Homeಮುಖಪುಟಮೋಡಿಯ ಮಾಡಿದವರ ಪರಸಂಗ: ಡಿಜಿಟಲ್ ಕಾಲದಲ್ಲೊಂದು ತಾರತಮ್ಯದ ತಕರಾರು

ಮೋಡಿಯ ಮಾಡಿದವರ ಪರಸಂಗ: ಡಿಜಿಟಲ್ ಕಾಲದಲ್ಲೊಂದು ತಾರತಮ್ಯದ ತಕರಾರು

ಮಧ್ಯಮ ವರ್ಗ ಮತ್ತು ಮೇಲ್ ಮಧ್ಯಮವರ್ಗವನ್ನೇ ಒಲೈಸಿಕೊಂಡು ಬಂದಿರುವ ಬಿಜೆಪಿ ಸರ್ಕಾರದ ಆದ್ಯತೆ ಏನು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಬಿಹಾರದ ವಚ್ರ್ಯುವಲ್ ಪ್ರಚಾರ. ತನ್ನನ್ನು ಅಧಿಕಾರಕ್ಕೆ ತಂದ ಮಧ್ಯಮ ವರ್ಗಕ್ಕೆ ಹೊಸ ಕಾಲದ ತಂತ್ರಜ್ಞಾನವನ್ನು ಹೊಂದುವ ಶಕ್ತಿ ಇದೆ. ಆದರೆ ಶೇ. 37ರಷ್ಟು ಅನಕ್ಷರಸ್ಥರಿರುವ, 60 ಕೋಟಿಗೂ ಹೆಚ್ಚು ಜನ ಸಾಮಾನ್ಯ ಫೋನನ್ನು ಬಳಸಲು ಸಾಧ್ಯವಿಲ್ಲದ ಬಡ ವರ್ಗದ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದೆನಿಸುತ್ತದೆ.

- Advertisement -
- Advertisement -

2014ರ ಮಾತು. ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಭಾರತೀಯ ಚುನಾವಣಾ ಪ್ರಚಾರದ ಗತ್ತೇ ಬದಲಾಯಿತು. ಗುಜರಾತಿನ ಮುಖ್ಯಮಂತ್ರಿಯಾಗಿ ತಮ್ಮದೇ ಆದ ವರ್ಚಸ್ಸು, ಖ್ಯಾತಿಗಳನ್ನು ಗಳಿಸಿದ್ದ ನರೇಂದ್ರ ಮೋದಿ ಪ್ರಧಾನಿಯಾಗಲೇಬೇಕೆಂದು ಪಣತೊಟ್ಟು ಹೊರಟಿದ್ದರು. ಹಾಗಾಗಿ ದೇಶದ ಮೂಲೆ ಮೂಲೆ ತಲುಪಬೇಕೆಂಬುದು ಅವರ ಗುರಿಯಾಗಿತ್ತು. ಅದಕ್ಕಾಗಿ ಅವರು ಅವಲಂಬಿಸಿದ್ದು ತಂತ್ರಜ್ಞಾನವನ್ನು. ಭಾರತೀಯ ಚುನಾವಣಾ ಪ್ರಚಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಲೊಗ್ರಾಮ್ ಬಳಸಿ ಜನರ ಮುಂದೆ ಪ್ರತ್ಯಕ್ಷವಾದರು. ಹೊಲೊಗ್ರಾಮ್ ಅನ್ನು ಸರಳವಾಗಿ ಹೇಳಬಹುದಾದರೆ ಒಬ್ಬ ಮೋದಿ, ಏಕ ಕಾಲಕ್ಕೆ ಹತ್ತು ಭಿನ್ನ ಜಾಗಗಳಲ್ಲಿ ಮನುಷ್ಯನಂತೆಯೇ ನಿಂತು ಮಾತಾಡುತ್ತಿರುವಂತೆ ಕಟ್ಟಿಕೊಡುವ ತಂತ್ರಜ್ಞಾನ. ಇದನ್ನು ನೋಡಿದ ಭಾರತೀಯ ಪ್ರಜೆಗಳು ದಂಗಾಗಿ ಹೋದರು. ಇದಾದ ಮೇಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೀದಿ ಬೀದಿಗಳಲ್ಲಿ ಜನರೊಂದಿಗೆ ಟೀ ಕುಡಿಯುತ್ತಾ ಚರ್ಚೆ ಮಾಡಿದ್ದೂ ನೋಡಿದ್ದೇವೆ.

