ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಆಯೋಗಕ್ಕೆ ‘ಎಲೆಕ್ಟೊರಲ್ ಬಾಂಡಿನ’ ಲೆಕ್ಕ ಸಲ್ಲಿಸಲು ಮೂರು ತಿಂಗಳು ಸಮಾಯವಾಕಾಶ ಕೇಳಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಜನಪ್ರಿಯ ನಟ ಕಿಶೋರ್, ‘ಚುನಾವಣಾ ಬಾಂಡ್ ಹಗರಣದ ಕಿಂಗ್ ಪಿನ್ ಯಾರದೆಂದು ಚಿಕ್ಕ ಮಕ್ಕಳೂ ಹೇಳಬಲ್ಲರು’ ಎಂದು ಹೇಳಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಎಸ್ಬಿಐ ನಡೆಯನ್ನು ‘ನಾಚಿಕೆಗೇಡು’ ಎಂದು ಕರೆದಿದ್ದಾರೆ. ;ನಂಬಿದರೆ ನಂಬಿ ಬಿಟ್ಟರೆ ಬಿಡಿ.. ಭಿಕ್ಷುಕರೂ ಡಿಜಿಟಲ್ ಬ್ಯಾಂಕಿಂಗ್ ಮಾಡುವ ಭಾರತದಲ್ಲಿ, ದೇಶದ ಅತಿ ದೊಡ್ಡಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಅಸಂವಿಧಾನಿಕ ಹಫ್ತಾ ವಸೂಲಿ ಹಗರಣ ಎಲೆಕ್ಟೊರಲ್ ಬಾಂಡಿನ ಲೆಕ್ಕವನ್ನು ಕೈಯಲ್ಲಿ ಬರೆದಿಟ್ಟಿದೆಯಂತೆ.. ಎಷ್ಟು ಹಾಸ್ಯಾಸ್ಪದ.. ಹಾಗಾಗಿ 22 ಸಾವಿರ ಎಂಟ್ರಿ ವಿವರ ಕೊಡೋಕೆ ಮೂರು ತಿಂಗಳು ಬೇಕಂತೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ
‘ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ.. ಇವರೆಲ್ಲ ಸೇರಿ ಯಾರ ಕಿವಿಯ ಮೇಲೆ ಹೂವಿಡಲು ಪ್ರಯತ್ನಿಸುತ್ತಿದ್ದಾರೆ? ಚಿಕ್ಕ ಮಕ್ಕಳೂ ಹೇಳಬಲ್ಲರು ಇದರ ಹಿಂದಿನ ಕೈವಾಡ ಯಾರದೆಂದು.. ಬರೀ ಸುಳ್ಳೇ ಬೊಗಳಿಯೂ ಧರ್ಮಾಂಧತೆಯ ಮಂಕುಬೂದಿಯೆರಚಿ ಯಾಮಾರಿಸುವ ಕಲೆ ಕರಗತಗೊಳಿಸಿರೊಂಡ ಹಗರಣದ ಕಿಂಗ್ ಪಿನ್, ಅತೀ ಭ್ರಷ್ಟ ಖೈದಿ ನಂ.56 ಇಲ್ಲೂ ತಪ್ಪಿಸಿಕೊಂಡರೆ, ಈ ಮೂರ್ಖಾತಿರೇಕಕ್ಕೆ ದೇಶವನ್ನು, ಪ್ರಜಾಪ್ರಭುತ್ವವನ್ನು ಬಲಿಕೊಟ್ಟು ಸುಮ್ಮನೇ ಒಮ್ಮೆ ಕಣ್ಣುಮುಚ್ಚಿ ಕೂಗಿಬಿಡಿ… ‘ಅವನಿ’ದ್ದರೆ ಇದೂ ಸಾಧ್ಯವೆಂದು.. (ಸಬ್ ಕುಚ್ ಮುಮ್ಕಿನ್ ಹೈ)’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಎಸ್ಬಿಐ ನಡೆಗೆ ಹಲವರ ವಿರೋಧ:
ಎಸ್ಬಿಐ ನಡೆಯ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದ್ದು, ಇದು ಸಂಪೂರ್ಣ ದುರುದ್ದೇಶಪೂರಿತವಾಗಿದೆ. ಎಸ್ಬಿಐ ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕಿದ್ದ ಒಂದು ದಿನ ಮುಂಚಿತವಾಗಿ ಈ ಅರ್ಜಿಯನ್ನು ಸಲ್ಲಿಸಿದೆ. ಮೂರು ದಿನಗಳ ಕಾಲ ಅವರು ಏನೂ ಮಾಡಲಿಲ್ಲ, ಮತ್ತು ಈಗ ಅವರು ಚುನಾವಣೆ ಕಳೆದ ಬಳಿಕ ಅಂದರೆ ಜೂನ್ 30ರವರೆಗೆ ವಿಸ್ತರಣೆಗೆ ಕೋರಿರುವುದು ಏಕೆ? ಏಕೆಂದರೆ ಸರ್ಕಾರ ಅವರನ್ನು ಈ ಅರ್ಜಿಯನ್ನು ಸಲ್ಲಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಎಸ್ಬಿಐಯ ಅರ್ಜಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯವರು ದೇಣಿಗೆ ವ್ಯವಹಾರವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣಾ ಬಾಂಡ್ಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ದೇಶವಾಸಿಗಳ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿರುವಾಗ, ಎಸ್ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಸಾರ್ವಜನಿಕಗೊಳಿಸಬಾರದು ಎಂದು ಏಕೆ ಬಯಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ರೈತರ ನೂರಾರು ಸಾಮಾಜಿಕ ಮಾದ್ಯಮ ಖಾತೆಗಳಿಗೆ ನಿರ್ಬಂಧ: ದೆಹಲಿ ಚಲೋ ಪ್ರತಿಭಟನೆಗೆ ಬೆದರಿದ ಕೇಂದ್ರ?