ಕಳೆದ ಎರಡು ವಾರಗಳಲ್ಲಿ ಹಲವಾರು ಸಲ ನೀತಿ ಸಂಹಿತೆ ಉಲ್ಲಂಘನೆಯಾಗಿದೆ, ಆಗುತ್ತಲೇ ಇದೆ. ವಿಪಕ್ಷಗಳ ವಿಚಾರದಲ್ಲಿ ಕಠೋರ ನಿಲುವು ತಾಳುತ್ತಿರುವ ಚುನಾವಣಾ ಆಯೋಗ ಗಂಭೀರ ತಪ್ಪು ಮಾಡಿದ ಬಿಜೆಪಿ ನಾಯಕರಿಗೆ ‘ಅಸಂತೋಷ’ದ ಸೂಚನೆ ನೀಡುತ್ತಿದೆ… ಇದನ್ನೆಲ್ಲ ಗಮಿನಿಸಿದರೆ, ಸಿಬಿಐ, ಐಟಿ ಇಲಾಖೆ ಹಾದಿಯಲ್ಲೇ ಆಯೋಗವೂ ಸಾಗುತ್ತಿರುವ ಸಾಧ್ಯತೆಗಳು ಗೋಚರಿಸುತ್ತಿವೆ..
ನಿನ್ನೆ ಏಪ್ರಿಲ್ 5ರಂದು ದೇಶದ ಪ್ರಜಾಪ್ರಭುತ್ವದ ‘ಒಂಬುಡ್ಸ್ಮನ್’ ಎಂದು ಕರೆಯಲ್ಪಡುವ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳ ಕುರಿತಂತೆ ತಪ್ಪು ತೀರ್ಪುಗಳನ್ನು ನೀಡಿದೆ. ಒಂದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಭಾರತೀಯ ಸೇನೆಯನ್ನು ಮೋದಿಸೇನೆ ಎಂದ ಪ್ರಕರಣ.
ಮೋದಿ ಸಂಪುಟದ ಸಚಿವ ವಿ.ಕೆ. ಸಿಂಗ್ ಸೇರಿದಂತೆ, ಹಲವಾರು ಜನರ ಖಂಡನೆಯ ನಂತರ ಚುನಾವಣಾ ಆಯೋಗವು ಯೋಗಿಗೆ ‘ಜಾರೂಕರಾಗಿರುವಂತೆ ಸಲಹೆ’ ನೀಡುವ ಪತ್ರವನ್ನು ಕಳಿಸಿದೆ!
ಎರಡನೇಯ ನೀತಿ ಸಂಹಿತೆ ಉಲ್ಲಂಘನೆ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವಕುಮಾರ್, ಕಾಂಗ್ರೆಸ್ನ ‘ಕನಿಷ್ಠ ಆದಾಯ ಖಾತ್ರಿ’ಯ ಭರವಸೆ ಕುರಿತು ಮಾಡಿದ ಟೀಕೆ ಕುರಿತದ್ದು. ಈ ಕುರಿತಂತೆ ರಾಜೀವಕುಮಾರರಿಗೂ ಪತ್ರ ಕಳಿಸಿರುವ ಆಯೋಗ, ಸಾರ್ವಜನಿಕ ಸೇವಕರು ನೀತಿ ಸಂಹಿತೆ ಪಾಲಿಸುವುದು, ಚುನಾವಣಾ ಪಾವಿತ್ರ್ಯವನ್ನು ಕಾಪಾಡುವುದು ಅಗತ್ಯ’ ಎಂದು ‘ಬೋಧನೆ’ ಮಾಡಿರುವ ಅದು, ‘ತಮ್ಮ ನಡೆ ಬಗ್ಗೆ ಆಯೋಗಕ್ಕೆ ಅಸಂತೋಷವಿದೆ, ಇನ್ನುಂದೆ ಹುಷಾರಾಗಿರಿ’ ಎಂದಿದೆ!
ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು, ಅದರಲ್ಲೂ ಬಿಜೆಪಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಲೇ ಇವೆ. ನಿನ್ನೆಯೇ (ಏ.5) ವಿಪಕ್ಷಗಳು ‘ಹಫ್ಫೋಸ್ಟ್ ಬಯಲು ಮಾಡಿರುವ ‘’ಅಸೋಷಿಯೇಷನ್ ಆಫ್ ಬಿಲಿಯನ್ ಮೈಂಡ್ಸ್’ ಸಂಸ್ಥೆಯ ಮೇಲೆ ತ್ವರಿತ ಕಾನೂನು ಕ್ರಮಕ್ಕೆ ಆಗ್ರಹಿಸಿವೆ. ಬಿಜೆಪಿಯಿಂದ ತೆರೆಮರೆಯಲ್ಲಿ ನಡೆಸಲ್ಪಡುವ ಈ ಎನ್ಜಿಒ, ಕಳೆದ ಐದು ವರ್ಷಗಳ ಕಾಲ ಆನ್ಲೈನಿನಲ್ಲಿ ಬಿಜೆಪಿ ಪ್ರಪಗಂಡಾಗಳನ್ನು ವ್ಯವಸ್ಥಿತವಾಗಿ ಹರಡುವ ಕೆಲಸ ಮಾಡುತ್ತಿದೆ.
ಇದರ ವಿರುದ್ಧ ಆಯೋಗ ತ್ವರಿತ ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸುವುದೇ ಮೂರ್ಖತನವೇನೋ? ‘ಈ ಸಮಾಜಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣಸಿಂಗ್ ವಿಷಯದಲ್ಲೂ ಆಯೋಗ ಕಾಟಾಚಾರದ ಆಟವಾಡಿದೆ.
ಮೋದಿಯ ‘ಮೈ ಭಿ ಚೌಕಿದಾರ್’ ಕಾರ್ಯಕ್ರಮ ನೇರ ಪ್ರಸಾರ ಮಾಡಿದ ದೂರದರ್ಶನ, ನಿಯಮಗಳನ್ನು ಉಲ್ಲಂಘಿಸಿ ಹಠಾತ್ತನೇ ಹುಟ್ಟಿದ ‘ನಮೋ ಟಿವಿ’- ಇವೆಲ್ಲವಕ್ಕೂ ಆಯೋಗ ಸ್ಪಷ್ಟೀಕರಣ ಕೇಳುವ ಕೆಲಸ ಮಾಡುತ್ತಿದೆಯಷ್ಟೇ. ಮೋದಿಯ ಜೀವನಾಧಾರಿತ ಚಿತ್ರ ಬಿಡುಗಡೆಗೂ ಆಯೋಗದ ಆಕ್ಷೇಪವಿಲ್ಲ.
ಆದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರಿಗೆ ಆಪ್ತರೆನ್ನಲಾದ ಅಲ್ಲಿನ ಮುಖ್ಯ ಕಾರ್ಯದರ್ಶಿಯನ್ನು ಹಳೆಯ ಆದೇಶವೊಂದರ ನೆಪದಲ್ಲಿ ಆಯೋಗ ಸಸ್ಪೆಂಡ್ ಮಾಡಿದೆ.
ಬರುವ ದಿನಗಳಲ್ಲಿ ಆಯೋಗವು ಬಿಜೆಪಿಯ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ಕಠಿಣವಾಗಿ ವರ್ತಿಸಲಾರದು ಎಂಬ ಸಂದೇಶ ಈಗಾಗಲೇ ಬಿಜೆಪಿ ನಾಯಕರಿಗೆ ಮನದಟ್ಟಾಗುತ್ತಿದ್ದು, ಇನ್ನಷ್ಟು ದ್ವೇಷಾಸೂಯೆಯ, ಸೇನೆಯ ಹೆಸರು ದುರ್ಬಳಕೆಯ ಭಾಷಣಗಳು ಕೇಳಿ ಬರಲಿವೆ. ಜನ ಮಾತ್ರ ಇಂಥದಕ್ಕೆಲ್ಲ ಬಲಿಯಾಗಬಾರದು.
ಮೋದಿಯ ಬುಟ್ಟಿಯಲ್ಲಿ ಈಗ ಆಯೋಗವೂ ಸ್ಥಾನ ಪಡೆದುಕೊಂಡಿದೆ!