ಹೀಗೆ ಶುರುವಾದ ತಂತ್ರಜ್ಞಾನದ ಬಳಕೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೂ ಮುಂದುವರೆದಿದೆ. ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟ ಭಾರತ, ಕ್ಯಾಶ್‍ಲೆಸ್ ವಹಿವಾಟಿಗೆ ಹೆಚ್ಚು ಒತ್ತು ನೀಡಿತು, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳಿ ಎಂದು ಒತ್ತಾಯಿಸಿತು. ಮೋದಿಯವರನ್ನು ಅಧಿಕಾರಕ್ಕೆ ತರುವ ಮೂಲಕ ದೇಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ತಂದುಬಿಡಬಹುದು ಎಂಬ ಭಾವಿಸಿದ್ದ ಮಧ್ಯಮ ವರ್ಗ ಸರ್ಕಾರದ ಈ ಎಲ್ಲ ಡಿಜಿಟಲ್ ಹೆಜ್ಜೆಗಳನ್ನು ಅನುಸರಿಸಿ, ಹಾಡಿ ಹೊಗಳಿತು. ಆದರೆ ಕ್ರಾಂತಿಯ ಭ್ರಮೆಯ ಸಂಭ್ರಮದ ಹೊತ್ತಲ್ಲೂ ಈ ಜಗತ್ತಿನವರೇ ಅಲ್ಲವೇನೊ ಎಂಬಂತೆ ಸಂಪೂರ್ಣ ಭಿನ್ನವಾದ ದೊಡ್ಡ ಸಮುದಾಯವೇ ಇತ್ತು. ಅದು ದಿಙ್ಮೂಢವಾಗಿಯೇ ಇತ್ತು.

ಇದೆಲ್ಲಾ ನೆನಪಾಗುತ್ತಿರುವುದಕ್ಕೆ ಕಾರಣ, ಬಿಹಾರದ ಚುನಾವಣಾ ಪ್ರಚಾರ. ಗೃಹಮಂತ್ರಿಗಳೂ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರೂ ಎನಿಸಿಕೊಂಡಿರುವ ಅಮಿತ್ ಶಾ ಅಕ್ಟೋಬರ್- ನವೆಂಬರ್‍ನಲ್ಲಿ ನಡೆಯಲಿರುವ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಐದು ತಿಂಗಳಾದರೂ ನಿಯಂತ್ರಣಕ್ಕೆ ಬರದೆ ಇನ್ನಷ್ಟು ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲೂ ಅಮಿತ್ ಶಾ ಚುನಾವಣೆಯ ನಡೆಯುವ ವಿಷಯದಲ್ಲಿ ಖಚಿತವಾಗಿದ್ದಾರೆ. ಹಾಗಾಗಿ ಪ್ರಚಾರದ ಶಂಖ ಊದಿದ್ದಾರೆ. ಆದರೆ ವಿಧಾನ ಮಾತ್ರ ಹಳೆಯದ್ದೇ. ವಿಡಿಯೋ ಕಾನ್ಫರೆನ್ಸ್‍ಗಳ ಮೂಲಕ ತಾವು ಕೂತಲ್ಲಿಂದಲೇ ಜನರಿಂದ ಮತ ಕೇಳುವುದು ಏಕೈಕ ತಂತ್ರ. ಅದಕ್ಕಾಗಿ ರಾಜ್ಯದ 72000 ಬೂತ್‍ಗಳಲ್ಲಿ ಅಳವಡಿಸಲೆಂದು ಎಲ್‍ಇಡಿ ಪರದೆಗಳ ಖರೀದಿಗೆ ಸುಮಾರು 140 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದಾರೆ. ಇನ್ನು ಒಂದು ತಿಂಗಳ ಕಾಲ 75 ವಚ್ರ್ಯುವಲ್ ರ್ಯಾಲಿಗಳು ನಡೆಯಲಿವೆ ಎಂದು ಬಿಜೆಪಿ ಹೇಳಿದೆ. ವ್ಯಂಗ್ಯವೆಂದರೆ ಎಲ್‍ಇಡಿ ಪರದೆಗಳ ಜೊತೆಗೆ ಬಿಜೆಪಿ ನಾಯಕರು ಸುಮಾರು ಒಂದು ಲಕ್ಷ ಸ್ಮಾರ್ಟ್‍ಫೋನ್‍ಗಳನ್ನು ವಿತರಣೆ ಮಾಡಿದ್ದಾರೆ!

