ಕಾಂಗ್ರೆಸ್ ಪಕ್ಷದ ರಾಜ್ಯದ ಮುಂಚೂಣಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ರವರನ್ನು ಹೆದರಿಸಲು ಬಿಜೆಪಿ ಅರೆಬರೆ ಯತ್ನ ಮಾಡುತ್ತಿದೆ. ಅದರ ಭಾಗವಾಗಿ ಆರ್ ಅಶೋಕ್ರವರು ಪದ್ಮನಾಭನಗರದ ಜೊತೆಗೆ ಕನಕಪುರದಲ್ಲಿ ಮತ್ತು ವಿ.ಸೋಮಣ್ಣ ಚಾಮರಾಜನಗರದ ಜೊತೆಗೆ ವರುಣದಲ್ಲಿ ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂದು ಘೋಷಿಸಲಾಗಿದೆ. ಈ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದೇ ಒಂದು ರೀತಿಯಲ್ಲಿ ಚುನಾವಣೆಗೂ ಮೊದಲೆ ಬಿಜೆಪಿ ಒಂದೊಂದು ಕ್ಷೇತ್ರದಲ್ಲಿ ಸೋಲು ಒಪ್ಪಿಕೊಂಡಂತೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆರ್ ಅಶೋಕ್ ಕನಕಪುರದಲ್ಲಿ ಸೋತರೂ ಪದ್ಮನಾಭನಗರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಿ.ಸೋಮಣ್ಣ ಚಾಮರಾಜನಗರ ಮತ್ತು ವರುಣ ಎರಡೂ ಕಡೆ ಸೋಲಬಹುದು ಎನ್ನಲಾಗುತ್ತಿತ್ತು. ಆದರೆ ಈಗ ಪದ್ಮನಾಭನಗರದಲ್ಲಿಯೂ ಮತ್ತಷ್ಟು ಬಲಿಷ್ಠ ಅಭ್ಯರ್ಥಿಯಾದ ಡಿ.ಕೆ ಸುರೇಶ್ರನ್ನು ಕಣಕ್ಕಿಳಿಸುವ ಮೂಲಕ ಆರ್.ಅಶೋಕ್ಗೆ ನಡುಕ ಹುಟ್ಟಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ.
ಗುರಪ್ಪ ನಾಯ್ಡುರವರ ಪುತ್ರ ರಘುನಾಥ ನಾಯ್ಡುರವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಅವರು ಗುರುವಾರ ಭಿ ಫಾರಂ ಕೂಡ ಪಡೆದಿದ್ದಾರೆ. ಆದರೆ “ಡಿ.ಕೆ ಸುರೇಶ್ರವರು ಪದ್ಮನಾಭನಗರಕ್ಕೆ ಬಂದರೆ ಟಿಕೆಟ್ ಬಿಟ್ಟುಕೊಡಲು ಸಿದ್ದ. ಅಲ್ಲದೇ ಅವರನ್ನು 70,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಆಯ್ಕೆ ಮಾಡುತ್ತೇವೆ. ಅಲ್ಲದೇ ಕನಕಪುರದಲ್ಲಿಯೂ ಅಶೋಕ್ರನ್ನು ಸೋಲಿಸುತ್ತೇವೆ” ಎಂದು ರಘುನಾಥ ನಾಯ್ಡು ಹೇಳಿದ್ದಾರೆ.
ಪದ್ಮನಾಭನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಕಾಂಗ್ರೆಸ್ ಸದಸ್ಯರನ್ನು ಮಾಡಿಸಿದ್ದೇವೆ. ನಾಯ್ಡು ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿ ಕಾಂಗ್ರೆಸ್ ಜಯ ಸಾಧಿಸುವುದರಲ್ಲಿ ಅನುಮಾನವಿಲ್ಲ. ಆದರೂ ಡಿ.ಕೆ ಸುರೇಶ್ರವರು ಇಲ್ಲಿ ಸ್ಪರ್ಧಿಸಿದರೆ ದೊಡ್ಡ ಅಂತರದಲ್ಲಿ ಗೆಲ್ಲಬಹುದು ಮತ್ತು ಆರ್.ಅಶೋಕ್ಗೆ ಮುಖಭಂಗವಾಗುವಂತೆ ಮಾಡಬಹುದು. ಈ ಕುರಿತು ಡಿ.ಕೆ ಶಿವಕುಮಾರ್ರವರಿಗೆ ತಿಳಿಸಿದ್ದೇನೆ ಮತ್ತು ಯಾವುದೇ ಕ್ಷಣದಲ್ಲಿ ಟಿಕೆಟ್ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಹ ರಘುನಾಥ ನಾಯ್ಡುರವರಿಗೆ ಭಿ ಫಾರಂ ನೀಡುವ ಸಂದರ್ಭದಲ್ಲಿ ಸದ್ಯ ಕ್ಷೇತ್ರದಲ್ಲಿ ಕೆಲಸ ಮತ್ತು ಪ್ರಚಾರ ಮಾಡುತ್ತೀರಿ. ಮುಂದೆ ನೋಡೋಣ ಎಂದು ಹೇಳಿರುವುದು ಡಿ.ಕೆ ಸುರೇಶ್ ಬರಬಹುದು ಎಂಬ ವಾದಕ್ಕೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಬಿಜೆಪಿ ಸೋಲಿಸಲು ಜಾತ್ಯಾತೀತ ಅಭ್ಯರ್ಥಿಗೆ ಬೆಂಬಲ; ಸ್ಪರ್ಧೆ ಮಾಡಲ್ಲ ಎಂದ ಎಡಪಕ್ಷಗಳು