ಜಗತ್ತಿನಲ್ಲಿ ವಿಸ್ತರಣಾವಾದಿಗಳ ಕಾಲ ಮುಗಿದಿದೆ. ಹೀಗಾಗಿ ವಿಸ್ತರಣಾವಾದಿಗಳು ತಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳಬೇಕು ಇಲ್ಲವೇ ಸರ್ವನಾಶವಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾ ಜೊತೆಗೆ ಗಡಿ ಹಂಚಿಕೊಂಡಿರುವ ಲಡಾಖಿನ ಎತ್ತರದ ಬೆಟ್ಟ ಪ್ರದೇಶದಲ್ಲಿ ಹೇಳಿದ್ದಾರೆ.
ಇತ್ತಿಚೆಗೆ ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಭಾರತದ 20 ಸೈನಿಕರು ಸಾವಿಗೀಡಾದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಡಿಯಲ್ಲಿ ಯುದ್ಧದ ಭೀತಿ ಉಂಟಾಗಿದ್ದು, ಇಂದು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಲಡಾಖ್ ಗೆ ಭೇಟಿ ನೀಡಿದ್ದಾರೆ.
ಈ ವೇಳೆ ಸೈನಿಕರನ್ನು ಉದ್ದೇಶಿಸಿ 26 ನಿಮಿಷಗಳ ಭಾಷಣ ಮಾಡಿರುವ ನರೇಂದ್ರ ಮೋದಿ, “ವಿಸ್ತರಣೆಯ ಯುಗ ಮುಗಿದಿದೆ. ಇದು ಪ್ರಗತಿಯ ಯುಗ. ಪ್ರಗತಿ ಸಾಧಿಸಿದರೆ ಮಾತ್ರ ಎಲ್ಲಾ ದೇಗಳಿಗೂ ಭವಿಷ್ಯ. ವಿಸ್ತರಣೆಯ ಯುಗದಲ್ಲಿ ಮಾನವೀಯತೆ ಸಾಕಷ್ಟು ಸಂಷಕ್ಟಗಳನ್ನು ಅನುಭವಿಸಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಏಕೆಂದರೆ ವಿಸ್ತರಣಾವಾದಿಗಳು ನಾಶವಾಗಿರುವುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ” ಎಂದು ತಿಳಿಸಿದ್ದಾರೆ.
ಭಾರತೀಯ ಸೈನಿಕರ ಧೈರ್ಯವನ್ನು ಸಾಟಿಯಿಲ್ಲದವರು ಎಂದು ಬಣ್ಣಿಸಿದ ಪ್ರಧಾನಿ ಮೋದಿ, “ಈ ಕಷ್ಟದ ಸಂದರ್ಭಗಳಲ್ಲಿ, ಸೈನಿಕರು ತಾಯ್ನಾಡಿನ ಗುರಾಣಿ. ನಿಮ್ಮ ಧೈರ್ಯ ಎಂಬುದು ನೀವೆಲ್ಲರೂ ನಿಂತಿರುವ ಎತ್ತರಕ್ಕಿಂತ ಹೆಚ್ಚಾಗಿದೆ. ನಿಮ್ಮ ತೋಳುಗಳು ನಿಮ್ಮನ್ನು ಸುತ್ತುವರೆದಿರುವ ಪರ್ವತಗಳಷ್ಟೇ ಪ್ರಬಲವಾಗಿವೆ. ನಿಮ್ಮ ಆತ್ಮವಿಶ್ವಾಸ, ನಿರ್ಣಯ ಮತ್ತು ನಂಬಿಕೆ ಇಲ್ಲಿನ ಶಿಖರಗಳಂತೆ ಸ್ಥಿರವಾಗಿದೆ” ಎಂದು ಬಣ್ಣಿಸಿದ್ದಾರೆ.
“ಭಾರತೀಯ ಸಶಸ್ತ್ರ ಪಡೆ ವಿಶ್ವದ ಎಲ್ಲರಿಗಿಂತಲೂ ಪ್ರಬಲವಾಗಿದೆ ಮತ್ತು ಉತ್ತಮವಾಗಿದೆ ಎಂದು ನೀವು ಮತ್ತೆ ಮತ್ತೆ ಸಾಬೀತುಪಡಿಸಿದ್ದೀರಿ. ಲೇಹ್ ನಿಂದ ಲಡಾಖ್ ವರೆಗೆ, ಕಾರ್ಗಿಲ್ ನಿಂದ ಸಿಯಾಚಿನ್ ವರೆಗೆ, ಎಲ್ಲಾ ಪ್ರದೇಶಗಳು ನಮ್ಮ ಸೈನ್ಯದ ಧೈರ್ಯಕ್ಕೆ ಸಾಕ್ಷಿಯಾಗಿವೆ. ನಿಮ್ಮ ಧೈರ್ಯದ ಕಥೆಗಳು ದೇಶದ ಪ್ರತಿ ಮನೆ ಮನೆಯಲ್ಲಿ ಪ್ರತಿಧ್ವನಿಸುತ್ತವೆ” ಎಂದು ಹೇಳಿದ್ದಾರೆ.
ಪ್ರಧಾನಿಯೊಂದಿಗೆ ದೇಶದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾನೆ ಕೂಡಾ ಉಪಸ್ಥಿತರಿದ್ದರು.
ಓದಿ: ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ; ಚಾರ್ಜ್ಶೀಟ್ ವಿಳಂಬ ಮಾಡಿದ ಅಧಿಕಾರಿಯ ಅಮಾನತು
ವಿಸ್ತರಣಾ ವಾದಿಗಳ ಕಾಲ ಮುಗಿದಿದೆ ಏರು ಇದ್ದರೂ ಇನ್ನೂ ಪ್ರಗತಿಯ ಈಗ ಅಂತ ಭಾಷಣ ಮಾಡಿದ್ದೀರಾ ಮೋದಿಯವರೇ ಹಾಗಾದರೆ ನಿಮ್ಮ ಆರೆಸ್ಸೆಸ್ಸಿನ ಕನಸಾದ ಅಖಂಡ ಭಾರತದ ಕಲ್ಪನೆಯೂ ಏನಾಗಬಹುದು ಅದರಲ್ಲಿ ನೇಪಾಳ ಭೂತಾನ್ ಬರ್ಮಾ ಪಾಕಿಸ್ತಾನ ಬಾಂಗ್ಲಾದೇಶ ಟಿಬೆಟ್ ಶ್ರೀಲಂಕಾ ಎಲ್ಲವೂ ಒಳಗೊಂಡಿದೆ ಅಲ್ಲ