Homeಕರ್ನಾಟಕಮುಸ್ಲಿಂ ಮೀಸಲಾತಿ ರದ್ದು ವಿಚಾರ: ಅತಿ ಕಳಪೆ, ದೋಷಪೂರಿತ ನಿರ್ಧಾರವೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

ಮುಸ್ಲಿಂ ಮೀಸಲಾತಿ ರದ್ದು ವಿಚಾರ: ಅತಿ ಕಳಪೆ, ದೋಷಪೂರಿತ ನಿರ್ಧಾರವೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

- Advertisement -
- Advertisement -

ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಪ್ರಬಲ ಜಾತಿಗಳಾದ ಲಿಂಗಾಯತ ಮತ್ತು ಬಿಜೆಪಿಗೆ ಮೀಸಲಾತಿ ನೀಡುವ ಉದ್ದೇಶದಿಂದ ತರಾತುರಿಯಲ್ಲಿ ಶೇ 4ರಷ್ಟು ಮುಸ್ಲಿಂ ಮೀಸಲಾತಿ ರದ್ದು ಮಾಡಿದೆ. ಇದೀಗ ಸುಪ್ರೀಂ ಕೋರ್ಟ್, ‘ಈ ತೀರ್ಮಾನವು ಅತಿ ಕಳಪೆ ಮತ್ತು ದೋಷಪೂರಿತ ನಿರ್ಧಾರಕ್ಕೆ ಪ್ರಥಮ ಸಾಕ್ಷಿ’ ಎಂದು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿತ್ತು. ಆದರೆ ಬಿಜೆಪಿಯ ಈ ಮುಸ್ಲಿಂ ವಿರೋಧಿ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶೇ. 4ರಷ್ಟು ಮೀಸಲಾತಿ ರದ್ದುಗೊಳಿಸಿರುವ ನಿರ್ಧಾರ ‘ತೀರ ಕಳಪೆ ಹಾಗೂ ದೋಷಪೂರಿತ’ ಎಂದು ಹೇಳಿದೆ.

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಸರ್ಕಾರ ಏಪ್ರಿಲ್‌ 18ರವರೆಗೆ ಯಾವುದೇ ನೇಮಕಾತಿ ಅಥವಾ ದಾಖಲಾತಿಯನ್ನು ಮಾಡುವಂತಿಲ್ಲ ಎಂದು ನೋಟಿಸ್ ಜಾರಿ ಮಾಡಿದೆ.

ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠವು, ”ಕರ್ನಾಟಕ ಸರ್ಕಾರದ ಆದೇಶದ ನಿರ್ಧಾರ ಪ್ರಕ್ರಿಯೆ ‘ಕಳಪೆ ಹಾಗೂ ದೋಷಪೂರಿತವಾಗಿದ್ದಂತೆ’ ಕಂಡು ಬರುತ್ತಿದೆ ಎಂದು ಹೇಳಿ, ಅದಕ್ಕೆ ತಡಯಾಜ್ಞೆ ನೀಡುವ ಇಂಗಿತ ವ್ಯಕ್ತಪಡಿಸಿದೆ.”

ಕರ್ನಾಟಕ ಸರ್ಕಾರದ ಪರ ಹಾಜರಿದ್ದ ನ್ಯಾಯವಾದಿ ತುಷಾರ್‌ ಮೆಹ್ತಾ ನ್ಯಾಯಾಲಯ ಆದೇಶದ ಪಾಲನೆಯ ಭರವಸೆ ನೀಡಿದರು. ಈ ವೇಳೆ ತುಷಾರ್ ಮೆಹ್ತಾ ಅವರು, ಸರ್ಕಾರದ ಪ್ರತಿಕ್ರಿಯೆಗಾಗಿ ಸಮಯಾವಕಾಶವನ್ನು ಕೇಳಿದರು. ”ಮಾರ್ಚ್ 24ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ವಯಾವುದೇ ಬಡ್ತಿಗಳು ಅಥವಾ ನೇಮಕಾತಿಗಳನ್ನು ಮಾಡುವುದಿಲ್ಲ” ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಆಂಧ್ರದಲ್ಲಿಯೂ ಮುಸ್ಲಿಂ ಮೀಸಲಾತಿ ರದ್ದು ಮಾಡಲಾಗಿದೆ: ಸುಳ್ಳು ಹೇಳಿದ ಬೊಮ್ಮಾಯಿ ಸರ್ಕಾರ

