Homeಕರ್ನಾಟಕಆಂಧ್ರದಲ್ಲಿಯೂ ಮುಸ್ಲಿಂ ಮೀಸಲಾತಿ ರದ್ದು ಮಾಡಲಾಗಿದೆ: ಸುಳ್ಳು ಹೇಳಿದ ಬೊಮ್ಮಾಯಿ ಸರ್ಕಾರ

ಆಂಧ್ರದಲ್ಲಿಯೂ ಮುಸ್ಲಿಂ ಮೀಸಲಾತಿ ರದ್ದು ಮಾಡಲಾಗಿದೆ: ಸುಳ್ಳು ಹೇಳಿದ ಬೊಮ್ಮಾಯಿ ಸರ್ಕಾರ

- Advertisement -
- Advertisement -

ರಾಜ್ಯ ಬಿಜೆಪಿ ಸರ್ಕಾರವು  ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿ, EWS ಕೋಟಾದಲ್ಲಿ ಸೇರಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವ ಭರದಲ್ಲಿ ಬೊಮ್ಮಾಯಿ ಸರ್ಕಾರ ಸುಳ್ಳು ಹೇಳಿದೆ ಎಂಬ ಚರ್ಚೆಗಳಾಗುತ್ತಿವೆ.

ಬೊಮ್ಮಾಯಿ ಸರ್ಕಾರ ಹೇಳಿದ್ದೇನು?

”ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಕೊಟ್ಟ ಮೀಸಲಾತಿಯನ್ನು ಆಂಧ್ರದಲ್ಲಿ ಅಲ್ಲಿಯ ಹೈಕೋರ್ಟು ರದ್ದು ಮಾಡಿದೆ. ಆದ್ದರಿಂದ ನಾವು ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿದ್ದೇವೆ” ಎಂದು ಬೊಮ್ಮಾಯಿ ಸರ್ಕಾರ ಹೇಳಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಲೇಖಕ, ಹಿರಿಯ ಪತ್ರಕರ್ತ ಬಿ.ಎಂ ಹನೀಫ್‌ರವರು, ಆಂಧ್ರಪ್ರದೇಶದಲ್ಲಿ ರಾಜಶೇಖರ್ ರೆಡ್ಡಿ ನೇತೃತ್ವದ ಸರ್ಕಾರ 2004ರಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರಲ್ಲಿ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಮಾಡುವಾಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಪಡೆದಿಲ್ಲ ಮತ್ತು ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50 ರ ಮೇಲ್ಮಿತಿಯನ್ನು ಮೀರುತ್ತದೆ ಎಂಬ ಕಾರಣಕ್ಕೆ ಮೀಸಲಾತಿಯನ್ನು ಹೈಕೋರ್ಟು ರದ್ದು ಮಾಡಿತ್ತು. ಆದರೆ ಬೊಮ್ಮಾಯಿ ಅವರು ಹೇಳುವಂತೆ ಧಾರ್ಮಿಕ ಆಧಾರದಲ್ಲಿ ಮೀಸಲಾತಿ ನೀಡಬಾರದು ಎನ್ನುವ ಕಾರಣಕ್ಕಾಗಿ ಅಲ್ಲ ಎಂದರು.

”ಆ ನಂತರ ಆಂಧ್ರ ಸರ್ಕಾರ ಮುಸ್ಲಿಮರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಸಮಿತಿ ರಚನೆ ಮಾಡಿ ಮತ್ತೆ ಶೇ. 4 ರಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು. ಆಂಧ್ರದ ಶಾಸನ ಸಭೆ ಹೆಚ್ಚೂ ಕಡಿಮೆ ಸರ್ವಸಮ್ಮತಿಯಿಂದ ಅನುಮೋದಿಸಿ ಕಾಯಿದೆ ಮಾಡಿತು. ಆದರೆ 2010ರ ಫೆಬ್ರವರಿಯಲ್ಲಿ ಹೈದರಾಬಾದ್ ಹೈಕೋರ್ಟ್, ಈ ಆದೇಶವನ್ನು ರದ್ದು ಮಾಡಿತ್ತು. ಆದರೆ ಹೈಕೋರ್ಟಿನ ಈ ಆದೇಶಕ್ಕೆ 2010ರಲ್ಲಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತಡೆಯಾಜ್ಞೆ ನೀಡಿತು. ಅಷ್ಟು ಮಾತ್ರವಲ್ಲದೇ ಮುಸ್ಲಿಂ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮುಂದುವರೆಸಲು ಆದೇಶ ನೀಡಿತು. ಈಗಲೂ ಅಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಲಾಗುತ್ತಿದೆ” ಎಂದರು.

