| ಮಲ್ಲಿ |
ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕ ವೇದಿಕೆಗಳ ಮೂಲಕ ಪದೇ ಪದೇ ಸುಳ್ಳುಗಳನ್ನು ಹೇಳುತ್ತ ಬಂದಿದ್ದು, ಈಗವರು ಆಯ್ದ ಚಾನೆಲ್ಗಳಲ್ಲಿ ಸಂದರ್ಶನ ನೀಡುತ್ತ, ತಮ್ಮ ಸರ್ಕಾರದ ಗೃಹ ಇಲಾಖೆಯ ಅಂಕಿಅಂಶಗಳನ್ನೇ ಮರೆಮಾಚಿ ಸುಳ್ಳು ಹೇಳುತ್ತಾರೆ. ಎದುರಿಗೆ ಪ್ರಶ್ನೆ ಕೇಳಲು ಕೂತ ಭೂಪರು ಗೋಣು ಹಾಕುತ್ತಾರೆ. ಈ ಸುಳ್ಳುಗಳ ಜೊತೆಗೆ ದೇಶಭಕ್ತಿಯ ಕುರಿತಾಗಿ ಪ್ರಧಾನಿ ನಿರರ್ಗಳವಾಗಿ ಬೊಗಳೆ ಬಿಡುತ್ತಾರೆ.
ರಫೆಲ್ ಕುರಿತು ಕೇಳಿದ ಪ್ರಶ್ನೆಗಳಿಗೆ ಚಾನೆಲ್ ವಿರುದ್ಧವೇ ಸಿಟ್ಟಾದ ಪ್ರಧಾನಿ, ಇದನ್ನೇ ನೆಪ ಮಾಡಿಕೊಂಡು ರಫೆಲ್ಗೆ ತಾವೇ ಕ್ಲೀನ್ಚಿಟ್ ಕೊಟ್ಟುಕೊಂಡರು. ಇದು ಕೂಡ ನಾಟಕೀಯವಾಗಿಯೇ ಇತ್ತು. ಮತ್ತು ಪೂರ್ವಯೋಜಿತವಾಗಿತ್ತು.
ನಿನ್ನೆ ಏಪ್ರಿಲ್ 5ರಂದು ಎಬಿಪಿ ನ್ಯೂಸ್ ಚಾನೆಲ್ನಲ್ಲಿ ಈ ಸಂದರ್ಶನ ಪ್ರಸಾರವಾಗಿದ್ದು, ಅವರು ಮಾಡಿರುವ ಸುಳ್ಳು ಕ್ಲೈಮ್ಗಳನ್ನು ಮತ್ತು ವಾಸ್ತವವನ್ನು ನಿಮ್ಮ ಮುಂದಿಡುತ್ತಿದ್ದೇವೆ. 75 ನಿಮಿಷಗಳ ಈ ಸಂದರ್ಶನದಲ್ಲಿ ಸತ್ಯದ ತಲೆ ಮೇಲೆ ಹೊಡೆದಂತಿರುವ ಸುಳ್ಳುಗಳನ್ನು ಇಲ್ಲಿ ಆಯ್ದು ನೀಡಲಾಗಿದೆ.
ಮೋದಿ ಮಿಥ್ಯ: “ಈಗ ಜಮ್ಮು ಕಾಶ್ಮೀರದಲ್ಲಿ ಮೊದಲು ನಡೆಯುತ್ತಿದ್ದ ಘಟನೆಗಳು (ಉಗ್ರರ ದಾಳಿ, ಚಟುಚಟಿಕೆ) ಈಗ ತುಂಬ ಕಡಿಮೆಯಾಗಿವೆ….”
ಸತ್ಯ: ಗೃಹ ಇಲಾಖೆಯ 2017-18ರ ವಾರ್ಷಕ ವರದಿ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ 2013-17ರ ಅವಧಿಯಲ್ಲಿ ಭಯೋತ್ಪಾದನಾ ಹಿಂಸೆಯ ಪ್ರಕರಣಗಳು ಹೆಚ್ಚಿವೆ.