ಲಾಕ್‍ಡೌನ್ ಅವಧಿಯಲ್ಲಿ ಬಿಹಾರದ ಜನರು ಅನುಭವಿಸಿರುವ ಸಂಕಷ್ಟ, ಅತಂತ್ರ ಸ್ಥಿತಿಯ ನಡುವೆ ಬಿಜೆಪಿಯ ಈ ನಡೆ ನಿಜಕ್ಕೂ ರೇಜಿಗೆ ಹುಟ್ಟಿಸುವಂಥದ್ದು. ಮಗುವಿಗೆ ಹಾಲುಕೊಳ್ಳುವುದಕ್ಕೆ ತನ್ನೊಂದು ಸಾಮಾನ್ಯ ಮೊಬೈಲ್ ಮಾರಿದ ಘಟನೆಗೆ ಇಡೀ ದೇಶವೇ ಕಣ್ಣೀರಾಗಿತ್ತು. ಅಂತಹ ಸ್ಥಿತಿಯನ್ನು ಎದುರಿಸುತ್ತಿರುವ ಬಿಹಾರದ ಜನರೆದುರು ವಚ್ರ್ಯುವಲ್ ಪ್ರಚಾರ ಮಾಡಲು ಹೊರಟಿರುವುದು ನಿಜಕ್ಕೂ ಆ ಜನರಿಗೆ ಮಾಡುತ್ತಿರುವ ಅವಮಾನ. ರೈಲು ಟಿಕೆಟ್‍ಗೆ ಹಣ ಇಲ್ಲವೆಂದ ಈ ಸರ್ಕಾರ, ಅಗತ್ಯ ಪೂರೈಸಲು ಆಗದೆಂದು ಕೈ ಚೆಲ್ಲಿದ ಈ ಸರ್ಕಾರ, ದೂರದಲ್ಲಿ ಕೂತ ಜನರನ್ನು ಉದ್ದೇಶಿಸಿ ಭಾಷಣ ಮಾಡುವ, ಅದನ್ನು ಬೀದಿ ಬೀದಿಯಲ್ಲಿ ಪರದೆ ಮೇಲೆ ಪ್ರದರ್ಶಿಸುವುದು ನಿಜಕ್ಕೂ ‘ತಮಾಷೆ’ ರೀತಿಯಲ್ಲಿ ಕಾಣಿಸುತ್ತದೆ.

ನಿಜ, ಜಾಗತಿಕವಾಗಿರುವ ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಿಸುವುದು, ಪ್ರಚಾರ ನಡೆಸುವುದು ಅಸಾಧ್ಯ. ಆದರೆ ಇಂಥ ಕಾಲದಲ್ಲಿ ಚುನಾವಣೆಯನ್ನು ನಡೆಸಲೇಬೇಕೆನ್ನುವ ಹಟವೇಕೆ? ಲಕ್ಷಾಂತರ ಬಡ ಜೀವಗಳ ಬದುಕು ಅತಂತ್ರವಾಗಿದೆ. ಹೊಟ್ಟೆ ಪಾಡಿಗಾಗಿ ಹುಟ್ಟೂರು ಬಿಟ್ಟವರು, ನಡೆದೇ ಹಿಂತಿರುಗಿದ ಘಟನೆಗಳನ್ನು ನೋಡಿದ್ದೇವೆ, ಹಸಿವಿನಿಂದ ಸತ್ತವರನ್ನು ನೋಡಿದ್ದೇವೆ, ಔಷಧಿ ಸಿಗದೆ ಜೀವ ತೆತ್ತವರನ್ನು ನೋಡಿದ್ದೇವೆ. ಇವರೆಲ್ಲರೂ ಎಲ್‍ಇಡಿ ಪರದೆಯ ಮುಂದೆ ಏನು ಮಾಡಬೇಕು?

