ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಪ.ಬಂಗಾಳದ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿವಾಸ ಸೇರಿ ಹಲವಡೆ ಗುರುವಾರ ಶೋಧ ಆರಂಭಿಸಿದ್ದಾರೆ.
ಪ್ರಸ್ತುತ ರಾಜ್ಯ ಅರಣ್ಯ ಇಲಾಖೆ ಸಚಿವರಾಗಿರುವ ಮಲ್ಲಿಕ್ ಅವರಿಗೆ ಸೇರಿದ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿರುವ ಎರಡು ಫ್ಲಾಟ್ಗಳ ಮೇಲೆ ಇಡಿ ದಾಳಿ ನಡೆಸಿದೆ. ಮಲ್ಲಿಕ್ ಅವರು ಆಹಾರ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕರಾಗಿದ್ದ ಅಧಿಕಾರಿಯ ನಿವಾಸಗಳು ಸೇರಿದಂತೆ ಇತರ ಎಂಟು ಫ್ಲಾಟ್ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ದಾಳಿ ವೇಳೆ ಸಚಿವರು ಮನೆಯಲ್ಲಿ ಇರಲಿಲ್ಲ. ನಂತರ ಅವರು ಬಂದ ಬಳಿಕ ಫೋನ್ ತೆಗೆದುಕೊಂಡು ಪರಿಶೀಲನೆ ನಡೆಸಲಾಗಿದೆ. ಒಳಗೆ ಎಂಟು ಅಧಿಕಾರಿಗಳು ಇದ್ದಾರೆ. ದಮ್ ಡಮ್ನಲ್ಲಿರುವ ಅವರ ಮಾಜಿ ಆಪ್ತ ಸಹಾಯಕನ ನಿವಾಸ ಮತ್ತು ಇತರ ಕೆಲವು ಸ್ಥಳಗಳಲ್ಲಿಯೂ ನಾವು ಶೋಧ ನಡೆಸುತ್ತಿದ್ದೇವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಈ ಮೊದಲು ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ಟಿಎಂಸಿ ಮತ್ತು ಸತ್ಯಪಾಲ್ ಮಲಿಕ್ಗೆ ಆಪ್ತರಾಗಿರುವ ಕೋಲ್ಕತ್ತಾ ಮೂಲದ ಉದ್ಯಮಿ ಬಾಕಿಬುರ್ ರೆಹಮಾನ್ನನ್ನು ಬಂಧಿಸಿದ್ದರು. ಅವರಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಮಾಡಿದ್ದರು.
ಮೂರು ಅಕ್ಕಿ ಗಿರಣಿ, ಬಾರ್, ರೆಸ್ಟೊರೆಂಟ್, ಹೊಟೇಲ್ ಸೇರಿ ಹಲವು ಉದ್ಯಮಗಳನ್ನು ಬಾಕಿಬುರ್ ರೆಹಮಾನ್ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆದರೆ ಅವರು ಬೃಹತ್ ಆಸ್ತಿಯ ಹಿಂದಿನ ಆದಾಯದ ಮೂಲವನ್ನು ಸ್ಪಷ್ಟಪಡಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: ಗುಜರಾತ್: ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಗುಂಪು