ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯದಲ್ಲಿ ಆಪರೇಷನ್ ಹಸ್ತದ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಆಪರೇಶನ್ ಹಸ್ತದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ”ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಸ್ವ ಇಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲಾ. ಆಪರೇಷನ್ ಹಸ್ತ ಎನ್ನುವ ಅವಶ್ಯಕತೆ ಇಲ್ಲಾ” ಎಂದು ಹೇಳಿದ್ದಾರೆ.
ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ”ಮುನೇನಕೊಪ್ಪ ಅವರು ಸುದ್ದಿ ಗೋಷ್ಠಿ ಕರೆದದ್ದು ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ನಾನು ಏನು ಹೇಳೋಕೆ ಬರಲ್ಲ” ಎಂದಿದ್ದಾರೆ.
”ಸುದ್ಧಿಗೋಷ್ಟಿ ಯಾಕೆ ಕರೆದಿದ್ದಾರೆ ಅಂತ ಅವರೇ ಹೇಳಬೇಕು. ಇನ್ನೂ ಹಲವಾರು ನಾಯಕರು ಬಿಜೆಪಿಯಿಂದ ನೊಂದು ಕಾಂಗ್ರೆಸ್ಗೆ ಬರುತ್ತಿದ್ದಾರೆ. ಬಿಜೆಪಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ನಾಯಕನಿಲ್ಲದೆ ಸೊರಗುತ್ತಿದೆ. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ನೇಮಕ ಮಾಡಲಾಗುತ್ತಿಲ್ಲ ಅವರಿಗೆ ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ” ಎಂದು ಶೆಟ್ಟರ್ ಟೀಕೆ ಮಾಡಿದ್ದಾರೆ.
”ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ. ಕೇಂದ್ರ ಬಿಜೆಪಿಗೆ ರಾಜ್ಯದ ನಾಯಕರ ಮೇಲೆ ನಂಬಿಕೆ ಇಲ್ಲದಾಗಿದೆ. ಹಾಗಾಗಿಯೇ ಮೋದಿಯವರನ್ನು ಬರಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಿರಲಿಲ್ಲ. ಬಿಜೆಪಿ ರಾಜ್ಯ ನಾಯಕರಿಗೆ ಬೀದಿಗೆ ಬೀಳುವಂತ ಪರಿಸ್ಥಿತಿ ಬಂದಿದೆ. ಈಗಿನ ಬಿಜೆಪಿ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗುತ್ತಿದೆ” ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿನ ಕೋವಿಡ್ ಅಕ್ರಮಗಳ ತನಿಖೆಗೆ ಆಯೋಗ ರಚಿಸಿದ ರಾಜ್ಯ ಸರಕಾರ