ಚಿಕ್ಕಮಗಳೂರು: ದಲಿತ ಮಹಿಳಾ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಇಂಥದ್ದೇ ಮನಕಲಕುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಕೆಲಸಕ್ಕೆ ಬಾರಲಿಲ್ಲವೆಂದು ಸಿಟ್ಟಾದ ಎಸ್ಟೇಟ್ ಮಾಲೀಕನೊಬ್ಬ ದಲಿತ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವುದಲ್ಲದೇ, ಕೋವಿಯಿಂದ ಶೂಟ್ ಮಾಡಿ ಕೊಲ್ಲುವುದಾಗಿಯೂ ಬೆದರಿಕೆ ಹಾಕಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಹಿರಿಕೊಳ್ಳಲೆ ಗ್ರಾಮದಲ್ಲಿ ನಡೆದಿದೆ.
ದಲಿತ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಎಸ್ಟೇಟ್ ಮಾಲೀಕ ಕಾಂತರಾಜು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಲ್ಲಪ್ಪ ಅವರಿಗೆ ಗಾಯಗಳಾಗಿವೆ. ಕಿವಿ ಹಾಗೂ ಎದೆಯ ಭಾಗಕ್ಕೆ ಥಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
“ಯಲ್ಲಪ್ಪ ಸುಮಾರು 10 ವರ್ಷಗಳಿಂದ ಕಾಂತರಾಜು ಅವರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂತರಾಜು ಅವರು 4 ದಿನ ಕೆಲಸಕ್ಕೆ ಬಾರದ ಕಾರಣ ಕಾಂತರಾಜು ಹಲ್ಲೆ ನಡೆಸಿದ್ದಾರೆ” ಎಂದು ದೂರಲಾಗಿದೆ.
ಕಾಂತರಾಜು ಅವರ ಪತ್ನಿ ಹೇಮಲತಾ ಮಾತನಾಡಿ, “ನನ್ನ ಗಂಡ ಕಳೆದ ಹತ್ತು ವರ್ಷಗಳಿಂದ ಕಾಂತರಾಜು ಅವರ ಮನೆಯಲ್ಲಿ ಜೀತ ಮಾಡುತ್ತಿದ್ದಾರೆ. ತೋಟದಲ್ಲಿ ಹಲ್ಲೆ ನಡೆಸಲಾಗಿದೆ. ನಮಗೆ ನ್ಯಾಯ ಬೇಕಿದೆ” ಎಂದು ಮನವಿ ಮಾಡಿದ್ದಾರೆ.
“ಕಾಂತರಾಜು ಜೀವ ಬೆದರಿಕೆ ಹಾಕಿದ್ದಾರೆ. ಎರಡು ಲಕ್ಷ ಖರ್ಚಾದರೂ ಪರವಾಗಿಲ್ಲ ಹೊಡೆದು ಸಾಯಿಸುತ್ತೇನೆ ಎಂದು ನನ್ನ ಗಂಡನಿಗೆ ಹೇಳಿದ್ದಾರೆ” ಎಂದು ಹೇಮಲತಾ ಕಣ್ಣೀರು ಹಾಕಿದ್ದಾರೆ.
“ನನ್ನ ಗಂಡನ ಜೀವಕ್ಕೆ ಏನಾದರೂ ಹೆಚ್ಚು ಕಮ್ಮಿಯಾದರೆ ಕಾಂತರಾಜು ಅವರೇ ಕಾರಣ. ಕೋವಿ ತಂದು ಶೂಟ್ ಮಾಡುವುದಾಗಿ ಹೇಳಿದ್ದಾರೆ. ಇದೇ ಮೊದಲಸಲವೇನೂ ಅಲ್ಲ. ಸಾಕಷ್ಟು ಬಾರಿ ಹಲ್ಲೆ ಮಾಡಿದ್ದಾರೆ. ನನ್ನ ಗಂಡ ನನ್ನ ಬಳಿ ಇದೆಲ್ಲವನ್ನೂ ಹೇಳಿಕೊಳ್ಳುತ್ತಿರಲಿಲ್ಲ” ಎಂದು ನೊಂದು ನುಡಿದಿದ್ದಾರೆ.