ಮಧ್ಯಮ ವರ್ಗ ಮತ್ತು ಮೇಲ್ ಮಧ್ಯಮವರ್ಗವನ್ನೇ ಒಲೈಸಿಕೊಂಡು ಬಂದಿರುವ ಬಿಜೆಪಿ ಸರ್ಕಾರದ ಆದ್ಯತೆ ಏನು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಬಿಹಾರದ ವಚ್ರ್ಯುವಲ್ ಪ್ರಚಾರ. ತನ್ನನ್ನು ಅಧಿಕಾರಕ್ಕೆ ತಂದ ಮಧ್ಯಮ ವರ್ಗಕ್ಕೆ ಹೊಸ ಕಾಲದ ತಂತ್ರಜ್ಞಾನವನ್ನು ಹೊಂದುವ ಶಕ್ತಿ ಇದೆ. ಆದರೆ ಶೇ. 37ರಷ್ಟು ಅನಕ್ಷರಸ್ಥರಿರುವ, 60 ಕೋಟಿಗೂ ಹೆಚ್ಚು ಜನ ಸಾಮಾನ್ಯ ಫೋನನ್ನು ಬಳಸಲು ಸಾಧ್ಯವಿಲ್ಲದ ಬಡ ವರ್ಗದ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದೆನಿಸುತ್ತದೆ.

ನೋಟ್ ಬ್ಯಾನ್ ಅನ್ನು ಇದೇ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು. ಡಿಜಿಟಲ್ ಎಕಾನಮಿ ಅಥವಾ ಕ್ಯಾಶ್‍ಲೆಸ್ ಎಕಾನಮಿ ಮಾಡುವ ಉಮೇದಿ, ಉತ್ಸಾಹದಲ್ಲಿ ದಿಢೀರನೆ ಘೋಷಿಸಿದ ಡಿಮಾನಿಟೈಸೇಷನ್ ಕಾಲದಲ್ಲಿ ಕಷ್ಟಪಟ್ಟವರು ನಗದು ವ್ಯವಹಾರ ಮಾಡುವ ಬಡ ವರ್ಗ. ಮೊಬೈಲ್ ವ್ಯಾಲೆಟ್‍ಗಳನ್ನು, ಆನ್‍ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲ್ಲವರು ಎಟಿಎಂಗಳ ಮುಂದೆ ನಿಲ್ಲಲಿಲ್ಲ. ಹಣಕ್ಕಾಗಿ ಬಡಿದಾಡಲಿಲ್ಲ.

ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಯಾವುದೇ ಡಿಜಿಟಲ್ ಕೇಂದ್ರಿತ ನಿರ್ಣಯಗಳು/ ನೀತಿಗಳು ಬಹುಸಂಖ್ಯೆಯ ಈ ವರ್ಗವನ್ನು ಉಪೇಕ್ಷಿಸುತ್ತಲೇ ಬಂದಿದೆ. ಪ್ರಜಾಪ್ರಭುತ್ವವೊಂದು ಎಲ್ಲರನ್ನು, ಒಳಗೊಂಡು ಸಮಾನ ಅವಕಾಶಗಳನ್ನು ಸೃಷ್ಟಿಸುತ್ತಾ, ಸಹಬಾಳ್ವೆಯನ್ನು ರೂಪಿಸಬೇಕೆನ್ನುವ ಮೌಲ್ಯಗಳನ್ನು ಈ ಸರ್ಕಾರ ಎಂದಿಗೂ ಅನುಸರಿಸಿಲ್ಲ ಎನ್ನುವುದಕ್ಕೆ ಡಿಮಾನಿಟೈಸೇಷನ್ ರೀತಿಯ ಹಲವು ಉದಾಹರಣೆಗಳನ್ನು ನೀಡಬಹುದು (ಕೊರೊನಾ ಕಾಲದಲ್ಲಿ ವಿದೇಶಿಗರಿಗೆ ವಿಮಾನ ಸೇವೆ ಕಲ್ಪಿಸಿದ ಈ ಸರ್ಕಾರ, ಬಡ, ದಿನಗೂಲಿಗಳನ್ನು ಬೀದಿಗೆ ಬೀಳುವಂತೆ ಮಾಡಿದ್ದಕ್ಕಿಂತ ತಾಜಾ ಉದಾಹರಣೆ ಬೇಕೆ?)

ಅಮಿತ್ ಶಾ ಅವರ ವಚ್ರ್ಯುವಲ್ ಪ್ರಚಾರ ಹಿಂದೆ ಇರುವುದು ಬಡ ವರ್ಗದ ಬಗೆಗಿನ ಅಂಥದ್ದೇ ಉಪೇಕ್ಷೆ ಮತ್ತು ಮಧ್ಯಮ ವರ್ಗದ ಬಗ್ಗೆ ಅತೀವವಾದ ವಿಶ್ವಾಸ. ಬಿಹಾರದ ಜನರಿಗೆ ಅನ್ನ, ಸೂರು ವ್ಯವಸ್ಥೆ ಮಾಡಬೇಕಾದ ಹೊತ್ತಲ್ಲಿ ಒಂದು ಪಕ್ಷ ತಮ್ಮ ಚುನಾವಣಾ ಪ್ರಚಾರವನ್ನು ಜನರಿಗೆ ತಲುಪಿಸುವುದಕ್ಕಾಗಿ ಎಲ್‍ಇಡಿ ಪರದೆಗಳನ್ನು, 1 ಲಕ್ಷ ಮೊಬೈಲ್ ಫೋನ್‍ಗಳನ್ನು ಖರೀದಿಸುವಷ್ಟು ಅಸೂಕ್ಷ್ಮವಾಗುತ್ತದೆ ಎಂದರೆ ಅದು ಬಡ ವರ್ಗವನ್ನು ಎಷ್ಟು ಕಾಳಜಿ ಮಾಡುತ್ತದೆ ಎಂಬುದು ತಿಳಿಯುತ್ತದೆ.

ಕೇಂದ್ರ ಸರ್ಕಾರ ಇವತ್ತಿನವರೆಗೆ ತನ್ನ ಡಿಜಿಟಲ್ ಕ್ರಾಂತಿಯ ಕಾರ್ಯಯೋಜನೆಯಲ್ಲಿ ಬಡ, ಗ್ರಾಮೀಣ ಜನರನ್ನು ಒಳಗೊಳ್ಳಬೇಕು ಎನ್ನುವುದನ್ನು ಆದ್ಯತೆ ಆಗಿಸಿಕೊಂಡಿಲ್ಲ. ಅಂತಹ ಬದ್ಧತೆಯ ಕ್ರಮಗಳನ್ನು ಜಾರಿಗೊಳಿಸಿದ್ದು ಕಾಣೆ. ದಿಢೀರನೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡು ಹೋಗುವ ಪರಿಯೇ ಒಬ್ಬ ಮೋಡಿಕಾರನದ್ದು. ತಂತ್ರಜ್ಞಾನವನ್ನು ಮಾಂತ್ರಿಕ ದಂಡದಂತೆ ತೋರುತ್ತಾ ಜನರನ್ನು ಬೆರಗುಗೊಳಿಸುತ್ತಾ ಬಂದಿರುವ ಈ ಸರ್ಕಾರ ಮೂಲಭೂತವಾಗಿ ಡಿಜಿಟಲ್ ಡಿಸ್ಪಾರಿಟಿ (ತಂತ್ರಜ್ಞಾನ ತಾರತಮ್ಯ) ಢಾಳವಾಗಿ ಉಳಿಸಿಕೊಂಡು ಬಂದಿದೆ.

