ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಈ ಬಗ್ಗೆ ಕಾಂಗ್ರೆಸ್ ತಾನು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಯುಸಿಸಿ ಸಂಹಿತ ಜಾರಿಗೊಳಿಸುವುದರ ಅಗತ್ಯವಿಲ್ಲ ಇದು ಅನಪೇಕ್ಷಿತವಾಗಿದೆ ಮತ್ತು ಕರಡು ಮಸೂದೆ ಅಥವಾ ಈ ವಿಷಯದ ಕುರಿತು ವರದಿ ಬಂದರೆ ಮತ್ತಷ್ಟು ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಅದರ ಸಂಸದೀಯ ಕಾರ್ಯತಂತ್ರದ ಗುಂಪಿನ ಸಭೆಯನ್ನು ನಡೆಸಿತು. ಸಭೆಯಲ್ಲಿ ಅವರು ಜುಲೈ 20 ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿವಿಧ ವಿಷಯಗಳನ್ನು ಚರ್ಚಿಸಿದರು.
ಮಣಿಪುರ ಹಿಂಸಾಚಾರ, ಕುಸ್ತಿಪಟುಗಳ ಪ್ರತಿಭಟನೆ, ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವಿವಿಧ ರಾಜ್ಯಪಾಲರು ನಡೆದುಕೊಳ್ಳುತ್ತಿರುವ ರೀತಿ ವಿಷಯಗಳ ಬಗ್ಗೆ ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಿದ್ದತೆ ನಡೆಸಿದೆ.
ಪಕ್ಷದ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ”ಯುಸಿಸಿ ಬಗ್ಗೆ ಪಕ್ಷವು ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಯುಸಿಸಿ ಸಂಹಿತ ಜಾರಿಗೊಳಿಸುವುದರ ಅಗತ್ಯವಿಲ್ಲ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ.
”ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಆದರೆ, ಧ್ರುವೀಕರಣ ಮತ್ತು ಜ್ವಲಂತ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತನ್ನ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಇದರ ಭಾಗವಾಗಿಯೇ ಯುಸಿಸಿ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ” ಎಂದು ಕಾಂಗ್ರೆಸ್ ಇತ್ತೀಚಿಗೆ ಟೀಕಿಸಿತ್ತು.
”ರಾಷ್ಟ್ರೀಯ ಮಹತ್ವ ಇರುವಂತಹ ಅನೇಕ ವಿಷಯಗಳ ಕುರಿತು ಕಾನೂನು ಆಯೋಗ ಅದ್ಭುತ ಕಾರ್ಯ ಮಾಡಿದೆ. ಆದರೆ, ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗಳಿಗಿಂತ ರಾಷ್ಟ್ರದ ಹಿತಾಸಕ್ತಿ ಭಿನ್ನ ಎಂಬುದನ್ನು ಆಯೋಗ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
”ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದರ ಅಗತ್ಯವಿಲ್ಲ ಹಾಗೂ ಅಪೇಕ್ಷಣೀಯವೂ ಅಲ್ಲ ಎಂದು 21ನೇ ಕಾನೂನು ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಆದರೆ, ತನ್ನ ಕಾರ್ಯಸೂಚಿಯನ್ನು ಮುಂದುವರಿಸುವ ಪ್ರಯತ್ನದ ಭಾಗವಾಗಿ ಮೋದಿ ನೇತೃತ್ವದ ಸರ್ಕಾರ ಯುಸಿಸಿ ಜಾರಿಗೆ ಯತ್ನಿಸುತ್ತಿದೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಭಾರತದ ಕಲ್ಪನೆಗೆ ವಿರುದ್ಧವಾಗಿದೆ: ಬಿಜೆಪಿ ಮಿತ್ರ ಪಕ್ಷದಿಂದಲೂ ವಿರೋಧ