ಗಣಿಗಾರಿಕೆ ವಿರೋಧಿ ಮತ್ತು ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ 28 ವರ್ಷದ ಹಿಡ್ಮೆ ಮಾರ್ಖಂ ಅವರನ್ನು ಬಿಡುಗಡೆಗೊಳಿಸುವಂತೆ ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ಗೆ ಅಲ್ಲಿನ ನಾಗರಿಕರು ಪತ್ರ ಬರೆದಿದ್ದಾರೆ.
ದಂತೇವಾಡಾದ ಸಮೇಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಡ್ಮೆ ಮಾರ್ಖಂ ಅವರನ್ನು ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಬಂಧಿಸಿದ್ದರು. ಆದರೆ ಇದು ಅಪಹರಣ ಎಂದು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಆರೋಪಿಸಿತ್ತು. ಆದರೆ ಪೊಲೀಸರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈಗ ಹಿಡ್ಮೆ ಮೂರು ವಾರಗಳಿಂದ ಜೈಲಿನಲ್ಲಿದ್ದಾರೆ.
ಪಿಯುಸಿಎಲ್ ಹೇಳಿಕೆಯಂತೆ, “ಶಾಂತಿಯುತವಾಗಿ ನೆರೆದಿದ್ದ ಮುನ್ನೂರು ಗ್ರಾಮಸ್ಥರು ಮತ್ತು ಹೋರಾಟಗಾರರ ಮುಂದೆ ಹಿಡ್ಮೆ ಮಾರ್ಖಂ ಅವರನ್ನು ಎಳೆದೊಯ್ಯಲಾಯಿತು. ನೆರೆದಿದ್ದವರಲ್ಲಿ ಜೈಲು ಬಂದಿ ರಿಹೈ ಸಮಿತಿ ಮತ್ತು ಛತ್ತೀಸ್ಗಢ ಮಹಿಳಾ ಅಧಿಕಾರಿ ಮಂಚ್ನ ಹೋರಾಟಗಾರರು ಕೂಡ ಇದ್ದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನದಂದೇ ಆದಿವಾಸಿ ಹೋರಾಟಗಾರ್ತಿ ಹಿಡ್ಮೆ ಮಾರ್ಖಂ ಅಪಹರಣ ಮಾಡಿದ ಪೊಲೀಸರು: ಆರೋಪ
ಬಂಧನದಲ್ಲಿದ್ದಾಗ ಛತ್ತೀಸ್ಗಡ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಕವಾಸಿ ನಂದೆ ಮತ್ತು ಪಾಂಡೆ ಎಂಬ ಇಬ್ಬರು ಯುವತಿಯರ ನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೊಲೀಸರ ದೌರ್ಜನ್ಯದಿಂದಾಗಿ ನಂದೆ ಮತ್ತು ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಹಿಡ್ಮೆ ಅರೆಸೈನಿಕ ಪಡೆ ಕ್ಯಾಂಪ್ಗಳು ಮತ್ತು ಒಕ್ಕಲೆಬ್ಬಿಸುವುದರ ವಿರುದ್ಧದ ಗಟ್ಟಿ ಧ್ವನಿಯ ಹೋರಾಟಗಾರ್ತಿಯಾಗಿದ್ದಾರೆ. ‘ಜೈಲ್ ಬಂದಿ ರಿಹೈ ಸಮಿತಿ’ಯ ಕನ್ವೀನರ್ ಆಗಿರುವ ಅವರು ರಾಜ್ಯಪಾಲರು, ಮುಖ್ಯಮಂತ್ರಿ, ಪೊಲೀಸ್ ವರಿಷ್ಠಾಧಿಕಾರಿ, ಕಲೆಕ್ಟರ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ, ಜೈಲುಗಳು ಮತ್ತು ಪೊಲೀಸ್ ಶಿಬಿರಗಳಲ್ಲಿ ಬಂಧಿಸಲ್ಪಟ್ಟ ಮತ್ತು ಶಿಕ್ಷೆಗೊಳಗಾದ ಅಮಾಯಕ ಆದಿವಾಸಿಗಳ ಬಿಡುಗಡೆಗಾಗಿ ಹಲವಾರು ಹೋರಾಟವನ್ನು ನಡೆಸಿದ್ದಾರೆ.
ತಮ್ಮ ಭೂಮಿಯನ್ನು ಪವಿತ್ರ ಭೂವಿ ಎಂದು ಪ್ರತಿಪಾದಿಸುವ ಅವರು ಅಲ್ಲಿನ ಗಣಿಗಾರಿಕೆ ವಿರುದ್ಧವೂ ಹೋರಾಡುತ್ತಿದ್ದರು. ಆದಿವಾಸಿಗಳು ಪವಿತ್ರ ಎಂದು ನಂಬುವ ನಂದರಾಜ್ ಬೆಟ್ಟವನ್ನು ಉಳಿಸುವ ಆಂದೋಲನದ ಭಾಗವಾಗಿ, ಅದಾನಿ ಪ್ರೈವೆಟ್ ಲಿಮಿಟೆಡ್ನಂತಹ ಕಂಪೆನಿಗಳು ಬೆಟ್ಟವನ್ನು ನಾಶಪಡಿಸುವುದನ್ನು ವಿರೋಧಿಸಿ, ಕಂಪೆನಿಯ ಗಣಿಗಾರಿಕೆ ಯೋಜನೆಗಳ ವಿರುದ್ಧ ತೀವ್ರವಾಗಿ ಹೋರಾಟವನ್ನು ಸಂಘಟಿಸಿದ್ದರು.
ಇದನ್ನೂ ಓದಿ: ಟೈಟಾನಿಕ್ ಚಲನಚಿತ್ರ ನೋಡಿದ್ದೀರಾ?- ಲಸಿಕೆ ಆದ್ಯತೆಯ ಬಗ್ಗೆ ಬಾಂಬೆ ಹೈಕೋರ್ಟ್ ಹೇಳಿದ್ದೇನು?