಿಲ್ಲವೇ? ನಿಮಗೆ ಎಲ್ಲವೂ ತಿಳಿದಿಲ್ಲವೇ? ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲದೆ, ವಿವಿಧ (ವಿರೋಧ ನೇತೃತ್ವದ ರಾಜ್ಯಗಳು) ಸರ್ಕಾರಗಳನ್ನು ಉರುಳಿಸಲು ಶಾಸಕರನ್ನು ಹೇಗೆ ಬೇಟೆಯಾಡಿದರು ಎಂಬುದು ನಿಮಗೆ ತಿಳಿದಿಲ್ಲವೇ? ಹಾಗಾದರೆ ಈ ನಾಟಕ ಯಾಕೆ’ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಬೆಳಗ್ಗೆ ಅಪರಾಧ ವಿಭಾಗದ ಅಧಿಕಾರಿಗಳು ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಹಿಂದಿನ ಸಂಜೆ ಅವರಿಗೆ ನೋಟಿಸ್ ನೀಡಲು ವಿಫಲರಾಗಿದ್ದಾರೆ. ಆದರೆ, ಈ ಬಾರಿ ತಂಡಕ್ಕೆ ಸೂಚನೆ ನೀಡಲು ಸಾಧ್ಯವಾಯಿತು. ರಾಷ್ಟ್ರ ರಾಜಧಾನಿಯಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯು ಮುಖ್ಯಮಂತ್ರಿ ಮತ್ತು ದೆಹಲಿ ಸರ್ಕಾರದ ಸಚಿವೆ ಅತಿಶಿ ವಿರುದ್ಧ ದೂರು ದಾಖಲಿಸಿತ್ತು.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಪಾತ್ರದ ಕುರಿತು ಹಣಕಾಸು ಅಪರಾಧಗಳ ತನಿಖೆ ನಡೆಸುವ ಕೇಂದ್ರೀಯ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡುವೆಯೆ ಈ ಬೆಳವಣಿಗೆಗಳು ಸಂಭವಿಸಿವೆ. ಆದರೂ, ಕೇಜ್ರಿವಾಲ್ ಅವರು ಐದು ಸಮನ್ಸ್ಗಳನ್ನು ನಿರ್ಲಕ್ಷಿಸಿ, ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ.
ಈಗಾಗಲೇ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ಕೇಜ್ರಿವಾಲ್ ಮತ್ತು ಆಪ್ ಪಕ್ಷವು ಸಮನ್ಸ್ ಅನ್ನು ‘ಅಕ್ರಮ’ ಎಂದು ಕರೆದಿದೆ. ಕೇಸರಿ ಪಕ್ಷವು ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಹೆದರಿರುವ ಕಾರಣಕ್ಕೆ ಬಿಜೆಪಿಯು ಅವರನ್ನು ಜೈಲಿಗೆ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆಪ್ ಆರೋಪಿಸಿದೆ.
ಇದನ್ನೂ ಓದಿ; ಶಾಸಕರ ಖರೀದಿ ಆರೋಪ; ಅರವಿಂದ್ ಕೇಜ್ರಿವಾಲ್ಗೆ ದೆಹಲಿ ಪೊಲೀಸರಿಂದ ನೋಟಿಸ್