ಅನರ್ಹ ಶಾಸಕರು ಈಗ ಇರುವುದು ಮೂರೇ ಜನ. ಆದರೆ, ಉಳಿದವರೂ ಅನರ್ಹರಾಗುವ ಸಾಧ್ಯತೆ ಇದ್ದೇ ಇದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದಂತೆ ಅವರು ಈಗ ಅನರ್ಹರಾಗುತ್ತಿರುವುದಷ್ಟೇ ಅಲ್ಲ, ಈ ವಿಧಾನಸಭೆಯ ಅವಧಿ ಮುಗಿಯುವವರೆಗೆ, ಅಂದರೆ 2023ರವರೆಗೆ ಮತ್ತೆ ಚುನಾವಣೆಗೆ ನಿಲ್ಲುವಂತೆಯೂ ಇಲ್ಲ.
ಹೌದು, ಇದಕ್ಕೆ ಅವರಿಗೆ ಕೂಡಲೇ ಇರುವ ದಾರಿಯೆಂದರೆ ಸುಪ್ರೀಂಕೋರ್ಟಿಗೆ ಹೋಗುವುದು. ಆದರೆ ಸುಪ್ರೀಂಕೋರ್ಟು ಏನು ಹೇಳುತ್ತದೆಂದು ಊಹಿಸುವಂತಿಲ್ಲ. ಸ್ಪೀಕರ್ ಮಾತಾಡುತ್ತಿರುವ ಭಾಷೆ ಮತ್ತು ಕರ್ನಾಟಕದ ವಿಧಾನಸಭೆಯ ನಡಾವಳಿಗಳು ಪಕ್ಷಾಂತರ ನಿಷೇಧಕ್ಕೆ ಪ್ರೋತ್ಸಾಹ ಕೊಡುವುದು ನಾಚಿಕೆಗೇಡು ಎಂಬ ಸಂದೇಶವನ್ನು ಸಾರ್ವಜನಿಕವಾಗಿ ನೀಡಿಯಾಗಿದೆ. ಹಾಗಾಗಿಯೇ ವಾಚಾಮಗೋಚರವಾಗಿ ಆಡಳಿತ ಪಕ್ಷಗಳ ಸದಸ್ಯರು ಬಯ್ಯುತ್ತಿದ್ದರೂ, ಬಿಜೆಪಿಯ ಸದಸ್ಯರು ಬಾಯೇ ತೆರೆಯಲಿಲ್ಲ. ಗಲಾಟೆ ಆದರೆ ಅನಗತ್ಯವಾಗಿ ಸದನದ ಕಲಾಪ ಎಳೆಯಬಹುದು ಅಥವಾ ಗಲಾಟೆ ನೆಪದಲ್ಲಿ ಕೆಲವರನ್ನು ಅಮಾನತುಗೊಳಿಸಿದರೆ ಕಷ್ಟ ಎಂಬುದಷ್ಟೇ ಅದಕ್ಕೆ ಕಾರಣವಲ್ಲ.
ತಮ್ಮ ಆಪರೇಷನ್ ಕಮಲ ಎಂಬ ಅಸಹ್ಯವನ್ನು ಸಮರ್ಥಿಸಿಕೊಳ್ಳುವುದು ಬಿಜೆಪಿಗರಿಗೆ ಸುಲಭವಾಗಿರಲಿಲ್ಲ. ಹೀಗಿರುವಾಗ ಸುಪ್ರೀಂಕೋರ್ಟು ಅವರ ಸಮರ್ಥನೆಗೆ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು. ಹಾಗಾಗಿ ಅನರ್ಹರಾಗಿರುವ ಮತ್ತು ಮುಂದೆ ಆಗಬಲ್ಲವರಿಗೆ ಇರುವುದು ಒಂದೇ ದಾರಿ. ಅದು ವಿಧಾನಸಭೆ ವಿಸರ್ಜನೆ ಆದರೆ ಮತ್ತೆ ಗೆದ್ದು ಬರುವುದು.