ಸ್ಪಷ್ಟ ರಾಜಕೀಯ ಒಳನೋಟಗಳಿದ್ದು, ಸರ್ಕಾರ ಹೇಳುತ್ತಿರುವ ತಂತ್ರಜ್ಞಾನ ಭಾರತದ ವ್ಯಾಪ್ತಿಗೆ ಒಳಪಡದ ಅಸಂಖ್ಯ ಜನರಿದ್ದಾರೆ. ಇವರ್ಯಾರ ಅಭಿಪ್ರಾಯವು ಈ ವಚ್ರ್ಯುವಲ್ ಸರ್ಕಾರಕ್ಕೆ ಅಗತ್ಯವಿಲ್ಲ. ಅಂಧ ವಿಶ್ವಾಸದ, ನಿರಭಿಮಾನಿ ಮಧ್ಯಮವರ್ಗವನ್ನು ಸದಾ ಒಲೈಸುವ ಸರ್ಕಾರ ಸುಲಭವಾಗಿ ಅಭಿಮತ ರೂಪಿಸುವುದಕ್ಕೆ ಬಳಸುತ್ತಾ ಬಂದಿದೆ.

ಜನರಿಂದ ದೂರ ಉಳಿದು, ತಂತ್ರಜ್ಞಾನದ ಪರದೆಗಳ ಮೂಲಕ ಪ್ರತ್ಯಕ್ಷವಾಗುವ ಈ ವಿಧಾನವೇ ಜನವಿರೋಧಿಯಾದದ್ದು, ಪ್ರಜಾಸತ್ತಾತ್ಮಕವಲ್ಲದ್ದು. ಜನರೊಂದಿಗೆ ನೇರವಾಗಿ ಬೆರೆಯದೆ, ಅವರ ಕಷ್ಟ, ಅವರಿರುವ ಪರಿಸ್ಥಿತಿ, ಪರಿಸರ ಅರಿಯದ ಯಾವ ನಾಯಕನೂ ಜನಪರವಾಗಿರಲು ಸಾಧ್ಯವಿಲ್ಲ. ಜನರ ಕಷ್ಟಗಳನ್ನು ಬಗೆಹರಿಸಲು ಸಾಧ್ಯವಿಲ್ಲ.

ಉಡಲು, ಉಣ್ಣಲು, ನೆಮ್ಮದಿಯಾಗಿರಲು ಯಾವ ಚಿಂತೆ ಇಲ್ಲದ, ಕೈಯಲ್ಲಿ ಕಾಫಿ ಕಪ್ ಹಿಡಿದು ಟಿವಿ ಮುಂದೆ ಕೂತು, ಈ ರಾಜಕಾರಣಿಗಳ ಮಾಂತ್ರಿಕ ಭಾಷಣಗಳನ್ನು ಟಿವಿ ಸೀರಿಯಲ್‍ಗಳಂತೆ ಸಂಭ್ರಮಿಸುವ ಮಧ್ಯಮವರ್ಗವೊಂದು ಎಂದಿಗೂ ತನ್ನ ಹಕ್ಕಿಗೆ ಹೋರಾಡುವ ತುರ್ತು ಎದುರಿಸಿಲ್ಲ. ಆದರೆ ದಿನವೂ ತನ್ನ ಬದುಕಿಗಾಗಿ ಹೋರಾಡುವ ಕೋಟ್ಯಂತರ ಜನ ಇಂತಹ ಎಲ್ಲ ಅವಕಾಶಗಳಿಂದ ದೂರ. ಅವರ ಹಕ್ಕಿನ ದನಿಯನ್ನು ದಾಖಲಿಸುವುದಕ್ಕೂ ಅವಕಾಶವಿರುವುದಿಲ್ಲ. ಈ ಕಂದಕವನ್ನು ಹಾಗೇ ಉಳಿಸಿಕೊಳ್ಳುವುದು ಈ ಬಿಜೆಪಿ ಸರ್ಕಾರದ ಹುನ್ನಾರ.

