ನಾನು ಕರ್ನಾಟಕ ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದವರೆ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಭಾನುವಾರ ನಡೆದ ಮುಸ್ಲಿಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಶತ್ರುಗಳು ಕಾಂಗ್ರೆಸ್ನವರು ಇರಬಹುದು. ಅವರ ರಾಜಕೀಯ ಧರ್ಮ ಈ ಹಿಂದೆ ನನಗೆ ತೊಂದರೆ ಕೊಟ್ಟಿರಬಹುದು. ಆದರೆ ಇವತ್ತು ನಮ್ಮವರೆ ನನಗೆ ಕಿರುಕುಳ ಕೊಡುವ ಪರಿಸ್ಥಿತಿಯಲ್ಲಿದ್ದಾರೆ” ಎಂದಿದ್ದಾರೆ.
ಹಾಗಾಗಿ ಬರುವಂತಹ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬುದನ್ನು ಶೀಘ್ರವೇ ಘೋಷಿಸುತ್ತೇನೆ ಎಂದಿದ್ದಾರೆ. ನನ್ನ ಜೊತೆಯಲ್ಲಿ ಮುಸ್ಲಿಂ ಬಾಂಧವರೂ ಕೂಡ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನವೆಂಬರ್ 06ರ ನಂತರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಳ್ಳಾರಿ ಜಿಲ್ಲೆಯಿಂದ ಹೊರಹೋಗುತ್ತಿದ್ದೇನೆ. ಹಾಗಂತ ಬೆಂಗಳೂರಿನಲ್ಲಿ ಕೂರುವುದಿಲ್ಲ. ಜನರ ನಡುವೆಯೇ ಇರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿಯವರು ಈ ಹಿಂದೆ ಯಾವುದೋ ಒಂದು ಮಾತು ಆಡಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಆ ಮಾತು ಆಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಅವರು ಆ ಮಾತಾಡಲು ಯಾರು ಪ್ರಚೋದನೆ ನೀಡಿದ್ದರು ಎಂಬುದನ್ನು ಶೀಘ್ರದಲ್ಲಿಯೇ ಬಹಿರಂಗ ಪಡಿಸುತ್ತೇನೆ ಎಂದು ಸಹ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ 2020ರ ಜನವರಿ 03 ರಂದು ಸೋಮಶೇಖರ ರೆಡ್ಡಿ ಕೋಮು ಪ್ರಚೋದಕ ಭಾಷಣ ಮಾಡಿದ್ದರು. “ನಿಮಗೆ ಪಂಕ್ಚರ್ ಹಾಕುವವರಿಗೆ ಏನೂ ಗೊತ್ತಿಲ್ಲ. ಯಾರದೋ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದೀರಿ. ನಾವು ಒಂದು ಕೂಗು ಕೊಟ್ರೆ 95% ಮಂದಿ ಬರ್ತಾರೆ. ನಾವು ಉಫ್ ಅಂತ ಊದಿದರೆ ನೀವು ಹಾರಿಹೋಗ್ತೀರಿ” ಎಂದಿದ್ದರು.
“ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ಥರ ಆಗಿ ಮಚ್ಚು ಹಿಡಿದುಕೊಂಡರೆ, ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ. ಸಿಎಎ ಮತ್ತು ಎನ್ಆರ್ಸಿ ನಮ್ಮ ಆಕ್ಟ್ಗಳು. ಮೋದಿ ಸಾಹೇಬರು, ಅಮಿತ್ ಶಾ ಮಾಡಿರುವ ತಂದಿರುವ ಆಕ್ಟ್ಗಳು. ಇದಕ್ಕೆ ಯಾರಾದರೂ ವಿರುದ್ಧವಾಗಿ ನಡೆದುಕೊಂಡರೆ ಚೆನ್ನಾಗಿರೋಲ್ಲ” ಎಂದು ಭಾಷಣ ಮಾಡಿದ್ದರು.
ಸದ್ಯ ಜನಾರ್ದನ ರೆಡ್ಡಿ ಅಧಿಕೃತವಾಗಿ ವಾಪಸ್ ಬಿಜೆಪಿ ಪಕ್ಷ ಸೇರುವ ಯೋಚನೆಯಲ್ಲಿದ್ದಾರೆ. ಆದರೆ ಅವರ ಮೇಲಿನ ಭ್ರಷ್ಟಾಚಾರದ ಕಾರಣಕ್ಕೆ ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಿಲ್ಲ. ಹಾಗಾಗಿ ಬಿಜೆಪಿ ಮತ್ತು ರೆಡ್ಡಿ ನಡುವೆ ಮನಸ್ತಾಪ ಶುರುವಾಗಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಕಾದು ನೋಡಬೇಕಿದೆ.
Edu ondu hosa nataka wow