ಕನ್ನಡದ ಹಿರಿಯ ಲೇಖಕ, ಸಮಾಜವಾದಿ ಚಿಂತಕ ಹಾಗೂ ಸಾಹಿತ್ಯ ವಿಮರ್ಶಕ ಡಿ.ಎಸ್. ನಾಗಭೂಷಣ್ ಗುರುವಾರ ಮುಂಜಾನೆ ಶಿವಮೊಗ್ಗದ ಕಲ್ಲಹಳ್ಳಿಯ ಸ್ವಗೃಹದಲ್ಲಿ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮಹಾತ್ಮ ಗಾಂಧಿಯವರ ಜೀವನ ಚರಿತ್ರೆಯಾದ, ‘ಗಾಂಧಿ ಕಥನ’ ಕೃತಿಗಾಗಿ ಅವರಿಗೆ 2021 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ‘ಇಂದಿಗೆ ಬೇಕಾದ ಗಾಂಧಿ’, ‘ಕುವೆಂಪು ಪುನರನ್ವೇಷಣೆ’ ಮತ್ತು ‘ಲೋಹಿಯಾ ಜೊತೆಯಲ್ಲಿ’ ಅವರ ಗಮನಾರ್ಹ ಕೃತಿಗಳಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವರ ನಿಧನಕ್ಕೆ ಲೇಖಕರು ಮತ್ತು ಶಿಕ್ಷಣ ತಜ್ಞರು ಸಂತಾಪ ಸೂಚಿಸಿದ್ದಾರೆ. ಗುರುವಾರ ಸಂಜೆ ನಗರದ ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗೋಕಾಕ್ ವರದಿ ಹೋರಾಟ: ಕನ್ನಡದ ರಕ್ಷಣೆಗೆ ಈಗಲೂ ಮಾದರಿ
ಡಿಎಸ್ ನಾಗಭೂಷಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಇಂಗ್ಲಿಷ್ ಉಪನ್ಯಾಸಕ ವಿ.ಎಲ್. ನರಸಿಂಹಮೂರ್ತಿ, “ಕನ್ನಡ ಸಾಹಿತ್ಯದ ಕುರಿತು, ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ ಕುರಿತು ಅತ್ಯಂತ ಸೂಕ್ಷ್ಮ ಗ್ರಹಿಕೆಯಿದ್ದ ಡಿಎಸ್ಎನ್ ತಮ್ಮ ನೇರವಾದ, ನಿಷ್ಠುರವಾದ ಬರಹಳಗಿಂದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಮೈಚಳಿ ಬಿಡಿಸುತ್ತಿದ್ದರು. ಲೋಹಿಯಾ ಮತ್ತು ಗಾಂಧಿ ವಿಚಾರಗಳಲ್ಲಿ ಅದೆಷ್ಟು ಪಾಂಡಿತ್ಯ ಹೊಂದಿದ್ದರು ಎಂದರೆ ಇಂಗ್ಲಿಷ್ನಲ್ಲಿ ಬರೆಯುವ ರಾಮಚಂದ್ರ ಗುಹಾ, ಅಕಿಲ್ ಬಿಲ್ಗ್ರಾಮಿ, ಬೀಖು ಪರೇಖ್ ಅಂತವರ ತಿಳುವಳಿಕೆ ಮಿತಿಗಳನ್ನು ಕನ್ನಡದಲ್ಲಿ ಎತ್ತಿ ತೋರಿಸುತ್ತಿದ್ದರು. ಕುವೆಂಪು, ಲಂಕೇಶ್, ತೇಜಸ್ವಿ, ಜಿಎಸ್ಎಸ್, ಸೇರಿದಂತೆ ಕನ್ನಡ ಸಾಹಿತ್ಯದ ಬಗ್ಗೆ ಅಪೂರ್ವ ಒಳನೋಟಗಳುಳ್ಳ ಬರಹಗಳನ್ನು ಡಿಎಸ್ಎನ್ ಬಿಟ್ಟುಹೋಗಿದ್ದಾರೆ. ಕನ್ನಡ ವಿಮರ್ಶೆಗೆ ಡಿಎಸ್ಎನ್ ಕೊಡುಗೆ ಅಪಾರವಾದುದು ಇನ್ನು ಮೇಲೆಯಾದರು ಕನ್ನಡದ ಲೇಖಕರು, ವಿಮರ್ಶಕರು ಡಿಎಸ್ಎನ್ ಬರಹಗಳಿಗೆ ನ್ಯಾಯ ಸಲ್ಲಸಲಿ” ಎಂದು ಹೇಳಿದ್ದಾರೆ.