ಭಯೋತ್ಪಾದನಾ ಹಿಂಸೆಯ ಘಟನೆಗಳು:
2013 : 170, 2014: 222, 2015: 208, 2016: 322, 2017: 342,
ರಾಜ್ಯಸಭೆಯಲ್ಲಿ ಸರ್ಕಾರ ನೀಡಿದ ಉತ್ತರದ ಪ್ರಕಾರ, 2018 ಜನವರಿ-ಜೂನ್: 231
ಅಂದರೆ, ಪ್ರಧಾನಿ ಹೇಳಿದಂತೆ ಅಲ್ಲಿ ಹಿಂಸಾಚಾರ ಕಡಿಮೆಯಾಗಿಲ್ಲ, ಬದಲಿಗೆ ಏರುತ್ತ ಸಾಗಿದೆ.
***
ಮೋದಿ ಮಿಥ್ಯ: ‘ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿದೆ…’
ಸತ್ಯ: 2018ರ ಲೇಟೆಸ್ಟ್ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, 2012ರಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದೆ.
ಪ್ರವಾಸಿಗರ ಸಂಖ್ಯೆ:
2012: 1.25 ಕೋಟಿ, 2013: 1.09 ಕೋಟಿ, 2014: 95 ಲಕ್ಷ, 2015: 92 ಲಕ್ಷ,
2016: 84 ಲಕ್ಷ, 2017: 73 ಲಕ್ಷ
ಅಂದರೆ, ಈ ಅಧಿಕೃತ ಅಂಕಿಅಂಶದ ಪ್ರಕಾರ, ಮೋದಿ ಸುಳ್ಳು ಹೇಳ್ತಾ ಇದ್ದಾರೆ.
***
ಮೋದಿ ಮಿಥ್ಯ: ‘ತಮಿಳುನಾಡಿನಲ್ಲಿ ಅಣು ವಿದ್ಯುತ್ ಘಟಕದ ವಿರುದ್ಧ ಪ್ರತಿಭಟನೆ ನಡೆದಾಗ ಕಾಂಗ್ರೆಸ್ ದೇಶದ್ರೋಹ ಅಪಾದನೆಯ ಮೇಲೆ 6 ಸಾವಿರ ಜನರನ್ನು ಜೈಲಿಗೆ ಹಾಕಿತ್ತು…’
ಸತ್ಯ: ‘ಫಸ್ಟ್ ಪೋಸ್ಟ್’ ವರದಿಯ ಪ್ರಕಾರ, ಹಿರಿಯ ಪತ್ರಕರ್ತ ಸಯಾಮ ರಾಜಪ್ಪ ನೇತೃತ್ವದ ತಂಡದ ಅಧ್ಯಯನದ ಪ್ರಕಾರ, 2011ರ ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ತಮಿಳುನಾಡು ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಕೂಡುಕೂಳಂ ಅಣು ಸ್ಥಾವರದ ವಿರುದ್ಧ ಪ್ರತಿಭಟಿಸುತ್ತಿದ್ದ 6 ಸಾವಿರ ಜನರನ್ನು ಜೈಲಿಗೆ ಹಾಕಿದ್ದರು.
ಆ ಸಂದರ್ಭದಲ್ಲಿ ಅಲ್ಲಿ ಆಗ ಎಐಡಿಎಂಕೆ (ಈಗ ಬಿಜೆಪಿಯ ಮಿತ್ರ) ಅಧಿಕಾರದಲ್ಲಿತ್ತು.
ಅಂದರೆ, ಆ ಸಂದರ್ಭದಲ್ಲಿ ಡಿಎಂಕೆ-ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಇಲ್ಲೂ ಪ್ರಧಾನಿ ಹಸಿಸುಳ್ಳನ್ನು ಹೇಳಿದರು.