ಇನ್ನು ಮುಸ್ಲಿಂ ಸಮುದಾಯದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಗೋಪಾಲ್ ಶಂಕರನಾರಾಯಣನ್ ಅವರು, ”ಮುಸ್ಲಿಂ ಮೀಸಲಾತಿ ರದ್ದುಗೊಳಿಸುವ ಮೊದಲು ರಾಜ್ಯ ಸರ್ಕಾರ ಯಾವುದೇ ಅಧ್ಯಯನ ನಡೆಸಿಲ್ಲ ಮತ್ತು ಯಾವುದೇ ದತ್ತಾಂಶವನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿಲ್ಲ” ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಆಗ ನ್ಯಾಯಪೀಠವು, ”ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರೆ, ಆಯೋಗದ ಅಂತಿಮ ವರದಿ ಬರುವವರೆಗೂ ಸರ್ಕಾರ ಕಾಯಬಹುದಿತ್ತು. ಮುಸ್ಲಿಂ ಮೀಸಲಾತಿ ಸೌಲಭ್ಯ ಹಲವು ವರ್ಷಗಳಿಂದ ಸಿಗುತ್ತಿದೆ. ದಾಖಲೆಗಳ ಪ್ರಕಾರ ಆ ಸಮುದಾಯ ಬಹಳ ಹಿಂದುಳಿದಿದೆ. ಈಗ ದಿಢೀರನೆ ಹೇಗೆ ಬದಲಾಯಿತು?” ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ, ”ಅರ್ಜಿಗಳಿಗೆ ತಮ್ಮ ಅಭಿಪ್ರಾಯ ನೀಡಲು ಅವಕಾಶ ಕೊಡುವವರೆಗೂ ಮಧ್ಯಂತರ ಆದೇಶ ನೀಡಬಾರದು” ಎಂದು ಮನವಿ ಮಾಡಿದರು.

ಈ ಹಿಂದೆ ಒಕ್ಕಲಿಗ ಸಮುದಾಯ ಶೇ. 4 ಮತ್ತು ಲಿಂಗಾಯತರು ಶೇ. 5 ಮೀಸಲಾತಿ ಹೊಂದಿದ್ದರು. ರಾಜ್ಯ ಸಚಿವ ಸಂಪುಟದ ನಿರ್ಧಾರದ ನಂತರ, ಒಕ್ಕಲಿಗರು ಶೇ. 6 ರಷ್ಟು ಮತ್ತು ಲಿಂಗಾಯತರು ಶೇ. 7 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ.

ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇ. 10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗದಡಿಯಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಮೀಸಲಾತಿ ಮಿತಿ ಸುಪ್ರೀಂಕೋರ್ಟ್ ನಿಗದಿ ಮಾಡಿದ ಶೇ 57ನ್ನು ಮೀರುತ್ತದೆ.

ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ವಿವಿಧಡೆ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ವಿಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ.

ಸುಪ್ರೀಂ ಕೋರ್ಟ್‌ನ ಅಭಿಪ್ರಾಯದ ಬಳಿಕ ರಾಜ್ಯ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಮಾಡಿದ್ದು, ”ಬಿಜೆಪಿ ಸರ್ಕಾರವು ತರಾತುರಿಯಲ್ಲಿ 4% ಮುಸ್ಲಿಂ ಮೀಸಲಾತಿ ತೆಗೆದು ಹಾಕಿ ಒಕ್ಕಲಿಗರಿಗೆ 2%, ಲಿಂಗಾಯತರಿಗೆ 2% ಹಂಚಿಕೆ ಮಾಡಿದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ‌ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಬಿಜೆಪಿಯ ತರಾತುರಿಯ ಈ ಚುನಾವಣಾ ಗಿಮಿಕ್ ಅವೈಜ್ಞಾನಿಕವಾಗಿದ್ದು ಇದಕ್ಕೆ ಸುಪ್ರೀಂಕೋರ್ಟ್ ಮಾನ್ಯತೆ ದೊರಕುವುದಿಲ್ಲ” ಎಂದು ಹೇಳಿದೆ.

”ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು @BJP4Karnataka
ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. “ಅನುಷ್ಠಾನ ಅಸಾಧ್ಯ” ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

”ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ”ಮೀಸಲಾತಿ ಗಿಮಿಕ್” ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜನತೆಗೆ ಈಗ ನಿಮ್ಮ ಉತ್ತರವೇನು, ಸಾಬೂಬುಗಳೇನು? ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂ ಎತ್ತಿ ಹಿಡಿದಿದೆ. ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ತರಾಟೆಗೆ ತಗೆದುಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read