ಕಸ ಗುಡಿಸುವ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್ಗಳು, ಸ್ವಚ್ಛತಾ ಕಾರ್ಮಿಕರು, ಯುಜಿಡಿ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡಬೇಕು ಹಾಗೂ ಪೌರಕಾರ್ಮಿಕರಿಗೆ ಉಚಿತ ವಸತಿ ಒದಗಿಸಬೇಕು ಸೇರಿದಂತೆ ಇತರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ನವೆಂಬರ್ 06ರಂದು ಬೆಂಗಳೂರಿನಲ್ಲಿ ಪೌರಕಾರ್ಮಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರ್ತಿ ಅಕ್ಕಮ್ಮ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ನಿರಂತರ ಹೋರಾಟದಿಂದ ಸರ್ಕಾರ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುವ ಆಶ್ವಾಸನೆ ನೀಡಿತ್ತು. ಆದರೆ ರಾಜ್ಯಾದ್ಯಂತ ಕೇವಲ 11,133 ಪೌರಕಾರ್ಮಿಕರನ್ನು ಮಾತ್ರ ಖಾಯಂ ಮಾಡಿಕೊಳ್ಳಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದಿರುವ ಕಾರ್ಮಿಕರು ಎಲ್ಲರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ AICCTU ಸಂಘದ ನೇತೃತ್ವದಲ್ಲಿನ ಬಿಬಿಎಂಪಿ ಪೌರಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ಮುಂದಾಳತ್ವದಲ್ಲಿ ಸಮಾವೇಶಕ್ಕೆ ಸಿದ್ದತೆ ನಡೆಸಿದೆ” ಎಂದರು.
ಹೋರಾಟಗಾರ್ತಿ ನಿರ್ಮಲರವರು ಮಾತನಾಡಿ, “ಸಚಿವ ಸಂಪುಟದ ನಿರ್ಣಯವನ್ನು ಉಲ್ಲಂಘಿಸಿ ನಾಡಿನ ಸ್ವಚ್ಛತಾ ಕಾರ್ಮಿಕರಿಗೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಖಾಯಮಾತಿ, ವಸತಿ, ಮಕ್ಕಳ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳಿಗಾಗಿ ಪೌರಕಾರ್ಮಿಕರ ಘನತೆಯ ಜೀವನಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದರು.
ಎಲ್ಲಾ ಸ್ವಚ್ಛತಾ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಬೇಕು, ನಿವೃತ್ತಿ ಹೊಂದಿದ ಎಲ್ಲಾ ಕಾರ್ಮಿಕರಿಗೆ ತಲಾ 10 ಲಕ್ಷ ರೂ ಮತ್ತು ಮಾಸಿಕ 10,000 ರೂ ಪಿಂಚಣಿ ನೀಡಬೇಕು, ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಮತ್ತು ಉದ್ಯೋಗ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
‘ಪೌರಕಾರ್ಮಿಕರ ಸಮಾವೇಶ’ವು ನವೆಂಬರ್ 06ರ ಬೆಳಿಗ್ಗೆ ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಇದನ್ನೂ ಓದಿ; ಪೌರಕಾರ್ಮಿಕರ ಕಾಯಮಾತಿಗೆ ತೊಡಕಾಗಿರುವ ಬೆಂಗಳೂರಿನ ಕಸದ ಮಾಫಿಯಾ ಮತ್ತು ಕಾಂಟ್ರಾಕ್ಟರ್ಗಳು