***
ಮೋದಿ ಮಿಥ್ಯ: 4.25 ಕೋಟಿ ಜನರು ಮುದ್ರಾ ಸಾಲ ಪಡೆದಿದ್ದು, ಅವರು ಉದ್ಯಮ ಆರಂಭಿಸಿ ಎಷ್ಟೋ ಜನರಿಗೆ ಉದ್ಯೋಗ ಕೊಟ್ಟರಬಹುದಲ್ಲ…ಇದು ಉದ್ಯೋಗ ಸೃಷ್ಟಿಯಲ್ಲವೇ? ಸಿಐಐ (ವಾಣಿಜ್ಯೋದ್ಯಮ ಸಂಘ) ಪ್ರಕಾರ 6 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ.
ಸತ್ಯ: ಮೊದಲಿಗೆ ಮುದ್ರಾ ಸಾಲ ಪಡೆಯುವುದನ್ನು ಉದ್ಯೋಗ ಸೃಷ್ಟಿಗೆ ತಳುಕು ಹಾಕುವುದು ಕಷ್ಟವೇ.
ಎರಡನೇದಾಗಿ, ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ವರದಿ ಪ್ರಕಾರ, 2016-18ರ ಅವಧಿಯಲ್ಲಿ ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ ತುಂಬ ಕಡಿಮೆ ಪ್ರಮಾಣದಲ್ಲಿದೆ.
ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ:
ಸೆಪ್ಟೆಂಬರ್ 2016 : 45.98, ಸೆಪ್ಟೆಂಬರ್ 2017: 44.0, ಸೆಪ್ಟೆಂಬರ್ 2018: 42.81
ಇನ್ನೊಂದು ಕಡೆ, ಸರ್ಕಾರ ಉದ್ಯೋಗ/ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಎನ್ಎಸ್ಎಸ್ಒ ಅಧ್ಯಯನದ ವರದಿ ( ಸೋರಿಕೆಯಾಗಿತ್ತು) ಪ್ರಕಾರ, ಈಗ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟಿದ್ದು, ಕಳೆದ 45 ವರ್ಷಗಳಲ್ಲೇ ಇದು ಹೆಚ್ಚಿನ ಪ್ರಮಾಣದ ನಿರುದ್ಯೋಗ ಎಂದು ವಿವರಿಸಿದೆ. ಸಿಎಂಐಇ ವರದಿ ಪ್ರಕಾರ ನಿರುದ್ಯೋಗ ಪ್ರಮಾಣ ಶೇ. 6.7
ಆದರೆ ವಾಣಿಜ್ಯೋದ್ಯಮಿಗಳ ಸಂಘದ ಲೆಕ್ಕ ಹೇಳುವ ಪ್ರಧಾನಿ, ಸರ್ಕಾರದ ಅಧಿಕೃತ ಅಂಕಿಸಂಖ್ಯೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬೀದಿಯಲ್ಲಿ ನಿಂತು ನೋಡಿದರಷ್ಟೇ ನಿರುದ್ಯೋಗದ ಭೀಕರತೆ ಅರ್ಥವಾಗುತ್ತದೆ ಮಿಸ್ಟರ್ ಪಿಎಂ!
ಸ್ಕ್ರಿಪ್ಟೆಡ್ ಸಂದರ್ಶನಗಳಲ್ಲಿ ಇವೆಲ್ಲವೂ ನಡೆಯುತ್ತವೆ. ಆದರೆ ಪ್ರೆಸ್ಮೀಟ್ನಲ್ಲಿ ನಡೆಯುವುದಿಲ್ಲ. ಹೀಗಾಗಿ ಈ ದೇಶದ ಪ್ರಧಾನಿ ಇಲ್ಲಿವರೆಗೂ ಒಂದೂ ಪ್ರೆಸ್ಮೀಟ್ ಮಾಡಿಲ್ಲ.
(ಆಧಾರ: ದಿ ಕ್ವಿಂಟ್ ವೆಬ್ಕೂಫ್)