HomeದಿಟನಾಗರFact Check: 'ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ' ಎಂದು ಗ್ರ್ಯಾಂಡ್ ಮುಫ್ತಿ ಎಪಿ...

Fact Check: ‘ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ’ ಎಂದು ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್ ಹೇಳಿದ್ರಾ?

- Advertisement -
- Advertisement -

ಭಾರತೀಯ ಮುಸ್ಲಿಮರ ಗ್ರ್ಯಾಂಡ್‌ ಮುಫ್ತಿ, ಕೇರಳದ ಕಲ್ಲಿಕೋಟೆಯ ಮರ್ಕಝ್ ವಿದ್ಯಾ ಸಂಸ್ಥೆಗಳ ಸ್ಥಾಪಕ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅಥವಾ ಎಪಿ ಉಸ್ತಾದ್ (ಶೈಖ್‌ ಅಬೂಬಕ್ಕರ್ ಅಹ್ಮದ್ ) ಅವರು “ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ” ಎಂದು ಹೇಳಿರುವುದಾಗಿ ಸುದ್ದಿಯೊಂದು ಹಬ್ಬಿದೆ.

ಇಂಗ್ಲಿಷ್ ಪತ್ರಿಕೆಯೊಂದು ಈ ಸುದ್ದಿಯನ್ನು ಪ್ರಕಟಿಸಿತ್ತು. ಅದನ್ನು ನೋಡಿ ಕನ್ನಡ ಪತ್ರಿಕೆಯೊಂದು ತನ್ನ ವೆಬ್‌ಸೈಟ್‌ನಲ್ಲಿ “ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಭಾವಿಸಬೇಡಿ. ಬಾಬರಿ ಮಸೀದಿಯ ಜಾಗವೂ ಮರಳಿ ಮುಸ್ಲಿಮರ ಕೈ ಸೇರುವ ದಿನವೂ ಬರಲಿದೆ: ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್” ಎಂದು
ಸುದ್ದಿ ಮಾಡಿತ್ತು. ಅಲ್ಲದೆ, ಈ ಕುರಿತು ಪೋಸ್ಟರ್ ಕೂಡ ಹರಿ ಬಿಟ್ಟಿತ್ತು.

ಈ ಸುದ್ದಿಯನ್ನು ಗಮನಿಸಿದ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, “ನಮ್ಮ ನಾಯಕ ಆ ರೀತಿ ಹೇಳಿಯೇ ಇಲ್ಲ, ಮಾಧ್ಯಮಗಳು ಸುಳ್ಳು ವರದಿ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳ ಸುದ್ದಿ ಒಂದು ರೀತಿಯಲ್ಲಿ ಕೋಮು ಚರ್ಚೆಗೆ ತಿರುಗಿದೆ. ಹಿಂದೂ ಹೆಸರಿನ ಹಲವು ಬಳಕೆದಾರರು ಅಬೂಬಕ್ಕರ್ ಮುಸ್ಲಿಯಾರ್ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿರುದ್ದ ಕಿಡಿಕಾರಿದ್ದಾರೆ. ಮಾಧ್ಯಮಗಳ ಸುದ್ದಿ ಹಿಂದೂ-ಮುಸ್ಲಿಂ ಕೋಮು ವೈಷಮ್ಯದ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಫ್ಯಾಕ್ಟ್‌ ಚೆಕ್‌ : ನಾನುಗೌರಿ.ಕಾಂ ಮೇಲಿನ ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ. ಇದಕ್ಕಾಗಿ ನಾವು ಮೊದಲು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಮರ್ಕಝ್ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ ಪರಿಶೀಲನೆ ಮಾಡಿದ್ದೇವೆ. ಯೂಟ್ಯೂಬ್‌ ಚಾನೆಲ್‌ನ ಲೈವ್ ವಿಭಾಗದಲ್ಲಿ ಅವರು ಇತ್ತೀಚೆಗೆ ಮಾಡಿರುವ ಭಾಷಣದ ವಿಡಿಯೋ ದೊರೆತಿದೆ.

‘Markaz Conference-2024’ ಎಂಬ ಶೀರ್ಷಿಕೆಯ ಕಾರ್ಯಕ್ರಮದ 6 ಗಂಟೆ 7 ನಿಮಿಷ 46 ಸೆಕೆಂಡ್‌ನ ಸುದೀರ್ಘ ವಿಡಿಯೋದಲ್ಲಿ 4 ಗಂಟೆ 3 ನಿಮಿಷ 28 ಸೆಕೆಂಡ್‌ನಿಂದ 4 ಗಂಟೆ 6 ನಿಮಿಷ 45 ಸೆಕೆಂಡ್‌ನ ನಡುವೆ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಕೋಮುವಾದ, ಮಂದಿರ-ಮಸೀದಿ ವಿವಾದ ಸೇರಿದಂತೆ ದೇಶದ ಪ್ರಸ್ತುತ ಸನ್ನಿವೇಶಗಳ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು “ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ” ಎಂದು ಹೇಳಿರುವುದು ಕಂಡು ಬಂದಿಲ್ಲ.

ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಭಾಷಣದ ಪ್ರಮುಖ ಅಂಶ ಹೀಗಿದೆ..”ನಮ್ಮ(ಮುಸ್ಲಿಮರ) ಜಿಹಾದ್ ನಾಲಗೆಯಿಂದ ಮಾತ್ರ, ಕತ್ತಿಯಿಂದ ಅಲ್ಲ. ನಾವು ಕೋಮುವಾದಿಗಳು ಅಲ್ಲ. ಇತ್ತೀಚೆಗೆ ಮಸೀದಿಗಳನ್ನು ಅಗೆದು ಮೂರ್ತಿಗಳಿವೆಯಾ? ಎಂದು ನೋಡಲಾಗ್ತಿದೆ. ಇವುಗಳಿಂದ ಮುಸ್ಲಿಮರು ಪ್ರಚೋದನೆಗೆ ಒಳಗಾಗುತ್ತಾರೆ ಎಂದು ಭಾವಿಸಬೇಡಿ. ಮುಸ್ಲಿಮರು, ವಿಶೇಷವಾಗಿ ಸುನ್ನೀ ಮುಸಲ್ಮಾನರು ಪ್ರಚೋದನೆಗೆ ಒಳಗಾಗುವವರು ಅಲ್ಲ. ಪ್ರಧಾನಿ ಸೇರಿದಂತೆ ಮಂತ್ರಿಗಳಿಗೆ ನಾನು ಇದನ್ನೇ ಹೇಳಲು ಇಚ್ಚಿಸುತ್ತೇನೆ. ಕೆಟ್ಟ ವಿಷಯಗಳನ್ನು ತಲೆಗೆ ತುಂಬಿ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಭಾವಿಸಬೇಡಿ. ನಾವು ಅತ್ಯಂತ ತಾಳ್ಮೆ ಉಳ್ಳವರು. ಹಾಗಂತ ಹೆದರಿದ್ದೇವೆ ಎಂದು ಭಾವಿಸಬೇಡಿ. ನಾಡಿನಲ್ಲಿಉದ್ವಿಗ್ನತೆ ಸೃಷ್ಟಿಸುವವರು ನಾವಲ್ಲ. ಅದಕ್ಕೆ ಅವಕಾಶವೂ ನೀಡುವುದಿಲ್ಲ. ಇಸ್ಲಾಂ ಸ್ವಾತಂತ್ರ್ಯದ ಮತ್ತು ಕೋಮುವಾದ ಇಲ್ಲದ ಧರ್ಮವಾಗಿದೆ. ಇಷ್ಟ ಇದ್ದವರಿಗೆ ಇದನ್ನು ಸ್ವೀಕರಿಸಬಹುದು.”

ಮಲಯಾಳಂ ಭಾಷೆಯ ಈ ಭಾಷಣವನ್ನು ನೀವು ಅಲಿಸಬಹುದು, ಯೂಟ್ಯೂಬ್ ಲಿಂಕ್‌ ಇಲ್ಲಿದೆ.

ಮರ್ಕಝ್ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 3, 2024ರಂದು ನಡೆದ ಖತ್ಮುಲ್ ಬುಖಾರಿ ಮತ್ತು ಪದವಿ ಪ್ರಧಾನ ಸಮಾರಂಭದಲ್ಲಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಭಾಷಣ ಮಾಡಿದ್ದಾರೆ. ಮುಸ್ಲಿಮರ ಪ್ರಮುಖ ಹದೀಸ್ ಗ್ರಂಥ ಸ್ವಹೀಹುಲ್ ಬುಖಾರಿ ತರಗತಿಯ ಸಮಾಪ್ತಿ ಮತ್ತು ಮರ್ಕಝ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಖಾಫಿ ಧಾರ್ಮಿಕ ಪದವಿ ಪ್ರಧಾನ ಮಾಡಿದ ಕಾರ್ಯಕ್ರಮ ಇದಾಗಿತ್ತು.

ನಾವು ನಡೆಸಿದ ಪರಿಶೀಲನೆಯಲ್ಲಿ “ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ” ಎಂದು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿರುವುದಾಗಿ ಮಾಧ್ಯಮಗಳು ಪ್ರಕಟಿಸಿದ ಸುದ್ದಿ ಸುಳ್ಳು ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ : Fact Check: ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿಡಲು ಸಾಧ್ಯ ಎಂದು ನಕಲಿ ಆನೆಯ ವಿಡಿಯೋ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...