”ನಮ್ಮ ರಾಜ್ಯದ ಮುಖ್ಯಮಂತ್ರಿ ಆಂಧ್ರ ಸರ್ಕಾರ, ಮತ್ತೆ ಹೈಕೋರ್ಟ್‌ನ್ನು ಉದಾಹರಣೆ ಕೊಡುತ್ತಿದ್ದಾರೆ. ಹಾಗಾದರೆ ಅಲ್ಲಿಯಂತೆ ಇಲ್ಲಿ ಸಮಿತಿ ರಚನೆ ಮಾಡಿ ಪರೀಶೀಲನೆ ಮಾಡಿದ್ದಾರಾ? ಇಲ್ಲ, ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವ ಒತ್ತಡದಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ರದ್ದು ಮಾಡಿದ್ದಾರೆ. ಇದು ಸಂಪೂರ್ಣ ಅಸಂವಿಧಾನಿಕ ನಡೆಯಾಗಿದೆ” ಎಂದು ಹನೀಫ್ ತಿಳಿಸಿದರು.

”ಅಸಂವಿಧಾನಿಕವಾಗಿರುವ ಸರ್ಕಾರದ ಈ ಆದೇಶಕ್ಕೆ ಮುಂದೆ ನ್ಯಾಯಾಲಯ ತಡೆ ನೀಡಬಹುದು. ಆದರೆ ಇದು ಕೇವಲ ಅವರ ಚುನಾವಣಾ ರಾಜಕಾರಣದ ಭಾಗವಾಗಿದೆ. ನ್ಯಾಯಾಲಯ ತಡೆ ನೀಡಿದರೂ, ತಡೆ ನೀಡದಿದ್ದರೂ ಬಿಜೆಪಿ ಅದನ್ನ ಕೋಮು ದ್ವೇಷ ಹರಡಲು ಬಳಕೆ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅದೇ ರೀತಿ ಚಿಂತಕ, ಹೋರಾಟಗಾರ ಶಿವಸುಂದರ್ ಅವರು ಮುಸ್ಲಿಂ ಮೀಸಲಾತಿ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರು ಸುಳ್ಳು ಹೇಳಿದ್ದಾರೆ ಮತ್ತೆ ಅದು ನ್ಯಾಯಾಲಯದ ನಿಂದನೆ ಕೂಡ ಆಗುತ್ತದೆ ಎಂದಿದ್ದಾರೆ.

ಆಂಧ್ರದಲ್ಲಿ ಮುಸ್ಲಿಮರ ಮೀಸಲಾತಿ ರದ್ದಾಗಿದೆಯೇ? ಆಂಧ್ರದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿತ್ತೇ? ಎಂಬ ಈ ಎರಡೂ ವಿಷಯಗಳ ಬಗ್ಗೆಯೂ ಬೊಮ್ಮಾಯಿ ಸರ್ಕಾರ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದೆ .

2004ರಲ್ಲಿ ಆಂಧ್ರ ಸರ್ಕಾರ ಮುಸ್ಲಿಮರಿಗೆ ಧರ್ಮದ ಆಧಾರಲ್ಲಿ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು. ಅದನ್ನು (ಟಿ. ಮುರಳೀಧರ ರಾವ್ ವರ್ಸಸ್ ಆಂಧ್ರ ಸರ್ಕಾರ ಪ್ರಕರಣದಲ್ಲಿ ) ಹೈಕೋರ್ಟು ರದ್ದು ಮಾಡಿತ್ತು. ಆದರೆ ಅದಕ್ಕೆ ಕಾರಣ :

ಅ ) ಈ ಆದೇಶವನ್ನು ಮಾಡುವಾಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಪಡೆದಿಲ್ಲ ಮತ್ತು

ಆ ) ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50 ರ ಮೇಲ್ಮಿತಿಯನ್ನು ಮೀರುತ್ತದೆ ಎಂಬ ಕಾರಣಕ್ಕೆ ಹೊರತು ಧಾರ್ಮಿಕ ಆಧಾರದ ಮೀಸಲಾತಿ ಸಲ್ಲದು ಎಂಬ ಕಾರಣಕ್ಕಾಗಿ ಅಲ್ಲ.

– ಆ ನಂತರ 2005 ರಲ್ಲಿ ಆಂಧ್ರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇರೆಗೆ ಕರ್ನಾಟಕದಂತೆ ಇಡೀ ಮುಸ್ಲಿಮರನ್ನು ಹಿಂದುಳಿದ ವರ್ಗಗಳಾಗಿ ಪರಿಗಣಿಸಿ ಒಬಿಸಿ ಮೀಸಲಾತಿಯ ಭಾಗವಾಗಿ ಮತ್ತು ಅದರೊಳಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಅದನ್ನೂ ಕೂಡ ಆಂಧ್ರಪ್ರದೇಶ ಹೈಕೋರ್ಟು (ಅರ್ಚನಾ ರೆಡ್ಡಿ ವರ್ಸಸ್ ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ) ರದ್ದು ಮಾಡಿತು.

