ಡಿಎಂಕೆ ಪಕ್ಷದ ವರಿಷ್ಠ, ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ ಜನ್ಮದಿನದ ಪೂರ್ವಭಾವಿಯಾಗಿ ಡಿಎಂಕೆ ಕರೆದಿದ್ದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
“ದ್ರಾವಿಡ ಮಾದರಿಯ ತರಬೇತಿ ಕೋರ್ಸ್”ಗಳನ್ನು ನಡೆಸಲು, ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡಲು ಯತ್ನಿಸುತ್ತಿರುವ ದೇಶ ವಿರೋಧಿ ಮತ್ತು ಅಪಾಯಕಾರಿ ಶಕ್ತಿಗಳನ್ನು ಗುರುತಿಸಲು ಯೋಜಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಕ್ಷದ ಐಟಿ ವಿಭಾಗ, ಮಹಿಳಾ ವಿಭಾಗ, ಯುವ ವಿಭಾಗ, ವಿದ್ಯಾರ್ಥಿ ವಿಭಾಗಗಳ ಸಹಾಯದಿಂದ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಈ ತರಬೇತಿ ಶಿಬಿರಗಳನ್ನು ನಡೆಸುವುದಾಗಿ ಡಿಎಂಕೆ ಹೇಳಿದೆ. ಸರಿಯಾಗಿ ಆಯೋಜನೆ ಮಾಡಲು ಜಿಲ್ಲಾ ಘಟಕಗಳಿಗೆ ಸೂಚಿಸಲಾಗಿದೆ.
“ಪೆರಿಯಾರ್, ಅಣ್ಣಾದೊರೈ ಮತ್ತು ಕರುಣಾನಿಧಿಯವರ ಅವರ ಕಠಿಣ ಪರಿಶ್ರಮದಿಂದಾಗಿ ತಮಿಳುನಾಡು ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಕೋಮು ಸೌಹಾರ್ದತೆ ಇದೆ. ಇದನ್ನು ಅರಗಿಸಿಕೊಳ್ಳಲಾಗದ ಶಕ್ತಿಗಳು ಕೋಮು ವಿಷಬೀಜ ಬಿತ್ತಲು ಯತ್ನಿಸುತ್ತಿವೆ. ತಮಿಳುನಾಡನ್ನು ಉಳಿಸುವುದಕ್ಕಾಗಿ ಈ ದೇಶವಿರೋಧಿ ಶಕ್ತಿಗಳನ್ನು, ಅವರಿಗೆ ಸಹಾಯ ಮಾಡುವವರನ್ನು ಗುರುತಿಸಲು ನಿರ್ಧರಿಸಲಾಗಿದೆ” ಎಂದು ಡಿಎಂಕೆ ತಿಳಿಸಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, “ಈ ದೇಶವಿರೋಧಿ ಶಕ್ತಿಗಳಿಂದ ರಾಜ್ಯವನ್ನು ಪಾರು ಮಾಡುವ ಪ್ರಯತ್ನದಲ್ಲಿ, ನಾವು ರಾಜ್ಯದಾದ್ಯಂತ ದ್ರಾವಿಡ ಮಾದರಿಯ ತರಬೇತಿ ಶಿಬಿರಗಳನ್ನು ನಡೆಸುವ ಹೊಸ ಹೆಜ್ಜೆ ಇರಿಸುತ್ತಿರುವ ಸೈನಿಕರಾಗಿದ್ದೇವೆ. ಮುಖ್ಯಮಂತ್ರಿಯವರು ತಮ್ಮ ಕೆಲಸ ಮತ್ತು ಚಿಂತನೆಗಳನ್ನು ಮುನ್ನಡೆಸಲು ಅವರೊಂದಿಗೆ ಗುರಾಣಿಯಾಗಿ ನಿಲ್ಲುತ್ತೇವೆ” ಎಂದು ಪಕ್ಷ ನಿರ್ಧರಿಸಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಗೆ ಭೇಟಿಯ ಸಂದರ್ಭದಲ್ಲಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದರು. “ಸಹಕಾರಿ ಒಕ್ಕೂಟದ ನಿಜವಾದ ಸ್ಫೂರ್ತಿ’ಯನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿದ್ದರು. ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಅನುದಾನ ಹಾಗೂ ಯೋಜನೆಗಳನ್ನು ನೀಡಬೇಕು. ತಮಿಳು ಭಾಷೆಗೆ ಹಿಂದಿಯಷ್ಟೇ ಆದ್ಯತೆಯನ್ನು ನೀಡಬೇಕು. ತಮಿಳುನಾಡು ರಾಜ್ಯಕ್ಕೆ ನೀಟ್ನಿಂದ ವಿನಾಯಿತಿ ನೀಡಬೇಕು” ಎಂದು ಒತ್ತಾಯಿಸಿದ್ದರು.
