ಮುಖ್ಯಮಂತ್ರಿಗಳೇ ಕೇಂದ್ರದ ಒತ್ತಡಕ್ಕೆ ಮಣಿದು ಕಾರ್ಮಿಕರು ಹಾಗೂ ರೈತರ ಬದುಕಿನ ಜೊತೆ ಚೆಲ್ಲಾಟವಾಡದಿರಿ ಎಂದು ರೈತ ಹಾಗೂ ಕಾರ್ಮಿಕ ಮುಖಂಡರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಕಾರ್ಮಿಕ ಸಂಘಟನೆ, ರೈತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ರೈತ ಹಾಗೂ ದುಡಿಯುವ ಜನರ ಬದುಕನ್ನು ಅತಂತ್ರಗೊಳಿಸುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಂತಹ ಕೇಂದ್ರದ ಪ್ರಸ್ತಾಪಗಳಿಗೆ ಒಪ್ಪದೆ, ಅವುಗಳನ್ನು ಕೈ ಬಿಡಬೇಕು ಎಂದು ಹತ್ತಾರು ಸಂಘಟನೆಗಳು ಮುಖ್ಯಮಂತ್ರಿಗಳನ್ನು ಒತ್ತಾಯಿಸಿವೆ.
ರೈತ ಹಾಗೂ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಕೇಂದ್ರ ಸರ್ಕಾರದ ವಿರುದ್ದ ಮೇ 20 ರಿಂದ 27ರ ತನಕ “ಶ್ರಮಿಕ ಹಕ್ಕು ಅಭಿಯಾನ”ವನ್ನು ಹಮ್ಮಿಕೊಂಡಿದ್ದು, ಮೇ 22 ರಂದು ಅಖಿಲ ಭಾರತ ಕಾರ್ಮಿಕರ ಹೋರಾಟ ಮತ್ತು ಮೇ 27ರಂದು ಅಖಿಲ ಭಾರತ ರೈತರ ಹೋರಾಟಗಳು ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಓದಿ: ಕಾರ್ಮಿಕ ಕಾಯ್ದೆ ತಿದ್ದುಪಡಿಗಿದೆ ಹುನ್ನಾರದ ಇತಿಹಾಸ : ಎಸ್. ಬಾಲನ್
ಪತ್ರಿಕಾ ಹೇಳಿಕೆಯಲ್ಲಿ, “ಕೊರೋನಾ ಪಿಡುಗಿನ ಸಂಕಷ್ಟಗಳಿಂದ ಈಗಾಗಲೇ ದುಡಿಯುವ ಜನರು ತತ್ತರಿಸಿಹೋಗಿದ್ದರೆ. ವಲಸೆ ಕಾರ್ಮಿಕರ ಕಣ್ಣೀರು ನಿಮ್ಮ ಕಣ್ಣಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ಸರಿಯಾದ ಊಟವಿಲ್ಲದ ಮಕ್ಕಳ ಆಕ್ರಂದನವಾದರೂ ಕೇಳಿಸಿರಬೇಕು. ಕೋಟ್ಯಾಂತರ ಕೈಗಳು ಕೆಲಸವಿಲ್ಲದೆ ಕೂತಿವೆ. ಮನೆಮಂದಿಗೆ ಸಾಕಾಗುವಷ್ಟು ಆಹಾರ ಬಹುಪಾಲು ದುಡಿಯುವ ಜನರ ಮನೆಗಳಲ್ಲಿ ಇಲ್ಲ. ಸಮಗ್ರ ಆಹಾರ ಸಾಮಗ್ರಿ ಕಿಟ್ ಕೊಡಿಯೆಂದರೆ, ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆದು ಜನರ ಇದ್ದಬದ್ದ ಹಣವನ್ನೂ ಬಾಚಲು ಅವಕಾಶ ಮಾಡಿಕೊಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹಾ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಕಾರ್ಮಿಕರ ಹಾಗೂ ರೈತರ ಹಿತಕಾಯಲು ಇದ್ದ ಕಾನೂನುಗಳನ್ನು ಕಿತ್ತು ಕಾರ್ಪೊರೇಟ್ ಶಕ್ತಿಗಳ ದರೋಡೆಗೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿದೆ. ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಿ, ಕಾರ್ಮಿಕರ ಹಿತ ರಕ್ಷಿಸಲು ಇದ್ದ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ದೇಶದಾದ್ಯಂತ ಈಗಾಗಲೇ ಪ್ರಾರಂಭವಾಗಿದೆ. ಇದಲ್ಲದೆ ಕೃಷಿ ಯೋಗ್ಯ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳಿಗೆ ಪರಭಾರೆ ಮಾಡಲು ಗೇಣಿ ನೀತಿಯಲ್ಲಿ, ಕೃಷಿ ಭೂಮಿಯ ಖರೀದಿಯ ನಿಯಮಗಳಲ್ಲಿ ಬದಲಾವಣೆ ತರುತ್ತಿರುವುದಲ್ಲದೆ, ರೈತರ ಬೆಳೆಗೆ ಒಂದಷ್ಟಾದರೂ ಬೆಲೆ ಸುರಕ್ಷತೆಯನ್ನು ಕೊಡುತ್ತಿದ್ದ ಎಪಿಎಂಸಿಯನ್ನು ದುರ್ಬಲಗೊಳಿಸುವ ನೀತಿಯೂ ನಿಮ್ಮ ಮುಂದಿದೆ.” ಎಂದು ಕಿಡಿಕಾರಿದ್ದಾರೆ.