ಶಿಕ್ಷಣ ತಜ್ಞ ಶ್ರೀಪಾದ ಭಟ್ ಅವರು, “ಡಿ.ಎಸ್.ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು. ಎಪ್ಪತ್ತರ ದಶಕದ ನಮ್ಮ ಬಾಲ್ಯದ ದಿನಗಳಲ್ಲಿ ಆಕಾಶವಾಣಿಯಲ್ಲಿದ್ದ ಡಿ.ಎಸ್.ಎನ್ ಓದುತ್ತಿದ್ದ ಪ್ರದೇಶ ಸಮಾಚಾರ ಜನಪ್ರಿಯವಾಗಿತ್ತು. ಹಾಗೆಯೇ ಲೋಹಿಯಾ, ಕುವೆಂಪು, ಜಿಎಸ್ಎಸ್, ಗಾಂಧಿ ಕುರಿತ ಅವರ ಆಳವಾದ ಓದು, ಗ್ರಹಿಕೆ ಮತ್ತು ವಿಚಾರ ಮಂಡನೆ ಬೆರಗುಗೊಳಿಸುತ್ತಿತ್ತು. ಪ್ರತಿಭಾವಂತ ಲೇಖಕ. ವಸ್ತುನಿಷ್ಠವಾಗಿ ಬರೆಯುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಡಿ.ಎಸ್.ಎನ್. He is one of the best reader” ಎಂದು ಹೇಳಿದ್ದಾರೆ.
“1990ರಲ್ಲಿ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ನೆಪದಲ್ಲಿ ಲೇಖಕರಿಗೆ ತುಮಕೂರಿನಲ್ಲಿ ಒಂದು ಅಭಿನಂದನೆ, ಚರ್ಚೆ ಗೋಷ್ಠಿಯಿತ್ತು. ನಾನು ಮೊದಲ ಬಾರಿಗೆ ಡಿ.ಎಸ್.ಎನ್ ರನ್ನು ಮಾತನಾಡಿಸಿದ್ದು ಅಲ್ಲಿ. ಆ ಸಮಾರಂಭಕ್ಕೆ ಬರಲು ಒಪ್ಪಿಕೊಂಡು ನಂತರ ಕೈ ಕೊಟ್ಟ ಲಂಕೇಶ್ರನ್ನು ಶರ್ಟಿನ ತೋಳು ಮೇಲೇರಿಸಿಕೊಳ್ಳುತ್ತಾ ಟೀಕಿಸುತ್ತಿದ್ದ ಆ ದೃಶ್ಯ ನಿನ್ನೆ, ಮೊನ್ನೆ ನಡೆದಂತಿದೆ.
ಆದರೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಂದರ್ಭದಲ್ಲಿ ಚಂಡಿ ಹಿಡಿದು ಹಠದಿಂದ ವರ್ತಿಸುವ ಅವರ ಇನ್ನೊಂದು ಮುಖ ಅನೇಕ ಸಂದರ್ಭಗಳಲ್ಲಿ ಎದುರುಗಿರುವವರನ್ನು ಪರಚುತ್ತಿತ್ತು, ಗಾಯಗೊಳಿಸುತ್ತಿತ್ತು.
ತನ್ನದೇ ಸತ್ಯ ಎಂಬ ಧೋರಣೆ ಜಗಳಗಳಿಗೆ ಕಾರಣವಾಗಿದ್ದು ಲೆಕ್ಕವೇ ಇಲ್ಲ. ನಾವು ಸ್ನೇಹಿತರು ‘ಇದೊಂದು ವಿಷಯದಲ್ಲಿ ಡಿ.ಎಸ್.ಎನ್ ಪ್ರಬುದ್ದರಾಗಿದ್ದರೆ ಎಷ್ಟು ಚಂದ’ ಎಂದು ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಬದುಕು ಹಾಗೆಲ್ಲಾ ಚೆಂದವಾಗಿ ಇರಲು ಬಿಡುವುದಿಲ್ಲ. ಡಿ.ಎಸ್.ಎನ್ರವರಿಗೆ ಈ ಫೋಟೋ ತೋರಿಸಿ ಹೀಗೆ ಇರಬೇಕಿತ್ತು ಸರ್ ನೀವು ಎಂದು ಎಷ್ಟೋ ಬಾರಿ ಹೇಳಬೇಕೆಂದುಕೊಂಡಿದ್ದೆ, ಹೇಳಲಿಲ್ಲ. ತಮ್ಮ ಬದುಕಿನ ಪಯಣ ಮುಗಿಸಿ ಎದ್ದು ನಡೆದ ಡಿ.ಎಸ್.ಎನ್.ಗೆ ನಮನಗಳು” ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್
