ಕೊರೊನಾ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸೋಂಕು ಹರಡುವುದಿಲ್ಲ. ಹಾಗಾಗಿ ಮೃತದೇಹಗಳ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದ ಸಂಸದ ಡಿ.ಕೆ ಸುರೇಶ್ ಇಂದು ಅಂತಹ ಅಂತ್ಯಸಂಸ್ಕಾರದಲ್ಲಿ ಸ್ವತಃ ಭಾಗಿಯಾಗಿದ್ದಾರೆ.
ಸೋಂಕಿನಿಂದ ನಿಧನರಾದವರ ಅಂತಿಮ ಸಂಸ್ಕಾರಕ್ಕೆ ಹಲವಾರು ಕಡೆ ತಡೆವೊಡ್ಡಲಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದರು ಇಂದು ತಾವೇ ಶವ ಸಂಸ್ಕರದಲ್ಲಿ ಭಾಗಿಯಾಗುವ ಮೂಳಕ ಸತ್ತವರಿಂದ ಸೋಂಕು ಹರಡುವುದಿಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷದ ನರಸಿಂಹ ಶೆಟ್ಟಿಯೆಂಬುವವರು ಕೊರೊನಾ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಡಿ.ಕೆ ಸುರೇಶ್ ಭಾಗವಹಿಸಿದ್ದಾರೆ.
ಅಂತ್ಯ ಸಂಸ್ಕಾರದಲ್ಲಿ ಪ್ರತಿಯೊಬ್ಬರೂ ಅಗತ್ಯ ಸುರಕ್ಷಾ ಪರಿಕರಗಳಾದ ಪಿಪಿಇ ಕಿಟ್ ಧರಿಸಿದ್ದರು. ಡಿ.ಕೆ ಸುರೇಶ್ ರೊಂದಿಗೆ ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕನಕಪುರ ನಗರಸಭೆ ಸದಸ್ಯರು ಸಹ ಹಾಜರಿದ್ದರು.
ಕೊರೊನ ಸೋಂಕಿನಿಂದ ಬಲಿಯಾದವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಅಪಪ್ರಚಾರಗಳನ್ನು ತೊಡೆದು ಹಾಕಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ @DKSureshINC ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. pic.twitter.com/WpMPcAG23e
— Karnataka Congress (@INCKarnataka) July 19, 2020
ಕೊರೊನ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ವಿಚಾರದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾಂತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕೆಂದು ಅವರು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ‘ನರಸಿಂಹ ಶೆಟ್ಟಿಯವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ಮರಣ ಹೊಂದಿದ ವ್ಯಕ್ತಿಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ: ಅಂತ್ಯಸಂಸ್ಕಾರಕ್ಕೆ ಅವಕಾಶಮಾಡಿಕೊಡಿ
ಸತ್ತವರು ಉಸಿರಾಡುವುದಿಲ್ಲ.
ಹಾಗಾಗಿ, ವಯರಸ್ ಹರಡುವುದಿಲ್ಲ.