ಓದಿ: ಕಾರ್ಮಿಕ ಕಾಯ್ದೆಗಳಿಗೆ ಅವಸರದ ತಿದ್ದುಪಡಿ ಹಿಂದೆ ದುರುದ್ದೇಶದ ವಾಸನೆಯಿದೆ : ಸಿದ್ದರಾಮಯ್ಯ
ಇಂತಹ ನೀತಿಗಳನ್ನು ತಿರುಚುವ ಕೆಲಸವನ್ನು ಕೂಡಲೇ ಕೈಬಿಡಬೇಕು. ಕಾರ್ಪೊರೇಟ್ ಒತ್ತಡಕ್ಕೆ ಮಣಿಯಬಾರದು, ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಬಾರದು. ಕಾರ್ಮಿಕರನ್ನು ಮತ್ತು ರೈತರನ್ನು ಬಲಿಕೊಡುವ ಪ್ರಯತ್ನ ಮಾಡಿದಲ್ಲಿ ಇಡೀ ರಾಜ್ಯದ ತೀವ್ರ ವಿರೋಧವನ್ನು ಖಂಡಿತ ಎದುರಿಸಬೇಕಾಗುತ್ತದೆ ಎಂದು ಸಂಘಟನೆಗಳು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿವೆ.
ಪತ್ರಿಕಾ ಹೇಳಿಕೆಗೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಮಾನಸಯ್ಯ, ಭಾರತೀಯ ಫ್ಯಾಸಿಸ್ಟ್ ವಿರೋಧಿ ಒಕ್ಕೂಟದ ಬಾಲನ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಬಸವರಾಜು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಆಹಾರ ಹಕ್ಕು ಸಮಿತಿಯ ಶಾರದಾ ಗೋಪಾಲ್, ಕರ್ನಾಟಕ ರೈತ ಸಂಘಟನೆಯ ಡಿ. ಹೆಚ್. ಪೂಜಾರ್, ಕರ್ನಾಟಕ ಶ್ರಮಿಕ ಶಕ್ತಿಯ ವರದ ರಾಜೇಂದ್ರ, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಮುಂತಾದವರು ಸಹಿ ಮಾಡಿದ್ದಾರೆ.
ಬಿಬಿಎಂಪಿ ಗುತ್ತಿಗೆ ನೌಕರರ ಯುನಿಯನ್, ರೇಸ್ ಕೋರ್ಸ್ ಯುನಿಯನ್ ಬೆಂಗಳೂರು ಮತ್ತು ಮೈಸೂರು, ಬಿಡಬ್ಲೂಎಸ್ಎಸ್ಬಿ ಗುತ್ತಿಗೆ ನೌಕರರ ಸಂಘ, ಹೆಚ್ಎಎಲ್, ಬಿಇಎಮ್ಎಲ್ , ಬಿಹೆಚ್ಇಎಲ್ ಗುತ್ತಿಗೆ ನೌಕರರ ಸಂಘ, ಗಣಿ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ನೌಕರರ ಸಂಘ, ಮೈಕೋ ಬಾಸ್ ಗುತ್ತಿಗೆ ನೌಕರರ ಸಂಘಗಳು ಪ್ರತಭಟನೆಗೆ ಬೆಂಬಲ ಸೂಚಿಸಿವೆ.
ವಿಡಿಯೊ ನೋಡಿ: ಉತ್ತರಪ್ರದೇಶದಿಂದ ಬಿಹಾರಕ್ಕೆ ತೆರಳಲು ರೈಲು ನೋಂದಣಿ ಮಾಡಿಸಲು ಮುಗಿಬಿದ್ದಿರುವ ವಲಸೆ ಕಾರ್ಮಿಕರು.