ಇದಕ್ಕೆ ವಿಸರ್ಜನೆಯೇ ಏಕಾಗಬೇಕು? ಏಕೆಂದರೆ ಅನರ್ಹತೆಗೊಂಡಿರುವುದು ಇಡೀ ಅವಧಿಗೆ. ಅಂದರೆ, ಒಂದು ವೇಳೆ ಮತ್ತೆ ಉಪಚುನಾವಣೆ ನಡೆದರೂ ಸ್ಪರ್ಧಿಸಬಾರದು ಎಂದಾಗಿಬಿಟ್ಟರೆ, ಬಿಜೆಪಿಯು ಅದೇ ಕ್ಷೇತ್ರದ ಬಿಜೆಪಿಯ ಸೋತ ಅಭ್ಯರ್ಥಿಗೆ ಟಿಕೆಟ್ ಕೊಡಲು ಮುಂದಾಗಬಹುದು. ಹಾಗೇನಾದರೂ ಆದರೆ, ಸದರಿ ಅನರ್ಹ ಶಾಸಕರಿಗೆ ಅದು ರಾಜಕೀಯ ಸಮಾಪ್ತಿಯಾಗಿಬಿಡುತ್ತದೆ.
ಆದರೆ, ಈಗಲೇ 76 ವರ್ಷವಾಗಿರುವುದರಿಂದ ಸಿಎಂ ಕುರ್ಚಿಯ ಕನಸಿಗೆ ಕಲ್ಲು ಹಾಕುತ್ತಿರುವ ಹೈಕಮ್ಯಾಂಡ್ ಮತ್ತೆ ಬಹುಮತ ಸಿಕ್ಕರೂ ತನ್ನನ್ನು ಮುಖ್ಯಮಂತ್ರಿ ಮಾಡದೇ ಹೋಗಬಹುದೆನ್ನುವ ಆತಂಕ ಯಡಿಯೂರಪ್ಪನವರದ್ದು. ಹೇಗೂ ಕೇಂದ್ರದಲ್ಲಿ ಅಧಿಕಾರ ಇರುವುದರಿಂದ ರಾಜ್ಯಪಾಲರಾಗಿ ಎಂದು ಹೇಳುವ ಸಾಧ್ಯತೆ ಇದೆ. ರಾಜ್ಯಪಾಲನಾಗಿ ಕೂರುವ ವ್ಯಕ್ತಿತ್ವ, ಮನಸ್ಥಿತಿ ಯಡಿಯೂರಪ್ಪನವರದ್ದಲ್ಲ. ಹಾಗಾಗಿ ವಿಧಾನಸಭೆ ವಿಸರ್ಜನೆಗೆ ಅವರು ಒಪ್ಪಲಿಕ್ಕಿಲ್ಲ.
ಒಟ್ಟಿನಲ್ಲಿ ಪಕ್ಕಾ ತ್ರಿಶಂಕು ಸ್ಥಿತಿ ಅನರ್ಹ ಶಾಸಕರಿಗೆ ಏರ್ಪಟ್ಟಿದೆ. ಇದು ಎಷ್ಟು ಬೇಗ ನಿವಾರಣೆಯಾಗಬಹುದು ಎಂಬುದನ್ನು ಯಾರೂ ಹೇಳುವ ಸ್ಥಿತಿಯಲ್ಲಿಲ್ಲ. ಈ ತ್ರಿಶಂಕು ಸ್ಥಿತಿ ಕೇವಲ ಅವರದ್ದಾಗಿರದೇ ರಾಜ್ಯ ಸರ್ಕಾರದ್ದು ಮತ್ತು ರಾಜ್ಯದ ಜನತೆಯದ್ದೂ ಆಗಿದೆ.
ಇದಕ್ಕಿಂತ ನೀಚ ರಾಜಕಾರಣ ಬೇರೊಂದಿಲ್ಲ