ಕೇರಳದ ತಿರುವನಂತಪುರಂನಲ್ಲಿ 26ರ ಹರೆಯದ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಡಾ.ಶಹಾನಾ ಸಾವಿಗೆ ಶರಣಾದ ವೈದ್ಯೆ. ಕಳೆದ ಮಂಗಳವಾರ ಬೆಳಿಗ್ಗೆ ನಗರದ ಅಪಾರ್ಟ್ಮೆಂಟ್ನಲ್ಲಿ ಶಹನಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಮದುವೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ?
ವರದಿಗಳ ಪ್ರಕಾರ ಮೃತ ಡಾ. ಶಹನಾ ಮತ್ತು ವೈದ್ಯ ಡಾ. ಇ.ಎ ರುವೈಸ್ ಪರಸ್ಪರ ಪ್ರೀತಿಸುತ್ತಿದ್ದರು. ಶಹನಾಳನ್ನು ಮದುವೆಯಾಗುವುದಾಗಿ ರುವೈಸ್ ಮಾತು ಕೊಟ್ಟಿದ್ದರು. ಆದರೆ, ಇತ್ತೀಚೆಗೆ ವರದಕ್ಷಿಣೆಯ ಕಾರಣ ನೀಡಿ ಮದುವೆಯಾಗಲು ನಿರಾಕರಿಸಿದ್ದಾರೆ. ಇದರಿಂದ ನೊಂದ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಣ, ಒಡವೆ, ಕಾರಿಗೆ ಬೇಡಿಕೆ ಇಟ್ಟಿದ್ದ ರುವೈಸ್
ಶಹನಾರನ್ನು ರುವೈಸ್ ಮದುವೆಯಾಗಬೇಕಾದರೆ ವರದಕ್ಷಿಣೆಯಾಗಿ 150 ಗ್ರಾಂ. ಚಿನ್ನಾಭರಣ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರು ಕೊಡಬೇಕೆಂದು ರುವೈಸ್ ಕುಟುಂಬಸ್ಥರು ಬೇಡಿಕೆ ಇಟ್ಟಿದ್ದರು ಎಂದು ಶಹಾನಾ ಕುಟುಂಬ ಆರೋಪಿಸಿದೆ.
ರುವೈಸ್ ಕುಟುಂಬಸ್ಥರು ಕೇಳಿದಷ್ಟು ವರದಕ್ಷಿಣೆ ಕೊಡಲು ಸಾಧ್ಯವಿಲ್ಲ ಎಂದು ಶಹಾನಾ ಕುಟುಂಬ ಹೇಳಿದ್ದಕ್ಕೆ ಮದುವೆ ರದ್ದಾಗಿತ್ತು. ಇದರಿಂದ ಮನನೊಂದು ಶಹನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲಯಾಳಂ ಸುದ್ದಿ ವಾಹಿನಿ ಮಾತೃಭೂಮಿ ವರದಿ ಮಾಡಿದೆ.
ಶಹನಾ ಅವರ ಅಪಾರ್ಟ್ಮೆಂಟ್ನಲ್ಲಿ ಸಿಕ್ಕ ಸೂಸೈಡ್ ನೋಟ್ನಲ್ಲಿ “ಎಲ್ಲರಿಗೆ ಹಣ ಮಾತ್ರ ಬೇಕು” ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ತಡೆ ಕಾಯ್ದೆಯಡಿ ಪೊಲೀಸರು ಶಹನಾರ ಪ್ರಿಯಕರ ಡಾ. ರುವೈಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಶಹನಾ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ವರದಕ್ಷಿಣೆ ಬೇಡಿಕೆಯ ಆರೋಪದ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ಆಯೋಗವೂ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಡಿ.14ರಂದು ಆಯೋಗದ ಮುಂದೆ ಹಾಜರಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸಮಿತಿ ಅಧ್ಯಕ್ಷ ಎ.ಎ.ರಶೀದ್ ಸೂಚಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಶಹಾನಾ ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ವರದಕ್ಷಿಣೆ ಬೇಡಿಕೆಯಿಂದ ಉಂಟಾಗಿರುವ ಮಾನಸಿಕ ಸಂಕಟ ಯುವ ವೈದ್ಯೆಯನ್ನು ಆತ್ಮಹತ್ಯೆಗೆ ದೂಡಿರುವುದು ನಿಜವಾದರೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸತಿದೇವಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿತ ಸಾವು: ಮೊದಲ ಸ್ಥಾನದಲ್ಲಿರುವ ಯುಪಿ
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.