ಕರ್ನಾಟಕದ ಗಡಿಯಲ್ಲಿರುವ ಕೇರಳದ ಕಾಸರಗೋಡಿನಲ್ಲಿ ಸಾಕಷ್ಟು ಊರುಗಳ ಹೆಸರು ಕನ್ನಡದಲ್ಲಿಯೇ ಇದೆ. ಕನ್ನಡಿಗರು ಮತ್ತು ಮಲಯಾಳಿಗಳು ಕಾಸರಗೋಡಿನಲ್ಲಿ ಸೌಹಾರ್ದತೆಯ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ನಡುವೆ ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಕೆಲವು ಊರುಗಳ ಹೆಸರು ಬದಲಾಯಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಸರಗೋಡು ಭಾಗದ ಕನ್ನಡಿಗರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂದು ಈ ಕುರಿತು ಪತ್ರಿಕಾ ಹೆಳಿಕೆ ನೀಡಿದ್ದು, “ಕೇರಳ ರಾಜ್ಯದ ವ್ಯಾಪ್ತಿಯಲ್ಲಿರುವ ಕಾಸರಗೋಡು ಜಿಲ್ಲೆಯ ಅನೇಕ ಗ್ರಾಮಗಳಿಗೆ ಕನ್ನಡದ ಹೆಸರು ಇದೆ. ಕನ್ನಡದ ಹೆಸರುಗಳನ್ನು ಬದಲಾಯಿಸಿ ಮಲಯಾಳಂ ಹೆಸರಿಡಲು ಮುಂದಾಗುವುದು ಸರಿಯಾದ ಕ್ರಮ ಅಲ್ಲ. ಕನ್ನಡಿಗರು ಮತ್ತು ಮಲಯಾಳಿಗಳು ಕಾಸರಗೋಡಿನಲ್ಲಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಕಾಸರಗೋಡು, ಮಂಜೇಶ್ವರ ಭಾಗದ ಊರುಗಳ ಹೆಸರನ್ನು ಬದಲಾಯಿಸದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆಯಲಾಗುವುದು” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು ಪಿಣರಾಯಿ ವಿಜಯನ್ರವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು @vijayanpinarayi ಅವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ. pic.twitter.com/NfnmBkI1CC
— H D Kumaraswamy (@hd_kumaraswamy) June 28, 2021
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ (KBADA) ಅಧ್ಯಕ್ಷರಾಗಿರುವ ಡಾ. ಸಿ ಸೋಮಶೇಖರ ಅವರು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೇರಳದ ಕಾಸರಗೋಡು ಭಾಗದಲ್ಲಿ ಕನ್ನಡದ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕೇರಳದ ಕಾಸರಗೋಡು, ಮಂಜೇಶ್ವರ ಪ್ರದೇಶದಲ್ಲಿ ಅನೇಕ ಗ್ರಾಮಗಳ ಕನ್ನಡ ಹೆಸರನ್ನು ಬದಲಾಯಿಸಿ ಮಲಯಾಳಂ ಹೆಸರಿಡುವ ಪ್ರಯತನ್ನ ನಡೆಯುತ್ತಿದೆ. ಈ ವಿಷಯ ಕೇರಳ ಸರ್ಕಾರದ ಗಮನಕ್ಕೆ ಬಂದಿರದೇ ಇರಬಹುದು. ಸ್ಥಳೀಯ ಆಡಳಿತಗಳ ವ್ಯಾಪ್ತಿಯಲ್ಲಿ ಈ ಪ್ರಯತ್ನಗಳು ನಡೆದಿರುವ ಸಾಧ್ಯತೆ ಇದೆ ಎಂದು ಸಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಆನ್ಲೈನ್ ತರಗತಿ ಮುಂದುವರಿಕೆ: ಸನ್ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ರವರಿಗೊಂದು ಬಹಿರಂಗ ಪತ್ರ