‘ಅತ್ಯಾಚಾರದ ರಾಜಕೀಯ: ನ್ಯಾಯ, ಹೊಣೆಗಾರಿಕೆ ಮತ್ತು ಪುನಶ್ಚೇತನ’ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ‘ಲೈಂಗಿಕ ದೌರ್ಜನ್ಯದ ವಿರುದ್ಧ ಕರ್ನಾಟಕ’ (‘ನಾವೆದ್ದು ನಿಲ್ಲದಿದ್ದರೆ’ ಒಕ್ಕೂಟದ ಭಾಗ) ವತಿಯಿಂದ ಫೆಬ್ರುವರಿ 11ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಸೇಂಟ್ ಜೋಸೆಫ್ ವಿಶ್ವ ವಿದ್ಯಾಲಯದ ಆಡಿಟೋರಿಯಂ (ಲಾಂಗ್ ಫೋರ್ಡ್ ರೋಡ್, ಶಾಂತಿನಗರ ಬೆಂಗಳೂರು)ನಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಕಾರ್ಯಕ್ರಮ ನಡೆಯಲಿದೆ.
ಮಹಿಳೆ ಮತ್ತು ಮಕ್ಕಳ ಮೇಲೆ ಯಾವುದೇ ಭಯವಿಲ್ಲದೆ ನಡೆಯುತ್ತಿರುವ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳು, ಅದರ ಹೊಣೆಗಾರಿಕೆ ಮತ್ತು ಸಂತ್ರಸ್ತರ ಪುನಶ್ಚೇತನದ ಕುರಿತು ಚರ್ಚಿಸಲಾಗುತ್ತದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಜರುಗಿದ ಕೆಲವು ಅತ್ಯಾಚಾರ ಘಟನೆಗಳ ವೈಯಕ್ತಿಕ ಹಂಚಿಕೆ, ಇಂದಿನ ಸಮಾಜೋ ರಾಜಕೀಯ ಮತ್ತು ಕಾನೂನು ವ್ಯವಸ್ಥೆಯ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸುತ್ತ ಯಾವ ಪರಿಸ್ಥಿತಿಯಲ್ಲಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ ಮತ್ತು ಅವುಗಳ ಪರಿಣಾಮಗಳೇನಾಗುತ್ತಿವೆ ಎಂಬುದನ್ನು ಪರಿಣಿತರ ಜೊತೆಗೆ ಸಂವಾದದಲ್ಲಿ ವಿಶ್ಲೇಷಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಮಹಿಳಾ ದೃಷ್ಟಿಕೋನದಲ್ಲಿ ಅವುಗಳ ಚರ್ಚೆ ಮಾಡುತ್ತ ಲಿಂಗ, ಲಿಂಗತ್ವ, ವಯಸ್ಸು, ಜಾತಿ, ಧರ್ಮ ಮತ್ತು ವರ್ಗಗಳೆಂಬ ವಿಚಾರಗಳು ನ್ಯಾಯದ ಹಾದಿಯಲ್ಲಿ ಹೇಗೆ ತಡೆಯಾಗಿ ನಿಲ್ಲುತ್ತಿವೆ ಎಂಬುದನ್ನು ಈ ಸಂವಾದ ಕಾರ್ಯಕ್ರಮದಲ್ಲಿ ವಿಮರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಿಂದ ಬರುತ್ತಿರುವ ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಒಂದು ವೇದಿಕೆಯಡಿಯಲ್ಲಿ ಒಟ್ಟಿಗೆ ಸೇರುತ್ತಿವೆ. ಒಂದೊಂದು ಪ್ರಕರಣದಲ್ಲೂ ನ್ಯಾಯವನ್ನು ಕೇಳುವುದರೊಂದಿಗೆ ‘ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಕರ್ನಾಟಕ’ ಪ್ರಶ್ನಿಸುತ್ತಿದೆ. ಈ ಸಮಾವೇಶದ ಮೂಲಕ ಮಹಿಳೆಯರ ಆತಂಕವನ್ನು ಒಂದು ವ್ಯವಸ್ಥಿತ ಹಾಗೂ ಸೃಜನಶೀಲ ರೀತಿಯಲ್ಲಿ ಸಮಾಜದ ಮುಂದಿಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಮಾಧ್ಯಮ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಮಾಜವು ಜಾತಿ, ಕೋಮು ಮತ್ತು ವರ್ಗಗಳಾಗಿ ವಿಭಜನೆಗೊಂಡಿರುವ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಶಿಕ್ಷಾ ಭಯವಿಲ್ಲದಿರುವುದನ್ನು ಚರ್ಚಿಸಿ ನ್ಯಾಯ, ಹೊಣೆಗಾರಿಕೆ ಮತ್ತು ಸಂತ್ರಸ್ತರಿಗೆ ಸಂತೈಸುವ, ಪುನಶ್ಚೇತನ ಮೂಡಿಸುವ ಹಾದಿಗಳನ್ನೂ ಹುಡುಕುವುದು ಈ ಸಂವಾದದ ಉದ್ದೇಶವಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗಗಳ ಅಧಿಕಾರ ರೂಢರಿಗೆ ಹಕ್ಕೊತ್ತಾಯಗಳನ್ನು ಸಲ್ಲಿಸಿ ಅವರಿಂದ ಹೊಣೆಗಾರಿಕೆಯ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಜನವಾದಿಮಹಿಳಾ ಸಂಘಟನೆಯ ಡಾ. ಮೀನಾಕ್ಷಿ ಬಾಳಿ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಗೃಹಕಾರ್ಮಿಕರ ಯೂನಿಯನ್ನ ಗೀತಾ ಮೆನನ್, ಸಾಧನಾ ಮಹಿಳಾ ಸಂಘದ ಗೀತಾ, ದಲಿತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಜ್ಯೋತಿ ಹಿಟ್ನಾಳ್, ಸಂವಾದ ಬದುಕು ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಇಶ್ರತ್ ನಿಸ್ಸಾರ್, ಬೆಬಾಕ್ ಕಲೆಕ್ಟಿವ್ ಮುಂಬೈನ ಹಸೀನಾ ಖಾನ್, ನ್ಯಾಶನಲ್ ಫೆಡರೇಶನ್ ಫಾರ್ ದಲಿತ್ ವಿಮೆನ್ನ ರೂತ್ ಮನೋರಮಾ, ಒಂದೆಡೆ ಸಂಸ್ಥೆಯ ಅಕ್ಕಯ್ ಪದ್ಮಶಾಲಿ, ಓಪನ್ ಸ್ಪೇಸ್ನ ಅನಿತಾ ಚೆರಿಯೋ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ವೃಂದಾ ಗ್ರೋವರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.