ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದೆಹಲಿ ಚಲೋ’ ಹಮ್ಮಿಕೊಂಡಿರುವ ರೈತರು ಪ್ರಸ್ತುತ ಹರಿಯಾಣ-ಪಂಜಾಬ್ ರಾಜ್ಯಗಳ ಖಾನೌರಿ ಮತ್ತು ಶಂಭು ಗಡಿ ಪ್ರದೇಶಗಳಲ್ಲಿ ಇದ್ದಾರೆ. ಈ ರೈತರ ಮೇಲೆ ಹರಿಯಾಣದ ಬಿಜೆಪಿ ಸರ್ಕಾರದ ಪೊಲೀಸರು ದಾಳಿ ಮಾಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ರೈತರ ಮೇಲೆ ಅಶ್ರುವಾಯು, ಜಲಫಿರಂಗಿ, ರಬ್ಬರ್ ಬುಲೆಟ್ ಮಾತ್ರ ಪ್ರಯೋಗಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿಕೊಂಡರೆ, “ಇಲ್ಲಾ ಪೊಲೀಸರು ನಮ್ಮ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದರಿಂದಲೇ ಓರ್ವ ಯುವ ರೈತ ಮೃತಪಟ್ಟಿದ್ದಾರೆ” ಎಂದು ರೈತರು ಆರೋಪಿಸಿದ್ದಾರೆ.
ಈ ಆರೋಪ ಪ್ರತ್ಯಾರೋಪಗಳ ನಡುವೆ, ‘ಅಡುಗೆ ಪಾತ್ರೆಯೊಂದಕ್ಕೆ ದೊಡ್ಡ ಬುಲೆಟ್ ತಗುಲಿರುವ ಫೋಟೋ’ವೊಂದು ವೈರಲ್ ಆಗಿದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ‘ದೆಹಲಿ ಚಲೋ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ’ ಎಂಬರ್ಥದಲ್ಲಿ ಪೋಸ್ಟ್ಗಳನ್ನು ಮಾಡಿದ್ದಾರೆ.
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಸಮೀರ್ (@SocailSameerINC) ಎಕ್ಸ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, “ಮೋದಿಯವರು ರೈತರನ್ನು ಹೇಗೆ ಸಾಯಿಸುತ್ತಿದ್ದಾರೆ ನೋಡಿ. ರೈತರ ಹತ್ಯೆ ಮಾಡಿದವರನ್ನು ತಿರುಗಾಡಲು ಬಿಡುತ್ತೀರಾ? ಕೇವಲ ಮಾತನಾಡಿದ್ದಕ್ಕೆ ಜನರನ್ನು ಬಂಧಿಸುವ ಸರ್ಕಾರ, ಗುಂಡು ಹಾರಿಸುವವರ ಮೇಲೆ ಇಷ್ಟೊಂದು ವ್ಯಾಮೋಹ ತೋರಿಸುತ್ತಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.
‘Rants&Roasts'(@Sydusm)ಎಂಬ ಮತ್ತೊಬ್ಬರು ಎಕ್ಸ್ ಬಳಕೆದಾರರು ಕೂಡ ವೈರಲ್ ಫೋಟೋ ಹಂಚಿಕೊಂಡಿದ್ದು,” ಇದು ಸಾಂಕೇತಿಕ, ದೇಶಕ್ಕೆ ಅನ್ನ ನೀಡುವವ ಜೀವವನ್ನು ಕಸಿಯಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ : ವೈರಲ್ ಫೋಟೋದ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಗೂಗಲ್ ರಿವರ್ಸ್ ಇಮೇಜ್ನಲ್ಲಿ ನಾವು ಫೋಟೋ ಹುಡುಕಾಡಿದಾಗ ಈ ಕುರಿತ ಕೆಲ ವರದಿಗಳು ದೊರೆತಿವೆ.
24onbd.com ಎಂಬ ಬಾಂಗ್ಲಾ ಸುದ್ದಿ ವೆಬ್ಸೈಟ್ವೊಂದು ಫೆಬ್ರವರಿ 16, 2024ರಂದು ವೈರಲ್ ಫೋಟೋ ಜೊತೆಗೆ ಸುದ್ದಿ ಪ್ರಕಟಿಸಿದ್ದು, ಇದು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಯಾದ ಟೆಕ್ನಾಫ್ನ ಶಾಹಪರಿರ್ ದ್ವೀಪದಲ್ಲಿ ನಡೆದ ಘಟನೆಯದ್ದು ಎಂದು ಹೇಳಿದೆ. “ಮ್ಯಾನ್ಮಾರ್ನ ಗುಂಡುಗಳು ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಅಡುಗೆ ಮನೆಯ ಮುಚ್ಚಳದ ಮೇಲೆ ಬಿದ್ದಿದೆ” ಎಂದು ತಿಳಿಸಿದೆ.
dhakamail.com ಎಂಬ ಮತ್ತೊಂದು ಸುದ್ದಿ ವೆಬ್ಸೈಟ್ 7 ಫೆಬ್ರವರಿ 2024ರಂದು ವೈರಲ್ ಫೋಟೋ ಸಹಿತ ಸುದ್ದಿ ಪ್ರಕಟಿಸಿದ್ದು, “ಮ್ಯಾನ್ಮಾರ್ನ ಬಂಡುಕೋರ ಗುಂಪುಗಳು ಮತ್ತು ಮಿಲಿಟರಿ ಆಡಳಿತಗಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿವೆ. ಮ್ಯಾನ್ಮಾರ್ ನಿಂದ ನಿರಂತರ ಶೆಲ್ ಮತ್ತು ಮಾರ್ಟರ್ ಶೆಲ್ ದಾಳಿಯಿಂದಾಗಿ ಬಾಂಗ್ಲಾದೇಶದ ಗಡಿಯಲ್ಲಿ ದಿನದಿಂದ ದಿನಕ್ಕೆ ಹಾನಿ ಹೆಚ್ಚುತ್ತಿದೆ. ಇದು ಬಾಂಗ್ಲಾದೇಶ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ” ಎಂದು ವರದಿ ಮಾಡಿದೆ.
KannadaFactcheck.Com ಕೂಡ ವೈರಲ್ ಫೋಟೋ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದು, ಇದು ಬಾಂಗ್ಲಾದೇಶದ ಗಡಿ ಪದೇಶದ ಪೋಟೋ ಎಂದು ತಿಳಿಸಿದೆ.
ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಅಡುಗೆ ಪಾತ್ರೆಗೆ ಬುಲೆಟ್ ತಗುಲಿರುವ ಫೋಟೋ ದೆಹಲಿಯ ರೈತ ಹೋರಾಟದ್ದಲ್ಲ. ಮ್ಯಾನ್ಮಾರ್ನಲ್ಲಿ ಬಂಡುಕೋರರ ಗುಂಪು ಮತ್ತು ಸೇನೆಯ ನಡುವಿನ ಸಂಘರ್ಷದ ವೇಳೆ ಮ್ಯಾನ್ಮಾರ್ ಕಡೆಯಿಂದ ಬಂದ ಬುಲೆಟ್ ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಅಡುಗೆ ಪಾತ್ರೆಯ ಮುಚ್ಚಳದ ಮೇಲೆ ಬಿದ್ದಿರುವುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Fact Check: ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?