ತಂತ್ರಜ್ಞಾನದ ಮೂಲಕ ಬಡವರ ಬದುಕನ್ನು ಹಸನು ಮಾಡಿದ್ದೇವೆ, ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ಬಡವರನ್ನು ಸಬಲೀಕರಿಸಿದ್ದೇವೆ ಎಂದು ಬಿಜೆಪಿ ಸರ್ಕಾರ ಹೇಳುವಾಗ ನಾವು ಫೇಸ್ಬುಕ್ ಅಥವಾ ಯಾವುದೇ ಸೋಷಿಯಲ್ ಮೀಡಿಯಾ ಮತ್ತು ಅದರ ಆಲ್ಗರಿದಂ ಕೆಲಸ ಮಾಡುವ ಕ್ರಮವನ್ನು ನೆನಪಿಸಿಕೊಳ್ಳಬೇಕು. ನಿರ್ದಿಷ್ಟ ವಿಷಯಾಸಕ್ತಿಗಳನ್ನು, ನಿರ್ದಿಷ್ಟ ವ್ಯಕ್ತಿಗೆ ಗುರಿಯಾಗಿಸಿ ಪೂರೈಸುವ ವ್ಯವಸ್ಥೆ ಆನ್‍ಲೈನ್ ಲೋಕದಲ್ಲಿ ಮುಕ್ತ ಮಾಹಿತಿಯ ಮೂಲ ಆಶಯಕ್ಕೆ ವಿರೋಧಿಯಾಗಿರುವಂತಹದ್ದು. ಹಾಗೆಯೇ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಬದ್ಧವಾಗಿರದ ತಾಂತ್ರಿಕತೆಯನ್ನು ಬಳಸುವ ಈ ಸರ್ಕಾರ ಎಂದಿಗೂ ಬಡವರನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಂಡಿಲ್ಲ. ಕಡೆಯದಾಗಿ;

ತಂತ್ರಜ್ಞಾನ ಎನ್ನುವುದು ಸಾಧನ, ವಿವೇಚನೆ ಮತ್ತು ಅಂತಃಕರಣಗಳನ್ನು ಬೆರೆಸಿ ಬಳಸಿದರೆ ಮಾತ್ರ ಅದರಿಂದ ಸಮಾಜದಲ್ಲಿ ಸಾರ್ವತ್ರಿಕವಾದ ಒಳಿತನ್ನು ಕಾಣಬಹುದು. ಇಲ್ಲವಾದರೆ, ಅಧಿಕಾರಶಾಹಿ, ಸ್ವಾರ್ಥದ ಅಸ್ತ್ರವಾಗಿಯೇ ಬಳಕೆಯಾಗುತ್ತದೆಯಷ್ಟೆ. ಬದುಕು ಅತಂತ್ರವಾಗಿರುವ ಕಾಲದಲ್ಲಿ ಚುನಾವಣೆ ಭಾಷಣ ಮಾಡಲು ತಂತ್ರಜ್ಞಾನ ಬಳಸುತ್ತಿರುವ ಈ ಸರ್ಕಾರ, ಆಡಳಿತಾರೂಢ ಪಕ್ಷಗಳು ಶತಮಾನಗಳಿಂದಲೂ ಅಸ್ತಿತ್ವದಲ್ಲಿರಿಸಿರುವ ತಾರತಮ್ಯವನ್ನು ಜೀವಂತವಾಗಿರಿಸಿದೆ.


ಇದನ್ನು ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ ಬೇಗುದಿ, ಕಾಂಗ್ರೆಸ್ ಒಳಾಟ ಮತ್ತು ಜೆಡಿಎಸ್‍ನಲ್ಲಿ ಎಲ್ಲವೂ ಮಾಮೂಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...