ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ, ಜಾರಿ ನಿರ್ದೇಶನಾಲಯ (ಇಡಿ) ತಂಡ ಗುರುವಾರ ಸಂಜೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದ್ದು, ಪರಿಶೀಲನೆಯಲ್ಲಿ ತೊಡಗಿದೆ.
ಪ್ರಕರಣ ಸಂಬಂಧ ಸಮನ್ಸ್ ನೀಡಲು ಇಡಿ ತಂಡ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದೆ ಎಂದು ಇಡಿ ಮೂಲದ ಅಧಿಕಾರಿಗಳು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇನ್ನೂ ಕೆಲ ವರದಿಗಳು ಕೇಜ್ರಿವಾಲ್ ನಿವಾಸದಲ್ಲಿ ಪರಿಶೀಲನೆಗೆ ಇಡಿ ಅಧಿಕಾರಿಗಳು ಸರ್ಚ್ ವಾರೆಂಟ್ ಜೊತೆಗೆ ಬಂದಿದ್ದಾರೆ. ಕೇಜ್ರಿವಾಲ್ ಅವರ ಬಂಧನವಾಗುವ ಸಾಧ್ಯತೆ ಇದೆ ಎಂದಿದೆ.
Enforcement Directorate officials are conducting a search operation at Delhi CM Arvind Kejriwal's residence: Sources
— ANI (@ANI) March 21, 2024
ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇಡಿ ನೀಡಿದ್ದ 8 ಸಮನ್ಸ್ಗಳನ್ನು ಕೇಜ್ರಿವಾಲ್ ತಿರಸ್ಕರಿಸಿದ್ದರು. ನನ್ನನ್ನು ವಿಚಾರಣೆಗೆ ಕರೆದು ಬಂಧಿಸಲು ಇಡಿ ಸಂಚು ರೂಪಿಸಿದೆ. ಚುನಾವಣೆಗೆ ಸಮೀಪಿಸುವಾಗ ಇಡಿ ಮೂಲಕ ಬಂಧಿಸಿಡುವುದು ಕೇಂದ್ರದ ಬಿಜೆಪಿ ಸರ್ಕಾರದ ಉದ್ದೇಶ ಎಂದು ಅವರು ಆರೋಪಿಸಿದ್ದರು.
ಜಾರಿ ನಿರ್ದೇಶನಾಲಯದ ಸಮನ್ಸ್ಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ಬಲವಂತದ ಕ್ರಮದಿಂದ ಯಾವುದೇ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಇಂದು ನಿರಾಕರಿಸಿತ್ತು.
“ನಾವು ಎರಡೂ ಕಡೆಯ ವಾದ ಆಲಿಸಿದ್ದೇವೆ; ಈ ಹಂತದಲ್ಲಿ ರಕ್ಷಣೆ ನೀಡಲು ನಾವು ಒಲವು ತೋರುತ್ತಿಲ್ಲ. ಪ್ರತಿವಾದಿಯು ಉತ್ತರವನ್ನು ಸಲ್ಲಿಸಲು ಸ್ವತಂತ್ರರು” ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠ ಹೇಳಿತ್ತು.
ಇದನ್ನೂ ಓದಿ : ಇಡಿ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದ ನ್ಯಾಯಾಲಯ; ಅರವಿಂದ್ ಕೇಜ್ರಿವಾಲ್ಗೆ ಹಿನ್ನಡೆ