ಆಗಲೂ ಅದಕ್ಕೆ ಕಾರಣವಾದದ್ದು ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದಾರೆ ಎಂಬುದಲ್ಲ. ಬದಲಿಗೆ ಇಡೀ ಮುಸ್ಲಿಂ ಸಮುದಾಯ ಹಿಂದುಳಿದ ವರ್ಗ ಎಂದು ಸರಿಯಾಗಿ ಸಾಬೀತಾಗಿಲ್ಲ ಎಂಬ ಕಾರಣಕ್ಕೆ ಎಂದು ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.

ನಂತರ ಆಂಧ್ರ ಸರ್ಕಾರ ಮುಸ್ಲಿಂ ರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಶಿಫಾರಸ್ಸು ಮಾಡಲು ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಹಿರಿಯ ಹಾಗೂ ಮೇಧಾವಿ ಸಾಮಾಜಿಕ ನ್ಯಾಯನೀತಿಜ್ಞ ಪಿ.ಎಸ . ಕೃಷ್ಣನ್ ಅವರ ಸಮಿತಿಯನ್ನು ನೇಮಿಸಿತು. ಆ ಸಮಿತಿಯು ವಿಸ್ತೃತ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಿ ಮುಸ್ಲಿಮರಲ್ಲಿನ 14 ಪ್ರಮುಖ ಪ್ರವರ್ಗಗಳನ್ನು ಹಿಂದುಳಿದ ವರ್ಗಗಳಾನ್ನಾಗಿ ಪರಿಗಣಿಸಿ ಒಬಿಸಿ ಮೀಸಲಾತಿ ಸಮುದಾಯದೊಳಗೆ ವಿಶೇಷ ಪ್ರವರ್ಗ ‘E” ಕಲ್ಪಿಸಿ ಶೇ. 4 ರಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು. ಅದನ್ನು ಹಿಂದುಳಿದ ವರ್ಗದ ಆಯೋಗವೂ ಅನುಮೋದಿಸಿತು. ಇದನ್ನು ಆಂಧ್ರದ ಶಾಸನ ಸಭೆ ಹೆಚ್ಚೂ ಕಡಿಮೆ ಸರ್ವಸಮ್ಮತಿಯಿಂದ ಅನುಮೋದಿಸಿ ಕಾಯಿದೆ ಮಾಡಿತು. ಈ ಕಾಯಿದೆಯನ್ನು ಹಲವಾರು ಆಂಧ್ರ ಹೈಕೋರ್ಟಿನಲ್ಲಿ ಪ್ರಶ್ನಿಸಿದರು. 2010ರ ಫೆಬ್ರವರಿಯಲ್ಲಿ ಹೈದರಾಬಾದ್ ಹೈಕೋರ್ಟಿನ ಪೂರ್ಣ ಪೀಠ 5-2 ಬಹುಮತದ ಮೇಲೆ ಈ ಆದೇಶವನ್ನು ರದ್ದು ಮಾಡಿತ್ತು. ಅದಕ್ಕೆ ಹೈಕೋರ್ಟು ನೀಡಿದ ಕಾರಣ:

1) ಸರ್ಕಾರ ಕೆಲವು ಪ್ರಕ್ರಿಯೆಗಳನ್ನು ಅನುಸರಿಸಿಲ್ಲವೆಂಬುದು ಮತ್ತು

2) ಮುಸ್ಲಿಮರಿಗೆ ಕೊಡುವ ಮೀಸಲಾತಿಯಿಂದ ಮತಾಂತರ ಹೆಚ್ಚಬಹುದು ಎಂಬ ಆತಂಕ

-ಆದರೆ ಹೈಕೋರ್ಟಿನ ಈ ಆದೇಶಕ್ಕೆ 2010ರ ಮಾರ್ಚ್ 25 ರಂದೇ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತಡೆಯಾಜ್ಞೆ ನೀಡಿತು.

-ಅಷ್ಟು ಮಾತ್ರವಲ್ಲ , ಆಂಧ್ರ ಸರ್ಕಾರವು 14 ಮುಸ್ಲಿಂ ಪ್ರವರ್ಗಗಳಿಗೆ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮುಂದುವರೆಸಲು ಆದೇಶ ನೀಡಿತು ಹಾಗೂ

– ಈ ವಿಷಯದಲ್ಲಿ ಹಲವಾರು ಸಾಂವಿಧಾನಿಕ ಅಂಶಗಳಿರುವುದರಿಂದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತು.

– EWS ಮೀಸಲಾತಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸಾಂವಿಧಾನಿಕ ಪೀಠಕ್ಕೆ ಮುಸ್ಲಿಂ ಮೀಸಲಾತಿಯ ಪ್ರಕರಣವನ್ನು ವರ್ಗಾಯಿಸಲಾಯಿತು.

– ಈ ಸಾಂವಿಧಾನಿಕ ಪೀಠವು ಮುಸ್ಲಿಂ ಮೀಸಲಾತಿಯ ವಿಷಯದ ಬಗ್ಗೆ ಕೊಟ್ಟ ಕೊನೆಯ ಬಾರಿಗೆ ಅಹವಾಲನ್ನು ಆಲಿಸಿದ್ದು 2022ರ ಸೆಪ್ಟೆಂಬರ್ 6 ರಂದು. ಆಗಲೂ ಅದು ತ್ರಿಸದಸ್ಯ ಪೀಠದ ಆದೇಶವನ್ನು ಅರ್ಥಾತ್ ಮುಸ್ಲಿಮರಿಗೆ ಕೊಡುತ್ತಿದ್ದ ಮೀಸಲಾತಿಯನ್ನು ಮುಂದುವರೆಸುವ ಆದೇಶವನ್ನು ಚಾಲ್ತಿಯಲ್ಲಿಟ್ಟು ವಿಚಾರಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಿದೆ.

ಅಂದರೆ ಆಂಧ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿರುವುದು ಹಿಂದುಳಿದ ವರ್ಗದ ಆಧಾರದಲ್ಲಿಯೇ ವಿನಾ ಧರ್ಮದ ಆಧಾರದಲ್ಲಲ್ಲ. ಈ ವಿಷಯದ ಬಗ್ಗೆ ಆಂಧ್ರ ಹೈಕೋರ್ಟು ಕೊಟ್ಟ ವ್ಯತಿರಿಕ್ತ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿರುವುದಲ್ಲದೆ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ನೀಡುತ್ತಿದ್ದ ಮೀಸಲಾತಿಯನ್ನು ಚಾಲ್ತಿಯಲ್ಲಿಟ್ಟಿದೆ. ವಿಸ್ತೃತ ಸಾಂವಿಧಾನಿಕ ಪೀಠವೂ ಮೀಸಲಾತಿ ಮುಂದುವರಿಕೆಗೆ ತಡೆ ನೀಡಿಲ್ಲ. ಹೀಗಾಗಿ ಆಂಧ್ರದಲ್ಲಿ ಮುಸ್ಲಿಂ ಮೀಸಲಾತಿಯನ್ನು ಕೋರ್ಟು ರದ್ದುಗೊಳಿಸಿದೆ ಎಂಬ ಬೊಮ್ಮಾಯಿ ಸರ್ಕಾರದ ವ್ಯಾಖ್ಯಾನ ಮತ್ತು ಆದೇಶಗಳು ಸುಪ್ರೀಂ ತೀರ್ಪಿನ ಅಪವ್ಯಖ್ಯಾನ ಮತ್ತು ಕೋರ್ಟು ನಿಂದನೆ ಯೂ ಆಗುತ್ತದೆ ಎಂದು ಶಿವಸುಂದರ್ ತಿಳಿಸಿದ್ದಾರೆ.

ಒಂದು ಸರ್ಕಾರ ಈ ರೀತಿಯ ಬಾಲಿಷ ತಪ್ಪುಗಳನ್ನು ಮಾಡಬಾರದು. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶ ಇಲ್ಲ ಎಂದು ಮುಸ್ಲಿಮರಿಗೆ 2(ಬಿ) ನಲ್ಲಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಿತ್ತುಹಾಕಿದೆ. ಆದರೆ ಅದೇ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್ ಮತ್ತು ಜೈನ (ದಿಗಂಬರ) ಧರ್ಮಗಳಿಗೆ ಲಿಂಗಾಯತರ ಜೊತೆಯಲ್ಲಿ 2 (ಡಿ)ಯಲ್ಲಿ ಮೀಸಲಾತಿ ನೀಡಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬೇಕಿಲ್ಲ, ಮುಸ್ಲಿಂ ಒಲೈಕೆಗೆ ಕಾಂಗ್ರೆಸ್ ಮೀಸಲಾತಿ ನೀಡಿತ್ತು: ಅಮಿತ್ ಶಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...