ಹಲವು ಶಾಸಕರ ಸರಣಿ ರಾಜೀನಾಮೆ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಅಸ್ಥಿರತೆ ಕಂಡಬಂದ ಹಿನ್ನೆಲೆಯಲ್ಲಿ ಜುಲೈ 18ರ ಗುರುವಾರ ಸಿಎಂ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆಗೆ ಮುಂದಾಗುವುದಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ತಾಜ್ ವಿವಾಂತ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಮಾತನಾಡಿರುವ ಸಿದ್ದರಾಮಯ್ಯನವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಪಡೆಯಲು ಮುಂದಾಗಲಿದ್ದಾರೆ ಎಂದಿದ್ದಾರೆ.
ಕಳೆದ ಎರಡು ವಾರದ ಅವಧಿಯಲ್ಲಿ 18 ರಾಜೀನಾಮೆಗಳು ಇದುವರೆಗೂ ಸಲ್ಲಿಕೆಯಾಗಿದ್ದು ಈ ಕುರಿತು ನಾಳೆ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಕಳೆದ ಶುಕ್ರವಾರವೇ ಸಿಎಂ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆಗೆ ನಾನು ಸಿದ್ದನಿದ್ದು ಸ್ಪೀಕರ್ ರಮೇಶ್ ಕುಮಾರ್ರವರು ಸಮಯ ನೀಡಬೇಕೆಂದು ಕೋರಿದ್ದರು.
ಜೆಡಿಎಸ್ ಕಾಂಗ್ರೆಸ್ನಿಂದ ಒಟ್ಟು 16 ಜನ ಮತ್ತು ಪಕ್ಷೇತರರು ಇಬ್ಬರು ರಾಜೀನಾಮೆ ನೀಡಿದ್ದು ಒಂದು ವೇಳೆ ರಾಜೀನಾಮೆ ಅಂಗೀಕಾರವಾದಲ್ಲಿ ಈ ಸರ್ಕಾರದ ಶಾಸಕರ ಸಂಖ್ಯೆ 100ಕ್ಕೆ ಇಳಿಯಲಿದೆ. ಆಗ ಸರ್ಕಾರ ರಚಿಸಲು ಬಹುಮತ 105ಕ್ಕೆ ಇಳಿಯಲಿದ್ದು ಹಾಲಿ ಬಿಜೆಪಿಯಿಂದ 105 ಶಾಸಕರಿದ್ದು ಇಬ್ಬರು ಪಕ್ಷೇತರ ಶಾಸಕರು ಕೂಡ ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.
ಆದರೆ ಕುಮಾರಸ್ವಾಮಿಯವರು ಬಂಡಾಯವೆದ್ದಿರುವವರ ವಿಶ್ವಾಸಗಳಿಸುತ್ತೇವೆ ಎಂಬ ಭರವಸೆಯಲ್ಲಿದ್ದಾರೆ. ಸಿದ್ದರಾಮಯ್ಯನವರು ಸಹ ಅದನ್ನೇ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸ್ಪೀಕರ್ರವರು ಗುರುವಾರ ವಿಶ್ವಾಸಮತಕ್ಕೆ ಒಪ್ಪಿಕೊಂಡಲ್ಲಿ ಕುಮಾರಸ್ವಾಮಿ ಸರ್ಕಾರ ಇರುತ್ತಾ ಬೀಳುತ್ತಾ ಎಂಬುದು ಅಂದೇ ನಿರ್ಧಾರವಾಗಲಿದೆ.