ಸೆಸ್, ಜಿಎಸ್ಟಿ, ಅನುದಾನ ಮತ್ತು ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಕರ್ನಾಟಕಕ್ಕೆ ಬರ ಬೇಕಿರುವ ಹಣದ ಕುರಿತು ಮುಖಾಮುಖಿ ಚರ್ಚೆಗೆ ನಾನು ಸಿದ್ದ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಅವರು, “ಒಕ್ಕೂಟ ಆರ್ಥಿಕ ವ್ಯವಸ್ಥೆ ಮತ್ತು ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಕುರಿತು ಮುಖಾಮುಖಿ ಚರ್ಚೆಗೆ ನಾಗರಿಕ ಸಮಾಜ ನೀಡಿರುವ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ನಾನು ಕೇಂದ್ರ ಹಣಕಾಸು ಸಚಿವರನ್ನು ಚರ್ಚೆಗೆ ಆಹ್ವಾನಿಸಿದ್ದೆವು. ಅವರು ಭಾಗವಹಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
I have accepted the invite of civil society to debate issues of fiscal federalism and injustices to K’taka with truth and facts. Hon Chief minister, Sri @Siddaramaiah and myself had invited Hon Finance minister for an open debate. I hope she will participate. #GOK pic.twitter.com/EIaxVKqsvh
— Krishna Byre Gowda (@krishnabgowda) April 5, 2024
ಮಾರ್ಚ್ 24ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, “ಕರ್ನಾಟಕಕ್ಕೆ ನೀಡಬೇಕಿದ್ದ ಒಂದೊಂದು ಪೈಸೆಯನ್ನೂ ನಾವು ಸರಿಯಾದ ಸಮಯಕ್ಕೆ ನೀಡಿದ್ದೇವೆ” ಎಂದಿದ್ದರು.
ಮಾರ್ಚ್ 25ರಂದು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದ ಸಚಿವ ಕೃಷ್ಣಬೈರೇಗೌಡ ಅವರು, ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬರಲು ಬಾಕಿಯಿದೆ ಎಂದು ತಿಳಿಸಿದ್ದರು.
ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ ಎಂದಿದ್ದ ಅವರು, ಮಾರ್ಚ್ 31ಕ್ಕೆ ಸೀತಾರಾಮನ್ ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದಾರಾ? ಎಂದು ಸವಾಲು ಹಾಕಿದ್ದರು. ಆದರೆ, ಮಾರ್ಚ್ 31ರಂದು ಯಾವುದೇ ಚರ್ಚೆ ನಡೆದಿರಲಿಲ್ಲ.
ಇದೀಗ, ಏಪ್ರಿಲ್ 6ರಂದು (ನಾಳೆ) ಸಂಜೆ 5 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಸೆಸ್, ಜೆಎಸ್ಟಿ, ಬರ ಪರಿಹಾರ ಸೇರಿದಂತೆ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಕ್ಕಿದೆಯೇ? ವಂಚನೆಯಾಗಿದೆಯೇ? ಸತ್ಯ ಮುಂದಿಡಿ ಬನ್ನಿ ಎಂದು ಮುಖಾಮುಖಿ ಚರ್ಚೆಗೆ ಆಹ್ವಾನಿಸಲಾಗಿದೆ. ಕಂದಾಯ ಸಚಿವರು ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದು, ಕೇಂದ್ರ ವಿತ್ತ ಸಚಿವೆಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ : ಐದೇ ವರ್ಷದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಸ್ತಿ ಹೆಚ್ಚಳ; ₹13 ಲಕ್ಷದಿಂದ ₹4ಕೋಟಿಗೆ ಏರಿಕೆ