ಸ್ಟಾಲಿನ್ ತಮ್ಮ ಭಾಷಣದಲ್ಲಿ, “ತಮಿಳುನಾಡು ರಾಜ್ಯವು ಆರ್ಥಿಕತೆ ಹಾಗೂ ಇದಕ್ಕೆ ಸಂಬಂಧಿತ ಅಂಶಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿಯೂ ಮುಂದಿದೆ” ಎಂದಿದ್ದರು. “ಸಂಕ್ಷಿಪ್ತವಾಗಿ ಹೇಳುವುದಾದರೆ, ತಮಿಳುನಾಡು ಎಲ್ಲರನ್ನೂ ಒಳಗೊಂಡು ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ. ಇದನ್ನೇ ನಾವು ದ್ರಾವಿಡ ಮಾದರಿ ಎಂದು ಕರೆಯುತ್ತೇವೆ” ಎಂದು ಬಣ್ಣಿಸಿದ್ದರು.
ಇದನ್ನೂ ಓದಿರಿ: ತಮಿಳುನಾಡಿಗೆ ಅನ್ಯಾಯ; ಮೋದಿ ಇದ್ದ ವೇದಿಕೆಯಲ್ಲೇ ಸ್ಟಾಲಿನ್ ಹೇಳಿಕೆ; ಅಣ್ಣಾಮಲೈಗೆ ಬೇಸರ
ರಾಷ್ಟ್ರೀಯ ಆರ್ಥಿಕತೆಗೆ ತಮಿಳುನಾಡಿನ ಕೊಡುಗೆಯನ್ನು ಎತ್ತಿ ಹಿಡಿದ ಅವರು, “ಭಾರತದ ಜಿಡಿಪಿಯಲ್ಲಿ ರಾಜ್ಯದ ಪಾಲು ಶೇ.9.22 ರಷ್ಟಿದೆ. ಕೇಂದ್ರ ಸರ್ಕಾರದ ಒಟ್ಟಾರೆ ತೆರಿಗೆ ಆದಾಯದಲ್ಲಿ ತಮಿಳುನಾಡಿನ ಪಾಲು ಶೇ. 6ರಷ್ಟಿದೆ. ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆಯಲ್ಲಿ ತಮಿಳುನಾಡಿನಂತಹ ಅಭಿವೃದ್ಧಿ ಹೊಂದಿದ ರಾಜ್ಯಗಳು ನೀಡಿದ ಕೊಡುಗೆಗೆ ನ್ಯಾಯ ಸಲ್ಲಿಸಲು ಕೇಂದ್ರ ಸರ್ಕಾರವು ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು. ಅನುದಾನ ಹಂಚಿಕೆಯನ್ನು ಹೆಚ್ಚಿಸಬೇಕು. ಆಗ ಮಾತ್ರ ಸಹಕಾರಿ ಫೆಡರಲಿಸಂನ ನಿಜವಾದ ಮನೋಭಾವವನ್ನು ಎತ್ತಿಹಿಡಿಯಲಾಗುತ್ತದೆ” ಎಂದಿದ್ದರು.
“15 ಮೇ 2022ರ ವೇಳೆಗೆ ತಮಿಳುನಾಡಿಗೆ ನೀಡಬೇಕಾದ ಜಿಎಸ್ಟಿ ಪರಿಹಾರವು 14,006 ಕೋಟಿ ರೂ. ಆಗಿದೆ. ಇದನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಅನೇಕ ರಾಜ್ಯಗಳ ಆದಾಯವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿರುವ ಸಮಯದಲ್ಲಿ, ಜಿಎಸ್ಟಿ ಪರಿಹಾರದ ಅವಧಿಯನ್ನು ವಿಸ್ತರಿಸಬೇಕು” ಎಂದು ಆಗ್ರಹಿಸಿದ್ದರು.