“ಪೋನ್ ಮಾಡಿದಾಗಲೆಲ್ಲ ಎಸ್ಟೇಟ್ ಮಾಲೀಕ ಕಾಂತರಾಜು ಕೆಟ್ಟ ಮಾತುಗಳಲ್ಲೇ ಬೈಯುತ್ತಾರೆ. ಪೋನ್ ರಿಸೀವ್ ಮಾಡದಿದ್ದರೂ, ಮಾಡಿದರೂ ಬೈಯುತ್ತಾರೆ. ಕೆಲಸಕ್ಕೆ ಹೋದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ನನ್ನ ಗಂಡ ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಎದೆ, ಕೆನ್ನೆಗೆ ಹೊಡೆದಿದ್ದಾರೆ. ಕಿವಿಯಿಂದ ರಕ್ತ ಬಂದಿದೆ” ಎಂದು ವಿವರಿಸಿದ್ದಾರೆ.
ದಲಿತ ಮುಖಂಡರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾನೂನಿನ ವೈಫಲ್ಯ ಎದ್ದು ಕಾಣುತ್ತಿದೆ. ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಎಸ್ಸಿ, ಎಸ್ಟಿ, ಓಬಿಸಿ, ಮುಸ್ಲಿಮರು ಬದುಕದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದಿಸಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರು ತಾಲ್ಲೂಕಿನಲ್ಲಿ ಇಂಥದ್ದೇ ಹೇಯಕೃತ್ಯ ನಡೆದಿತ್ತು. ದಲಿತ ಸಂಘಟನೆಗಳು ಬಾಳೇಹೊನ್ನೂರು ಚಲೋ ಹೋರಾಟವನ್ನೂ ಹಮ್ಮಿಕೊಂಡಿದ್ದರು.
ಚಿಕ್ಕಮಗಳೂರು ತಾಲ್ಲೂಕು ಠಾಣೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಹುಣಸೆಹಳ್ಳಿಪುರದಲ್ಲಿ ಘಟನೆ ನಡೆದಿತ್ತು. ಎಸ್ಟೇಟ್ ಮಾಲೀಕನಾದ ಜಗದೀಶಗೌಡ ಹಾಗೂ ತಿಲಕ್ ಎಂಬವರು ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದರು. ಬಾಳೇಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿರಿ: ರಾಮನಗರ: ದಲಿತ ಬಾಲಕಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಪೇದೆ ಅರೆಸ್ಟ್
ಆಲ್ದೂರಿನ ಗಾಳಿಗಂಡಿಯಿಂದ ಬಂದು ಇಲ್ಲಿನ ಲೈನ್ಮನೆಯಲ್ಲಿ ವಾಸವಿದ್ದು ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕ ಮಹಿಳೆ ಅರ್ಪಿತಾ ಪೊಲೀಸರಿಗೆ ದೂರು ನೀಡಿದ್ದರು.
“ಸುಮಾರು 03 ತಿಂಗಳುಗಳಿಂದ ಹುಣಸೆಹಳ್ಳಿಪುರದಲ್ಲಿ ಜಗದೀಶಗೌಡ ಅವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ಮನೆಯಲ್ಲಿ ವಾಸವಾಗಿದ್ದೇವೆ. ಸುಮಾರು 15 ದಿನಗಳ ಹಿಂದೆ ನಮ್ಮ ಗಂಡನ ಸಂಬಂಧಿಯಾದ ಸತೀಶ, ಮಂಜು ಅವರಿಗೂ ಹಾಗೂ ಅಲ್ಲಿಯೇ ಪಕ್ಕದ ಮನೆಯವರಿಗೂ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಎಸ್ಟೇಟ್ ಮಾಲೀಕರಾದ ಜಗದೀಶಗೌಡರು ಮಂಜು ಅವರಿಗೆ ಬೈಯ್ದು ಹೊಡೆದಿದ್ದರು. ಹೀಗಾಗಿ ಮಂಜು ಮತ್ತು ನಮ್ಮ ಕಡೆಯವರು ಬೇರೆಡೆ ಹೋಗಲು ನಿರ್ಧರಿಸಿದೆವು. ನಾವು ಇನ್ನು ಮುಂದೆ ಇಲ್ಲಿ ಕೆಲಸ ಮಾಡುವುದಿಲ್ಲ, ಬೇರೆ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದೆವು. ಆನಂತರದಲ್ಲಿ ಜಗದೀಶ ಸಿಟ್ಟಾಗಿದ್ದರು. ನಮ್ಮ ಮೇಲೆ ಹಲ್ಲೆ ನಡೆಸಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಹಲ್ಲೆಗೊಳಗಾದ ಅರ್ಪಿತಾ ಅವರಿಗೆ ಗರ್ಭಪಾತವೂ ಆಗಿತ್ತು.