ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಗಳು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಆದರೆ ಅಧಿಕಾರವಧಿ ಇನ್ನೂ 3 ವರ್ಷಗಳ ಕಾಲ ಇದ್ದರೂ, ಚುನಾವಣೆ ಹೊಸ್ತಿಲಲ್ಲಿ ಅವರು ರಾಜೀನಾಮೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಉದ್ಭವಿಸಿದೆ.
ಮೂಲಗಳ ಪ್ರಕಾರ, ಚುನಾವಣೆ ದಿನಾಂಕಗಳನ್ನು ಮುಂದಿನ ವಾರ ಘೋಷಿಸುವ ಸಾಧ್ಯತೆಯಿದೆ ಮತ್ತು ಗೋಯೆಲ್ ಅವರ ರಾಜೀನಾಮೆ ಇದೀಗ ಈ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ರಾಜೀನಾಮೆ ನೀಡುವಾಗ ಗೋಯೆಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ, ಸರ್ಕಾರವು ಅವರನ್ನು ಹುದ್ದೆ ತೊರೆಯದಂತೆ ಮನವೊಲಿಸಲು ಪ್ರಯತ್ನಿಸಿದೆ, ಆದರೆ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ. ರಾಜೀನಾಮೆಗೆ ಅನಾರೋಗ್ಯವೇ ಕಾರಣ ಎಂಬ ಊಹಾಪೋಹಗಳ ಬೆನ್ನಲ್ಲಿ ಗೋಯೆಲ್ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ, ನೂತನ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಶನಿವಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಉಲ್ಲಖಿಸಲಾಗಿದೆ.
ಡಿಸೆಂಬರ್ 7, 1962ರಂದು ಪಂಜಾಬ್ನ ಪಟಿಯಾಲದಲ್ಲಿ ಜನಿಸಿದ್ದ ಅರುಣ್ ಗೋಯೆಲ್, ಗಣಿತಶಾಸ್ತ್ರದಲ್ಲಿ M.Sc. ಪದವಿಯನ್ನು ಕುಲಪತಿಗಳ ಪದಕದೊಂದಿಗೆ ಪಡೆದಿದ್ದರು. ಅವರು ಇಂಗ್ಲೆಂಡ್ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಚರ್ಚಿಲ್ ಕಾಲೇಜಿನಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಅಮೇರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಎಫ್ ಕೆನಡಿ ಸರ್ಕಾರಿ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಆ ಬಳಿಕ ಪಂಜಾಬ್ ಕೇಡರ್ನ 1985-ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದರು. ಅರುಣ್ ಗೋಯೆಲ್ ಅವರು 37 ವರ್ಷಗಳ ಸೇವೆಯ ನಂತರ ಭಾರತ ಸರ್ಕಾರದ ಕೈಗಾರಿಕೆ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ನವೆಂಬರ್ 2022ರಲ್ಲಿ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಫೆಬ್ರವರಿ 2025ರಲ್ಲಿ ರಾಜೀವ್ ಕುಮಾರ್ ಅವರ ಅಧಿಕಾರದ ಅಂತ್ಯದ ನಂತರ ಗೋಯೆಲ್ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗುವ ಸಾಧ್ಯತೆ ಇತ್ತು. 61 ವರ್ಷ ವಯಸ್ಸಿನ ಅವರ ಅಧಿಕಾರಾವಧಿಯು ಡಿಸೆಂಬರ್ 2027ರವರೆಗೆ ಇತ್ತು. ಫೆಬ್ರವರಿಯಲ್ಲಿ ಅನುಪ್ ಪಾಂಡೆ ನಿವೃತ್ತಿ ಮತ್ತು ಇದೀಗ ಗೋಯೆಲ್ ರಾಜೀನಾಮೆ ನಂತರ, ಮೂವರು ಸದಸ್ಯರ ಚುನಾವಣಾ ಆಯೋಗದ ಸಮಿತಿಯು ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮಾತ್ರ ಹೊಂದಿದೆ.