ಉಪನ್ಯಾಸಕರು, ಸಿನಿಮಾ ಸಾಹಿತ್ಯಾಸಕ್ತ ರೋಹಿತ್ ಅಗಸರಹಳ್ಳಿ ಅವರು, “ಈಗ್ಗೆ ಹದಿನೈದಿಪ್ಪತ್ತು ದಿನಗಳ ಹಿಂದೆ ಶಿವಮೊಗ್ಗೆಗೆ ಹೋದಾಗ ಮೊದಲೇ ಫೋನು ಕೂಡ ಮಾಡದೆ ಡಿಎಸ್ಎನ್ ಭೇಟಿ ಮಾಡಲು ಹೋದೆವು. ಮನೆ ಕೂಡಲೆ ಸಿಕ್ಕದಿದ್ದಾಗ ಸವಿತ ಮೇಡಂ ಅವರಿಗೆ ಫೋನು ಮಾಡಬೇಕಾಯ್ತು. ಡಿಎಸ್ಎನ್ ಅವರಿಗೆ ಹುಷಾರಿಲ್ಲ, ಲಂಗ್ಸ್ ಇನ್ಫೆಕ್ಷನ್ ಆಗಿದೆ; ಹೀಗಾಗಿ ಒಂದೈದೇ ನಿಮಿಷ ಮಾತಾಡಿಸಿ ಅಂದ್ರು. ಅಲ್ಲಿವರೆಗೆ ಶಿವಮೊಗ್ಗೆಗೆ ಹೋದಾಗೆಲ್ಲ ಗೂಳಿಗಳಂತೆ ಹೇಳದೆ ಕೇಳದೆ ನುಗ್ಗಿಬಿಡುತ್ತಿದ್ದ ನಾವು ಇನ್ನು ಮೇಲೆ ಫೋನ್ ಮಾಡಿಕೊಂಡು ಹೋಗೋಣ ಅಂತ ಮಾತಾಡಿಕೊಂಡೆವು.(ನಾನು ಮತ್ತು ಸುಜಾತ) ಈಗಾಗಲೇ ಹೊಸಮನುಷ್ಯ ಪತ್ರಿಕೆ ನಿಲ್ಲಿಸಿದ್ದರಿಂದ ಅದಕ್ಕೆ ಕಾರಣ ಸರ್ ಅವರ ಅನಾರೋಗ್ಯವೇ ಅನ್ನೋದು ಕೂಡ ಗೊತ್ತಿತ್ತು.
ಭೌತಿಕವಾಗಿ ಕುಗ್ಗಿದ್ದರೂ ಲವಲವಿಕೆಯಿಂದಲೇ ತಾಸು ಹೊತ್ತು ಮಾತನಾಡಿದರು. ನಾವೇ ಮತ್ತೆ ಮತ್ತೆ ಸಾರ್ ನೀವು ಹೆಚ್ಚು ಮಾತಾಡಿ ಆಯಾಸ ಮಾಡಿಕೊಳ್ಳಬೇಡಿ ಅಂತ ಹೇಳಿ ಬಂದೆವು. ಯಾಕ್ರೀ ನನ್ನಿಂದ ತಪ್ಪಿಸ್ಕೊಂಡ್ ಹೋಗೋಕೆ ಹೀಗಂತಿದೀರ ಅಂದ್ರು. ಈ ನಡುವೆ ನನ್ನ ಮಗಳು ಅಲ್ಲಿದ್ದ ಬೆಕ್ಕಿನ ಮರಿಗಳ ಜತೆ ದೋಸ್ತಿ ಸಾಧಿಸಿದ್ದರಿಂದ ಎರಡು ಮರಿಗಳೂ ನಮ್ಮೊಂದಿಗೆ ಹಾಸನಕ್ಕೆ ಬಂದವು. ಸರ್ ಅವರು ಕೌಲಗಿ ಅವರ ಮಗನ ಬಳಿ ಹೋಮಿಯೋಪತಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವುದಾಗಿಯೂ, ಇತ್ತೀಚೆಗೆ ಪರವಾಗಿಲ್ಲ ಎಂಬುದಾಗಿಯೂ ಹೇಳಿದರು. ಅದೆಲ್ಲ ಕೇಳಿ ಕೆಲವೇ ದಿನಗಳಲ್ಲಿ ಗೆಲುವಾಗಿ ಮತ್ತೆ ಎಲ್ಲರೊಂದಿಗೆಂತೋ ಅಂತೇ ನನ್ನೊಂದಿಗೂ ಜಗಳಕ್ಕೆ ನಿಲ್ಲುತ್ತಾರೆ ಎಂದೇ ಆಶಿಸಿದ್ದೆ. ಆದರದು ಹುಸಿಹೋಯ್ತು. ಅವರ ಜಗಳಗಂಟ ಗುಣವೇ ಅವರನ್ನು ಸ್ವಚ್ಛವ್ಯಕ್ತಿತ್ವವಾಗಿ ಉಳಿಸಿದ್ದು ಎಂದು ನನಗೆ ಯಾವಾಗಲೂ ಅನ್ನಿಸೋದು. ಹೋಗಿಬನ್ನಿ ಸಾರ್…ನಿಮ್ಮ ಬರೆಹಗಳು ಅದರಲ್ಲೂ ಗಾಂಧಿಕಥನ ನಿಮ್ಮನ್ನು ಕನ್ನಡಿಗರ ನಡುವೆ ಶಾಶ್ವತವಾಗಿಸಿದೆ” ಎಂದು ಹೇಳಿದ್ದಾರೆ.