ಸಿಎಎ ವಿರೋಧಿ ಹೋರಾಟದ ಬಳಿಕ ಈಗ ಐತಿಹಾಸಿಕ ರೈತರ ಹೋರಾಟವು ಮೋದಿ ಸರಕಾರದ ಬುಡ ಅಲ್ಲಾಡಿಸುತ್ತಿದೆ. ಎಂದಿನಿಂತೆ ಅದು ಸಾಂವಿಧಾನಿಕ ಸಂಸ್ಥೆ EDಯನ್ನು ದುರ್ಬಳಕೆ ಮಾಡಿಕೊಂಡು PFI ವಿರುದ್ಧ ಕಾರ್ಯಾಚರಣೆಗಿಳಿದಿದೆ. ಜನರ ದಿಕ್ಕು ತಪ್ಪಿಸಲು ನಡೆಸುವ ಇಂತಹ ದುಷ್ಟ ತಂತ್ರಗಳಿಂದ PFIಯನ್ನು ಧೃತಿಗೆಡಿಸಲಾಗದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇಂದು ಜಾರಿ ನಿರ್ದೇಶನಾಲಯವು ಏಕಕಾಲದಲ್ಲಿ ಹಲವು ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇದು ರಾಜಕೀಯ ಪ್ರೇರಿತ ಕ್ರಮವಾಗಿದೆ. ಅಧಿಕಾರದಲ್ಲಿರುವ ಸರಕಾರ ಜನಾಕ್ರೋಶದ ಒತ್ತಡಕ್ಕೆ ಗುರಿಯಾದಾಗ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿಗಳನ್ನು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಎದುರಾಳಿಗಳ ವಿರುದ್ಧ ಮತ್ತು ದೇಶದಲ್ಲಿರುವ ಭಿನ್ನಮತವನ್ನು ದಮನಿಸುವುದಕ್ಕಾಗಿ ಮೋದಿ ಸರಕಾರ ಯಾವಾಗಲೂ ರಾಷ್ಟ್ರೀಯ ಏಜೆನ್ಸಿಗಳನ್ನು ಬಳಸುತ್ತಿದೆ. ಈ ಏಜೆನ್ಸಿಗಳ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎದ್ದಿದೆ. ದಿಲ್ಲಿಯಲ್ಲಿ ರೈತರು ಪಟ್ಟು ಹಿಡಿದು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ ಈ ದಾಳಿಗಳು ವಿಷಯಾಂತರಗೊಳಿಸುವ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ ಎಂದು ಶಾಕಿಫ್ ಹೇಳಿದ್ದಾರೆ.
ಪಿಎಫ್ಐ ಸಿಎಎ ಕಾಯ್ದೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದೆ. ಆ ಕಾಯ್ದೆ ಸಂವಿಧಾನ ವಿರೋಧಿಯಾದುದು ಎಂಬುದು ನಮ್ಮ ಅಭಿಮತ. ಹಾಗಾಗಿ ನಮ್ಮ ಹೋರಾಟವನ್ನು ಹಣಿಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಪಾಪ್ಯುಲರ್ ಫ್ರಂಟ್ ಇದರಿಂದ ಆಘಾತಗೊಳ್ಳುವುದಿಲ್ಲ ಎಂದಿದ್ದಾರೆ.
ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ನಡೆಯುತ್ತಿರುವ ಪಿಎಫ್ಐ ಸಂಘಟನೆಯ ನಮ್ಮ ಚಟುವಟಿಕೆಗಳು ಪಾರದರ್ಶಕವಾಗಿವೆ ಮತ್ತು ಸಾರ್ವಜನಿಕವಾಗಿವೆ. ನಮ್ಮಲ್ಲಿ ಮುಚ್ಚುಮರೆ ಏನೂ ಇಲ್ಲ. ಸಂಘಟನೆಯು ಕಾನೂನಾತ್ಮಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಇದನ್ನು ಎದುರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಝೀ ನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್ತಕ್ ಚಾನೆಲ್ಗಳನ್ನು ’ಗೋದಿ ಮೀಡಿಯಾ’ ಎಂದ ರೈತರು!